ಶ್ರೀ ಸಾಮಾನ್ಯನ ಆಶೋತ್ತರಗಳ ಪ್ರತಿಬಿಂಬ: ಸುರೇಶ್ ಪ್ರಭು
ಹೊಸದಿಲ್ಲಿ, ಫೆ.25: ರೈಲ್ವೆ ಸಚಿವ ಸುರೇಶ್ಪ್ರಭು ಗುರುವಾರ ಲೋಕ ಸಭೆಯಲ್ಲಿ ತನ್ನ ದ್ವಿತೀಯ ರೈಲ್ವೆ ಬಜೆಟ್ ಮಂಡಿಸುತ್ತಾ, ಪ್ರಸಕ್ತ ಬಜೆಟ್ ಶ್ರೀಸಾಮಾನ್ಯನ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತವೆ ಹೇಳಿದರು.ರಿಸ್ಟ್ರಕ್ಚರ್ (ಪುನಾರಚನೆ),ರಿಆರ್ಗನೈಸ್ (ಪುನರ್ಸಂಘಟನೆ) ಹಾಗೂ ಪುನರ್ಶಕ್ತೀಕರಣ (ರಿಜುವಿನೇಟ್) ಹೀಗೆ ಮೂರು ‘ಆರ್’ಗಳು ಬಜೆಟ್ನ ಮೂರು ಸ್ತಂಭಗಳಾಗಿವೆಯೆಂದು ಪ್ರಭು ತಿಳಿಸಿದ್ದಾರೆ.
‘‘ಇದು ನನ್ನ ಬಜೆಟ್ ಅಲ್ಲ. ಈ ಬಜೆಟ್ ಭಾರತದ ಜನತೆಯ ಆಶೋತ್ತರಗಳನ್ನು ಬಿಂಬಿಸುತ್ತದೆ ಎಂದು ಪ್ರಭು ಲೋಕಸಭೆಗೆ ತಿಳಿಸಿದರು. ಬಜೆಟ್ನಲ್ಲಿ ಸರಕಾರದ ದೂರದೃಷ್ಟಿಯ ಬಗ್ಗೆ ಬೆಳಕು ಚೆಲ್ಲುವುದೆಂದರು. ರೈಲ್ವೆಯನ್ನು ಭಾರತದ ಪ್ರಗತಿ ಹಾಗೂ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿ ಮಾಡುವ ಗುರಿ ನನ್ನದು. ನಾವು ಭಾರತೀಯ ರೈಲ್ವೆಯನ್ನು ಮರುಸಂಘಟಿಸುವ ಹಾಗೂ ಮರುಶಕ್ತೀಕರಣಗೊಳಿಸುವ ಅಗತ್ಯವಿದೆ. ಎಲ್ಲ್ಲ ಉತ್ತರದಾಯಿಗಳ ಸೃಜನಶೀಲ ಪಾಲುದಾರಿಕೆಯ ಫಲಶ್ರುತಿಯೇ ಈ ಬಜೆಟ್ ಆಗಿದೆ.
ರೈಲ್ವೆಗೆ ನೂತನ ಚೌಕಟ್ಟೊಂದನ್ನು ನಿರ್ಮಿಸುವ ಉದ್ದೇಶದ ರೈಲ್ವೆಗಿದೆಯೆಂದು ವಿವರಿಸಿದ ಪ್ರಭು ‘‘ ಜಾಗತಿಕ ಆರ್ಥಿಕ ಹಿಂಜರಿಕೆಯಿಂದಾಗಿ ಈಗ ಸವಾಲುಗಳನ್ನೆದುರಿಸುವ ಕಾಲವಾಗಿದೆ. ನಾವು ಅದಾಯಕ್ಕೆ ಹೊಸ ಮೂಲಗಳನ್ನು ಶೋಧಿಸಲಿದ್ದೇವೆ. ನಮ್ಮ ದಕ್ಷತೆಯನ್ನು ನಾವು ಸುಧಾರಿಸಲಿದ್ದೇವೆ. 2016-17ರ ವಿತ್ತ ವರ್ಷದಲ್ಲಿ ಶೇ.92ರಷ್ಟು ಕಾರ್ಯನಿರ್ವಹಣಾ ಅನುಪಾತವನ್ನು ನಾವು ನಿರೀಕ್ಷಿಸಿದ್ದೇವೆಯೆಂದವರು ಹೇಳಿದರು.