×
Ad

ದ.ಕ.ಜಿ.ಪಂ- ತಾ.ಪಂ. ಚುನಾವಣೆ ಉಸ್ತುವಾರಿ ಸಚಿವರಿಂದ ಪ್ರಣಾಳಿಕೆ ಬಿಡುಗಡೆ

Update: 2016-02-15 16:04 IST

ಮಂಗಳೂರು, ಫೆ. 15: ದ.ಕ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಪ್ರಚಾರಕ್ಕೆ ಇನ್ನೆರಡು ದಿನಗಳಲ್ಲಿ ತೆರೆ ಬೀಳಲಿರುವಂತೆಯೇ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ರಮಾನಾಥ ರೈಯವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾನತಾಡಿದ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಈಗಾಗಲೇ ಸರಕಾರದ ಮೂರು ವರ್ಷಗಳ ಸಾಧನೆ ಹಾಗೂ ಮುಂದಿನ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಈಗಾಗಲೇ ಅತ್ಯುತ್ತಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಇದೀಗ ಜಿಲ್ಲೆಗೆ ಪೂರಕವಾಗಿ ಭವಿಷ್ಯದ ಅಭಿವೃದ್ದಿ ಕಾರ್ಯಕ್ರಮಗಳನ್ನು ಒಳಗೊಂಡ ಪ್ರಣಾಳಿಕೆ ಇದಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ದ.ಕ. ಜಿ.ಪಂ. ಹಾಗೂ ತಾಲೂಕು ಪಂಚಾಯತ್‌ನಲ್ಲಿ ಆಡಳಿತ ನಡೆಸಿರುವ ಬಿಜೆಪಿಯಿಂದ ಅಭಿವೃದ್ಧಿ ಶೂನ್ಯ ಎಂದು ಹೇಳಿದ ಅವರು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಏಳು ಮಂದಿ ಶಾಸಕರು ಹಲವಾರು ಅಭಿವೃದ್ದಿ ಕಾರ್ಯಗಳನ್ನು ನಡೆಸಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದುರ್ಬಲ ವರ್ಗದವರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ರೈ ಹೇಳಿದರು.

ಚುನಾವಣೆಯಲ್ಲಿ ಬಹುತೇಕ ಕಡೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇರುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈ, 2010ರಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಸರಕಾರ ಇದ್ದಾಗ ಕುಮ್ಮಿ ಯನ್ನು ಸಾರ್ವಜನಿಕ ಉದ್ದೇಶಕ್ಕೆ ಹೊರತುಪಡಿಸಿ ಬೇರೆ ಯಾವುದಕ್ಕೂ ನೀಡಬಾರದು ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಕಾಂಗ್ರೆಸ್ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ಕುಮ್ಮಿ ಹಕ್ಕನ್ನು ಜಾರಿಗೊಳಿಸಲಿದೆ ಎಂದರು.

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನಡೆಸಲಾಗುತ್ತಿರುವ ನೋಟಾ ಅಭಿಯಾನದ ಪ್ರಶ್ನೆಗೆ, ಜಿಲ್ಲಾ ಪಂಚಾಯತ್ ಅಭಿವೃದ್ಧಿ ದೃಷ್ಟಿಯಿಂದ ಜನರು ಮತ ಚಲಾಯಿಸಬೆೀಕಾಗಿದೆ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಹಿರಿಯ ಮಾಜಿ ಸಚಿವ ಬಿ.ಎ. ಮೊಯ್ದಿನ್, ಶಾಸಕರಾದ ಐವನ್ ಡಿಸೋಜಾ, ನಾಯಕರಾದ ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ, ಕೆ.ಎಸ್.ಮುಹಮ್ಮದ್ ಮಸೂದ್, ಸುರೇಶ್ ಬಳ್ಳಾಲ್, ಪದ್ಮನಾಭ ನರಿಂಗಾನ, ಅಶ್ರಫ್, ಮಿಥುನ್ ರೈ, ಜಿ.ಎ. ಬಾವಾ, ಪಿ.ವಿ. ಮೋಹನ್, ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್, ಅಬ್ದುಲ್ ರವೂಫ್ ಮೊದಲಾದವರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯಾಂಶಗಳು

* ಕುಮ್ಕಿ ಜಮೀನಿಗೆ ಸಂಬಂಧಪಟ್ಟಂತೆ ಕಾನೂನಿನ ಪರಿಧಿಯಲ್ಲಿ ಪರಿಹಾರ ಒದಗಿಸುವುದು.

