ಕುಡಿಯುವ ನೀರಿಗಾಗಿ ಪರದಾಟ
ಕಡಬ, ಫೆ.22. ಐತ್ತೂರು ಗ್ರಾಮದ ಶಿವಾಜಿನಗರ ನಿವಾಸಿಗಳು ಕುಡಿಯಲು ನೀರಿಲ್ಲ ಎಂದು ಆರೋಪಿಸಿ ಪಂಚಾಯತ್ ಕಛೇರಿಗೆ ತೆರಳಿದ ಘಟನೆ ಸೋಮವಾರ ನಡೆಯಿತು.
ಸ್ಥಳೀಯ ಬಂಟ್ರ ಪಂಚಾಯತ್ ಕೆಲವು ವರ್ಷಗಳಿಂದ ಶಿವಾಜಿನಗರ ಪರಿಸರಕ್ಕೆ ಪೈಪ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರು. ಆದರೆ ವಿದ್ಯುತ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮರ್ಧಾಳ ಪಂಚಾಯತ್ ನೀರು ಬಿಡುವುದನ್ನು ನಿಲ್ಲಿಸಿದ್ದು, ಇದರಿಂದಾಗಿ ಪಂಚಾಯತ್ ವ್ಯಾಪ್ತಿಯ ಸುಮಾರು 30 ಮನೆಯವರು ಕಳೆದ 14 ದಿನಗಳಿಂದ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಶಿವಾಜಿನಗರ ವ್ಯಾಪ್ತಿಯಲ್ಲಿ ಸರಕಾರಿ ಕೊಳವೆ ಬಾವಿಯೊಂದನ್ನು ಬಿಟ್ಟರೆ ಎಲ್ಲಾ ಮನೆಗಳವರು ನಲ್ಲಿ ನೀರನ್ನೇ ಉಪಯೋಗಿಸುತ್ತಿದ್ದಾರೆ.
ಗ್ರಾಮಸ್ಥರು ಪಂಚಾಯತ್ಗೆ ಆಗಮಿಸಿದ ವೇಳೆ ಅಲ್ಲಿ ಅಧ್ಯಕ್ಷರು ಸೇರಿದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಯಾರೂ ಇಲ್ಲದಿದ್ದರಿಂದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಪತ್ರವನ್ನು ಗುಮಾಸ್ತ ಶಿಬು ಎಂಬವರು ಸ್ವೀಕರಿಸಿದರು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಪ್ರತಿಭಟನೆ ಮಾಡಲಾಗುವುದೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.