ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ವತಿಯಿಂದ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ
ಉಳ್ಳಾಲ. ಫೆ, 28: ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ವತಿಯಿಂದ ಯೇನೆಪೋಯ ವಿಶ್ವವಿದ್ಯಾಲಯದ ‘ಯೆನ್ಡ್ಯೂರೆನ್ಸ್ ಝೋನ್’ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಟಾರ್ಟ್ಅಪ್, ಇನ್ಕ್ಯುಬೇಟರ್ ಮತ್ತು ಇಂಟರ್ಪ್ರೆನರ್ಶಿಪ್ ಎಂಬ ವಿಷಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಭಾನುವಾರ ಖ್ಯಾತ ವಿಜ್ಞಾನಿ, ಮೊದಲ ಮಂಗಳಯಾನದ ರೂವಾರಿ, ಇಸ್ರೋ ವಿಜ್ಞಾನಿ ಹಾಗೂ ಮುಖ್ಯಸ್ಥ ಪದ್ಮಶ್ರೀ ಎ. ಎಸ್. ಕಿರಣ್ ಕುಮಾರ್ ಯೇನೆಪೋಯ ವಿವಿಗೆ ಭೇಟಿ ನೀಡಿ ಕಾರ್ಯಕ್ರಮ ಆಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು ಮಂಗಳಯಾನಕ್ಕೆ ಇಸ್ರೋ ವಿಜ್ಞಾನಿಗಳು ನೀಡಿದ ಅಭೂತಪೂರ್ವ ಕೊಡುಗೆಯನ್ನು ಶ್ಲಾಘಿಸಿದರು. ಇಸ್ರೋ ಈಗಾಗಲೇ ಎರಡನೆಯ ಮಂಗಳಯಾನ ಸಾಕಾರಗೊಳಿಸಲು ಸಿದ್ಧವಾಗಿದೆ. ಮೊದಲ ಮಂಗಳಯಾನದಲ್ಲಿ ಪತ್ತೆಯಾದ ವೈಜ್ಞಾನಿಕ ವಿಷಯಗಳನ್ನು ವಿದ್ಯಾರ್ಥಿಗಳ ಸಂಶೋಧನೆನೆಗೆ ಪ್ರಯೋಜನಕ್ಕೆ ಲಭ್ಯವಾಗಬೇಕೆಂಬ ನೆಲೆಯಲ್ಲಿ ವೆಬ್ಸೈಟ್ನಲ್ಲೂ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ನುಡಿದರು.
ಯೇನೆಪೋಯ ವಿಶ್ವವಿದ್ಯಾಲಯದ ಕುಲಾಪತಿ ವೈ. ಅಬ್ದುಲ್ಲ ವೈ. ಅಬ್ದುಲ್ಲ ಕುಂಞಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯೇನೆಪೋಯ ವಿ.ವಿ. ಉಪಕುಲಪತಿ ಡಾ.ಎಂ.ವಿಜಯಕುಮಾರ್ ಉಪಸ್ಥಿತರಿದ್ದರು.
ಯೇನೆಪೋಯ ಇಸ್ಲಾಮಿಕ್ ಅಕಾಡೆಮಿ ಆಪ್ ಎಜುಕೇಶನ್ನ ಕಾರ್ಯದರ್ಶಿ ಡಾ. ಅಖ್ತರ್ ಹುಸೈನ್ ಸ್ವಾಗತಿಸಿದರು. ಯೇನೆಪೋಯ ವಿವಿಯ ಡಾ. ಶ್ರೀಕುಮಾರ್ ಮೆನನ್ ವಂದಿಸಿದರು.