* ನಿವೇಶನ ರಹಿತರಿಗೆ ನಿವೇಶ ನೀಡಲು ಎಲ್ಲಾ ಗ್ರಾ.ಪಂ.ಗಳಲ್ಲಿ ಕನಿಷ್ಠ 5 ಎಕರೆ ಜಮೀನು ಕಾದಿರಿಸುವುದು.

* ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ್ನು ಎಲ್ಲಾ ತಾಲೂಕುಗಳಿಗೆ ವಸ್ತರಿಸುವುದು.

* ದಕ್ಷಿಣ ಕನ್ನಡವನ್ನು ಸೌರಶಕ್ತಿಯುಕ್ತ ಜಿಲ್ಲೆಯನ್ನಾಗಿಸುವುದು.

* ಗ್ರಾಮಗಳ ತ್ಯಾಜ್ಯ ವಿಲೇಗೆ ಶಾಶ್ವತ ಪರಿಹಾರಕ್ಕಾಗಿ ‘ಪರಿಸರ ಸ್ನೇಹಿ ನೂತನ ತಂತ್ರಜ್ಞಾನ’ ಅಳವಡಿಕೆ.

* ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.

* ಗ್ರಾಮೀಣ ಕ್ರೀಡೆಗಳ ಉಳಿವಿಗೆ ವಿಶೇಷ ಕ್ರಮ.

*ಸಾರ್ವಜನಿಕ ಸ್ಮಶಾನ, ದಫನ ಭೂಮಿ ಇಲ್ಲದಿರುವ ಪ್ರದೇಶಗಳಲ್ಲಿ ಜಮೀನು ಕಾದಿರಿಸುವುದು- ಅಭಿವೃದ್ಧಿ ಪಡಿಸುವುದು.

* ಕ್ಯಾಂಪಸ್ ಸೆಲೆಕ್ಷನ್ ಮಾದರಿಯನ್ನು ಗ್ರಾ.ಪಂ. ಮೂಲಕ ನಡೆಸಿ ಗ್ರಾಮೀಣ ನಿರುದ್ಯೋಗ ನಿವಾರಣೆಗೆ ಕ್ರಮ.

*ಪ್ರತಿ ಗ್ರಾಮದ ಕೇಂದ್ರ ಸ್ಥಾನದಲ್ಲಿ ಮಾದರಿ ಸಾರ್ವಜನಿಕ ಶೌಚಾಲಯ ನಿರ್ಮಾಣ.

* ತ್ರಿಸ್ತರ ಪಂಚಾಯತ್ ಸಂಸ್ಥೆಗಳನ್ನು ಸ್ವಾವಲಂಬಿ ಸಂಸ್ಥೆಗಳನಾಗಿಸಲು ಕ್ರಮ.

* ಪ್ರವಾಸೋದ್ಯಮಕ್ಕೆ ಆದ್ಯತೆ- ಉದ್ಯೋಗ ಸೃಷ್ಟಿಗೆ ವಿಶೇಷ ಯೋಜನೆ.

* ಎಂಡೋಸಲ್ಫಾನ್ ಪೀಡಿತರಿಗೆ ಪರಿಹಾರದ ಜತೆ ನಿರ್ವಸಿತರಿಗೆ ಕಾಲನಿ ರಚನೆ.

* ಪ್ರತಿಯೊಂದು ಜಿ.ಬಪಂ. ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಳೀಯ ಉತ್ಪನ್ನ ಉತ್ಪಾದಕ ಕೇಂದ್ರಗಳ ಸ್ಥಾಪನೆಗೆ ಬೆಂಬಲ ಮತ್ತು ರಬ್ಬರ್, ಅಡಿಕೆ, ಗೇರುಬೀಜ, ತೆಂಗು, ಮೀನು ಹಾಗೂ ಹಣ್ಣುಗಳ ವೌಲ್ಯವರ್ಧಿತ ಉತ್ಪನ್ನ ಕೇಂದ್ರಗಳ ಸ್ಥಾಪನೆಗೆ ಕ್ರಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News