×
Ad

ಶಾಸಕರ ವೈಫಲ್ಯ ಮುಚ್ಚಿಡಲು ಬಿಜೆಪಿ ಉಪವಾಸ ನಾಟಕ

Update: 2016-02-29 18:35 IST

ಸುಳ್ಯ: ವಿದ್ಯುತ್ ಕಡಿತ ವಿರೋಧಿಸಿ ಮತ್ತು 110 ಕೆವಿ ಸಬ್‌ಸ್ಟೇಶನ್ ಅನುಷ್ಠಾನಕ್ಕೆ ಆಗ್ರಹಿಸಿ ಬಿಜೆಪಿ ಮಾ.2ರಂದು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಶಾಸಕರ ವೈಫಲ್ಯವನ್ನು ಮುಚ್ಚಿ ಹಾಕಲು ನಡೆಸುತ್ತಿರುವ ನಾಟಕ, ಬಿಜೆಪಿಯವರು ಪ್ರತಿಭಟನೆ ನಡೆಸುವುದೇ ಆದರೆ ಶಾಸಕರ ಮನೆಯೆದುರು ಅಥವಾ ಕಛೇರಿ ಎದುರು ನಡೆಸಲಿ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

 ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಸ್ಯೆ ಪರಿಹಾರ ಮಾಡಬೇಕಾದವರೇ ಪ್ರತಿಭಟನೆಗೆ ಇಳಿಯುತ್ತಿರುವುದು ವಿಪರ್ಯಾಸ. ಮಾ.1ರಂದು ಸವಿತಾ ಸಮಾಜದವರು ನಡೆಸುವ ಪ್ರತಿಭಟನೆ ಸಹಜ. ನಾವೂ ಅವರೊಂದಿಗೆ ಸೇರಿಕೊಳ್ಳುತ್ತೇವೆ. ಆದರೆ ಬಿಜೆಪಿಯವರಿಗೆ ಪ್ರತಿಭಟಿಸುವ ನೈತಿಕತೆಯೇ ಇಲ್ಲ. ಉಸ್ತುವಾರಿ ಸಚಿವರು ಮತ್ತು ಡಿಸಿಯವರು ಸ್ಥಳಕ್ಕೆ ಬರಬೇಕೆಂದು ಬಿಜೆಪಿಯವರು ಆಗ್ರಹಿಸುತ್ತಿದ್ದಾರೆ. ಆದರೆ ಇದರ ಅಗತ್ಯವಿದೆಯೇ ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. 2009ರಲ್ಲಿ ಟೆಂಡರ್ ನೋಟಿಫಿಕೇಶನ್ ಆದ ಬಳಿಕ ವಿದ್ಯುತ್ ಮಾರ್ಗದ ಕುರಿತಂತೆ ಸರ್ವೆಯ ಸಂದರ್ಭ ಶಾಸಕ ಅಂಗಾರರೇ ಆಕ್ಷೇಪಣೆ ಕೋರಿ ಪತ್ರ ನೀಡಿದ್ದಾರೆ. ಈ ಪತ್ರವೇ ಕಾಮಗಾರಿ ಸ್ಥಗಿತಗೊಳ್ಳಲು ಮುಖ್ಯ ಕಾರಣ. ಇದನ್ನು ಅಂಗಾರರೇ ಇತ್ಯರ್ಥಪಡಿಸಬೇಕಷ್ಟೇ. ಇವರು ಈ ರೀತಿ ಆಕ್ಷೇಪಣೆ ಸಲ್ಲಿಸಿದ ಬಳಿಕ ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಬೇರೆ ಮಾರ್ಗ ಪ್ರಸ್ತಾಪವಾದದ್ದು, ಇತರ ಕೆಲವರು ನ್ಯಾಯಾಲಯಕ್ಕೆ ಹೋದದ್ದು ಎಲ್ಲ ಇದೆ. ಇಲ್ಲಿ ಬಿಜೆಪಿ ಸರಕಾರ ಇರುವಾಗಲೇ ಕೆಪಿಟಿಸಿಎಲ್ ಅಧಿಕಾರಿಗಳು ನಿರ್ದಿಷ್ಟವಾಗಿ ಯಾವ ಸ್ಥಳಗಳು, ಎಷ್ಟು ಅರಣ್ಯ ಇದರ ವ್ಯಾಪ್ತಿಗೆ ಬರುತ್ತದೆ ಎಂದು ಮಾಹಿತಿ ನೀಡಬೇಕಿತ್ತು. ಆದರೆ ಶಾಸಕರಿಂದ ಅದನ್ನು ಮಾಡಿಸಲಾಗಲಿಲ್ಲ. ಇದನ್ನೆಲ್ಲಾ ಗಮನಿಸಿದಾಗ ಬಿಜೆಪಿಯವರ ಪ್ರತಿಭಟನೆ ಮೂರ್ಖತನದ ಪರಮಾವಧಿ ಎಂದೇ ಹೇಳಬೇಕಾಗುತ್ತದೆ ಎಂದರು.

