ಮುಲ್ಕಿ,: ಅಪರಿಚಿತರಿಂದ ಗಂಭೀರ ಹಲ್ಲೆ ಗಾಯಾಲು ಆಸ್ಪತ್ರೆಗೆ
ಮುಲ್ಕಿ,: ಕಾರಲ್ಲಿ ಬಂದ ನಾಲ್ಕು ಮಂದಿಯ ಅಪರಿಚಿತ ವ್ಯಕ್ತಿಗಳ ತಂಡವೊಂದು ವ್ಯಕ್ತಿಯೋರ್ವರಿಗೆ ದೊಣ್ಣೆಗಳಿಂದ ಗಂಭೀರ ಹಲ್ಲೆ ನಡೆಸಿದ ಘಟನೆ ಶನಿವಾರ ಬೆಳಗ್ಗೆ ಹಳೆಯಂಗಡಿ ಸಮೀಪದ ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ಗಂಭೀರ ಹಲ್ಲೆಗೊಳಗಾದವರನ್ನು ಹೆಜಮಾಡಿಯ ನಿವಾಸಿ ಶೈಲೇಶ್ ಎಂದು ತಿಳಿದು ಬಂದಿದ್ದು ತಲೆ, ಕೈ ಹಾಗೂ ಕಾಲಿಗೆ ಗಂಭೀರ ಗಾಯಗೊಂಡ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಸುರತ್ಕಲ್ ಎನ್ಐಟಿಕೆಯ ಟೋಲ್ಗೇಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಶೈಲೇಶ್ ಎಂದಿನಂತೆ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಶನಿವಾರ ಬೆಳಗ್ಗೆ ಹೆಜಮಾಡಿಯ ತನ್ನ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರೊಂದರಲ್ಲಿಬೆನ್ನಟ್ಟಿ ಬಂದಿದ್ದ ನಾಲ್ವರು ಅಪರಿಚಿತರ ತಂಡ ಹಳೆಯಂಗಡಿಯ ಪೆಟ್ರೋಲ್ ಪಂಪ್ ಬಳಿ ಅಡ್ಡಗಟ್ಟಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಭಿಮುಖವಾಗಿ ಬರುತ್ತಿದ್ದ ಬೈಕ್ ಸವಾರರಿಬ್ಬರು ಹಲ್ಲೆ ನಡೆಸುತ್ತಿದ್ದುದನ್ನು ಕಂಡು ಸ್ಥಳಕ್ಕೆ ಬರುವಷ್ಟರಲ್ಲಿ ಅಪರಿಚಿತರು ಬಂದಿದ್ದ ಕಾರಿನಲ್ಲಿ ತಿರುಗಿಸಿ ಕೊಂಡು ಸುರತ್ಕಲ್ ಕಡೆ ತೆರಳಿದ್ದಾರ ಎಂದು ತಿಳಿದು ಬಂದಿದೆ.
ಈ ಸಂಬಂಧ ಸ್ಥಳ ಪರಿಶೀಲಿಸಿದ ಮುಲ್ಕಿ ಪೊಲೀಸರು ಹಲ್ಲೆಗೊಳಗಾದ ಶೈಲೇಶ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮಾಹಿತಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.