ಸುಳ್ಯ: ರಾಜ್ಯಮಟ್ಟದ ಸಾಂಸ್ಕೃತಿಕ ಸಮಾರೋಪ ನವೀನ್ ಪಡೀಲ್ರಿಗೆ ರಂಗಮನೆ ಗೌರವ ಸಮ್ಮಾನ
ಸುಳ್ಯ : ರಂಗಮನೆ ಸಾಂಸ್ಕೃತಿಕ ಮನಸ್ಸು ಕಟ್ಟುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಇದಕ್ಕೆ ಕಲಾ ಪೋಷಕರ ಬೆಂಬಲ ಅಗತ್ಯ. ಮುಂದಿನ ಪೀಳಿಗೆ ಇಂತಹ ಸಾಂಸ್ಕೃತಿಕ ಮನಸ್ಸನ್ನು ಕಟ್ಟುವ ಕೆಲಸಕ್ಕೆ ಇಂತಹ ಕಾರ್ಯಕ್ರಮಗಳು ಇಡೀ ರಾಜ್ಯದಲ್ಲೇ ಮಾದರಿಯೂ, ದಾರಿದೀಪವೂ ಆಗಿದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ.ಮೋಹನ ಆಳ್ವ ಹೇಳಿದರು.
ಅವರು ಸುಳ್ಯ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಂಗಮನೆ ಗೌರವ ಸಮ್ಮಾನವನ್ನು ಚಿತ್ರರಂಗದ ಮೇರುನಟ ನವೀನ್ ಡಿ.ಪಡೀಲ್ ಅವರಿಗೆ ನೀಡಿ ಗೌರವಿಸಲಾಯಿತು. ಆಳ್ವಾಸ್ ನುಡಿಸಿರಿ ಸುಳ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಬಿ.ದಿವಾಕರ ರೈ ಮಾತನಾಡಿ ರಂಗಮನೆಯ ಸಾಂಸ್ಕೃತಿಕ ಕಾರ್ಯಕ್ರಮ ಸದಾ ಮುಂದುವರಿಯಲು ಶಾಶ್ವತ ನಿಧಿ ಸ್ಥಾಪನೆ ಆಗಬೇಕು ಎಂದರು. ಮುಖ್ಯ ಅತಿಥಿಯಾಗಿ ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಸಂಚಾಲಕ ಸುಧಾಕರ ಕಾಮತ್, ನಾಟಕಕಾರ ಶಶಿರಾಜ ರಾವ್ ಕಾವೂರು, ಹಿರಿಯ ಯಕ್ಷ ಕಲಾವಿದ ಸುಜನಾ ಉಪಸ್ಥಿತರಿದ್ದರು. ರಂಗಮನೆ ರೂವಾರಿ ಜೀವನ್ರಾಂ ಸುಳ್ಯ ಸ್ವಾಗತಿಸಿ, ಡಾಮೌಲ್ಯ ಜೀವನ್ ಸಮ್ಮಾನ ಪತ್ರ ವಾಚಿಸಿದರು. ಡಾ ವೀಣಾ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಕೆ.ಕೃಷ್ಣಮೂರ್ತಿ ವಂದಿಸಿದರು.