ನಾವು ನಮ್ಮ ಆಸಕ್ತಿಯಿಂದ ಸಭೆ ಕರೆದರೆ ನಮ್ಮ ವಿರುದ್ಧವೇ ಹಕ್ಕು ಚ್ಯುತಿ ಮಂಡಿಸುತ್ತಾರೆ. ಉಸ್ತುವಾರಿ ಸಚಿವರು ಜನಪರವಾಗಿ ಯೋಚನೆ ಮಾಡಿದಾಗ ಅವರ ವಿರುದ್ಧವೂ ಹಕ್ಕು ಚ್ಯುತಿ ಮಂಡಿಸುತ್ತಾರೆ. ಹಾಗಾದರೆ ಈಗ ಉಸ್ತುವಾರಿ ಸಚಿವರು ಸುಳ್ಯಕ್ಕೆ ಭೇಟಿ ನೀಡಿ ಸಭೆ ನಡೆಸಿದರೆ ಅಂಗಾರರ ಹಕ್ಕು ಚ್ಯುತಿ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ವೆಂಕಪ್ಪ ಗೌಡರು, ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಗೆಲ್ಲಿಸುವುದು ಅವರು ಬೀದಿಯಲ್ಲಿ ಕುಳಿತು ಪ್ರತಿಭಟನೆ ಮಾಡಲಿ ಎಂದಲ್ಲ, ಕಛೇರಿಯಲ್ಲಿ ಕುಳಿತು ಕೆಲಸ ಮಾಡಲಿ ಎಂದು. ಆದರೆ ಬಿಜೆಪಿಯವರು ಜನರನ್ನು ಮೋಸ ಮಾಡುತ್ತಿದ್ದಾರೆ. ಬಿಜೆಪಿಯವರು ಪ್ರತಿಭಟನೆ ಮಾಡಿದ್ದೇ ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕ ಅಂಗಾರರ ವಿರುದ್ಧವೇ ಪ್ರತಿಭಟನೆ ನಡೆಸಲಿದೆ. 110 ಕೆವಿ ಸಬ್‌ಸ್ಟೇಶನ್ ಕುರಿತಂತೆ ಶಾಸಕರೊಂದಿಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದರು.

ಸಭೆ:

ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ, ವಿದ್ಯುತ್ ಅವ್ಯವಸ್ಥೆ ಕುರಿತಮತೆ ಜನ ಮೊದಲು ಸರಕಾರವನ್ನು ಪ್ರಶ್ನಿಸುವ ಬದಲು ಶಾಸಕರನ್ನು ಪ್ರಶ್ನಿಸಬೇಕು. ಸಬ್‌ಸ್ಟೇಶನ್ ಕಾಮಗಾರಿ ವಿಳಂಬಕ್ಕೆ ಅವರೇ ನೇರ ಹೊಣೆ. ಬಿಜೆಪಿಯವರು ಗೂಂಡಾಯಿಸಂ, ರೌಡಿಸಂ ಮಾಡಿ ಚುನಾವಣೆ ಗೆಲ್ಲುತ್ತಾರೆ. ಮಾರ್ಚ್ ಅಂತ್ಯದೊಳಗೆ ರಾಜ್ಯ ಇಂಧನ ಸಚಿವರನ್ನು ಸುಳ್ಯಕ್ಕೆ ಕರೆಯಿಸಿ ಸಬ್‌ಸ್ಟೇಶನ್ ಬಗ್ಗೆ ಸಭೆ ನಡೆಸುತ್ತೇವೆ ಎಂದು ಹೇಳಿದರು.

ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಫವಾಜ್, ನಗರ ಪಂಚಾಯತ್ ಸದಸ್ಯ ಕೆ.ಎಂ.ಮುಸ್ತಫ, ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಕೆ.ಕೆ.ಹರಿಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News