×
Ad

ಪುತ್ತೂರು: ರಾಜ್ಯ ಸರ್ಕಾರದ ಕೌಂಟ್‌ಡೌನ್ ಆರಂಭಗೊಂಡಿದೆ-ಸಂಜೀವ ಮಠಂದೂರು

Update: 2016-02-17 18:33 IST

ಪುತ್ತೂರು: ಅನ್ನಭಾಗ್ಯ ನೀಡುವುದಾಗಿ ಬಡವರಿಗೆ ಬಿಪಿಎಲ್ ಕಾರ್ಡ್ ನೀಡಿದ್ದ ರಾಜ್ಯ ಸರ್ಕಾರ ಇದೀಗ ದಿನವೊಂದಕ್ಕೆ 350 ಬಡವರ ಕಾರ್ಡ್‌ಗಳನ್ನು ರದ್ದು ಪಡಿಸುತ್ತಾ ವಂಚನೆ ನಡೆಸುತ್ತಿದೆ. ಕುಮ್ಕಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರು ಸರ್ಕಾರದ ಧೋರಣೆಯಿಂದಾಗಿ ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್ ದುರಾಡಳಿತದಿಂದ ಜನರು ರೋಸಿ ಹೋಗಿದ್ದು ವಿಧಾನ ಸಭಾ ಉಪಚುನಾವಣೆಯಲ್ಲಿ ಬಿಜೆಪಿ 2 ಸ್ಥಾನವನ್ನು ಗೆದ್ದಿರುವುದು ಬಿಜೆಪಿ ಅಲೆಗೆ ಹೊಸ ದಿಕ್ಕು ನೀಡಿದೆ. ರಾಜ್ಯ ಸರ್ಕಾರದ ಕೌಂಟ್‌ಡೌನ್ ಆರಂಭಗೊಂಡಿದೆ. ತಾ.ಪಂ. ಮತ್ತು ಜಿ.ಪಂ ಚುನಾವಣೆಯಲ್ಲಿ ಜನತೆ ಸರ್ಕಾರಕ್ಕೆ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಸಂಜೀವ ಮಠಂದೂರು ತಿಳಿಸಿದ್ದಾರೆ. ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ. ದಿನವೊಂದಕ್ಕೆ 350ರಷ್ಟು ಕಾರ್ಡ್ ರದ್ದು ಮಾಡಬೇಕೆಂದು ಸರ್ಕಾರ ತಹಸಿಲ್ದಾರ್‌ಗೆ ಅದೇಶಿಸಿದ್ದು, ಬಡವರಿಗೆ ಸಿಗುವ ಉಚಿತ ಅಕ್ಕಿ ಭಾಗ್ಯವನ್ನು ಕಸಿಯಲಾಗುತ್ತಿದೆ. ಕುಮ್ಕಿಯಲ್ಲಿ ಬಹಳಷ್ಟು ಕೂಲಿ ಕಾರ್ಮಿಕರು ಮನೆ ಮಾಡಿದ್ದಾರೆ. ಅವರೆಲ್ಲಾ ಅತಂತ್ರಸ್ಥಿತಿ ಎದುರಿಸುತ್ತಿದ್ದಾರೆ. ವಿದ್ಯುತ್ ಕಣ್ಣು ಮುಚ್ಚಾಲೆ, 9/11 ನಿಯಮಾವಳಿ, ಕೃಷಿ ಸಮಸ್ಯೆ, ರೈತರ ಆತ್ಮಹತ್ಯೆ ಕಾಂಗ್ರೆಸ್ ವಿರೋಧಿ ಅಲೆ ಸೃಷ್ಟಿಸಿದೆ ಎಂದು ಹೇಳಿದರು.

 ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾದ ಸುವರ್ಣ ಗ್ರಾಮ ಯೋಜನೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇಮಕ, ಪಂಚಾಯತ್ ಸದಸ್ಯರ ಗೌರವಧನ ಹೆಚ್ಚಳ, ತಾಪಂಗೆ 1 ಕೋಟಿ ರೂ, ಜಿಪಂಗೆ 5 ಕೋಟಿ ರೂ. ವಿಶೇಷ ಅನುದಾನ ಇವೆಲ್ಲದರ ಪರಿಣಾಮವಾಗಿ ಜನ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಜೊತೆಗೆ ಬಿಜೆಪಿ ಆಡಳಿತದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮಾಡಿರುವ ಸಾಧನೆ ಪಕ್ಷದ ಗೆಲುವಿಗೆ ಕಾರಣವಾಗಲಿದೆ ಎಂದರು. ಪುತ್ತೂರು ತಾಲೂಕಿನಲ್ಲಿ 94 ಸಿ ಅಡಿಯಲ್ಲಿ 9000 ಅರ್ಜಿ ಬಂದಿದ್ದು, ಈತನಕ ಕೇವಲ 1,600 ಜನರಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ. ಮರಳು ಲಭ್ಯವಿಲ್ಲದೆ ಸಾಮಾನ್ಯ ಮನೆ, ಕಟ್ಟಡ ನಿರ್ಮಾಣದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಶ್ರಯ ಮನೆಗಳು ಮಂಜೂರಾಗುತ್ತಿಲ್ಲ. ವಿದ್ಯುತ್ ಕಣ್ಣು ಮುಚ್ಚಾಲೆಯಾಡುತ್ತಿದೆ. ದಾಖಲೆಯ ರೈತರ ಆತ್ಮಹತ್ಯೆಗಳು ನಡೆದಿದೆ. ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆಲ್ಲಾ ರಾಜ್ಯ ಸರ್ಕಾರವೇ ಹೊಣೆಯಾಗಿದೆ ಎಂದು ಅವರು ಆರೋಪಿಸಿದರು. ಎತ್ತಿನ ಹೊಳೆ ಯೋಜನೆಗೆ ಜಿಲ್ಲಾ ಬಿಜೆಪಿಯ ಪೂರ್ಣ ವಿರೊಧವಿದೆ. ನಮ್ಮ ಪ್ರಣಾಳಿಕೆಯಲ್ಲೂ ನೆಲ, ಜಲ, ಪರಿಸರಕ್ಕೆ ವಿರುದ್ಧ ಯೋಜನೆಗಳ ವಿರುದ್ಧ ಹೋರಾಟಕ್ಕೆ ಸಿದ್ಧ ಎಂದು ತಿಳಿಸಲಾಗಿದೆ.

ಜಿಲ್ಲೆಗೆ ಅನ್ಯಾಯವಾಗುವ ಯಾವುದೇ ಯೋಜನೆ ತರಲು ಬಿಡುವುದಿಲ್ಲ ಎಂದ ಅವರು ಈ ಬಗ್ಗೆ ಇತ್ತೀಚೆಗೆ ಜಿಲ್ಲೆಗೆ ಆಮಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸಭೆಯಲ್ಲಿ ತಿಳಿಸಿದ್ದಾರೆ. ರಾಜ್ಯದ ಪ್ರಣಾಳಿಕೆಯಲ್ಲಿ ಸಂಕಲ್ಪವಿದೆ. ಅದು ರಾಜ್ಯದ ವಿಚಾರ ಎಂದು ಹೇಳಿದರು. ಎತ್ತಿನ ಹೊಳೆ ಯೋಜನೆಯ ಕುರಿತು ಜಿಲ್ಲೆಯಿಂದ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ವೇಳೆ ರಾಜ್ಯ ಸಮಿತಿಯ ಅನುಮತಿ ಪಡೆದಿದ್ದೆವು. ಇದು ಪಕ್ಷದ ವಿಚಾರವಾಗಿರುವುದರಿಂದ ಡಿ.ವಿ.ಸದಾನಂದ ಗೌಡರಲ್ಲಿ ಹೇಳುವ ಪ್ರಮೇಯವಿರಲಿಲ್ಲ. ಈ ಬಗ್ಗೆ ಡಿ.ವಿ ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿರುತ್ತಾರೆ ಎಂಬುದು ತನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಹೇಳಿದರು. ಮಲ್ಲಿಕಾ ಪ್ರಸಾದ್ ಶಾಸಕಿಯಾಗಿದ್ದ ಸಂದರ್ಭ ತಲೆಎತ್ತಿದ ಕಟ್ಟಡಗಳಿಗೆ ಈಗಿನ ಶಾಸಕರು ಪೈಂಟ್ ಹಾಕಿ ಉದ್ಘಾಟನೆ ಮಾಡುತ್ತಿದ್ದಾರೆ.

ಮಿನಿವಿಧಾನ ಸೌಧ, ಅಗ್ನಿಶಾಮಕ ದಳದ ಕಟ್ಟಡ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ, ಮೊರಾರ್ಜಿ ದೇಸಾಯಿ ಶಾಲೆ ಇದಕ್ಕೆ ನಿದರ್ಶನ. ಮಾತ್ರವಲ್ಲ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಮಲ್ಲಿಕಾ ಪ್ರಸಾದ್ ಅವರು ಶಾಸಕಿಯಾಗಿದ್ದ ಸಂದರ್ಭದಲ್ಲಿ ಮಂಜೂರುಗೊಂಡಿತ್ತು. ಮಲ್ಲಿಕಾ ಪ್ರಸಾದ್ ಅವರ ಕೆಲಸ ಮಾತನಾಡುತ್ತಿದ್ದರೆ ಕಾಂಗ್ರೆಸ್ ಶಾಸಕಿಯವರ ಮಾತೇ ಕೆಲಸವಾಗುತ್ತಿದೆ ಹೊರತು ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಲೇವಡಿ ಮಾಡಿದರು.
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಮಹಿಳಾ ಮೋರ್ಚಾದ ಪ್ರ.ಕಾರ್ಯದರ್ಶಿ ಜಯಂತಿ ನಾಯಕ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬೂಡಿಯಾರ್ ರಾಧಾಕೃಷ್ಣ ರೈ, ರಾಜ್ಯ ರೈತ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಆಳ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News