ಹೊತ್ತಿ ಉರಿದ ಲಾರಿ...! ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶ
ಕಾರ್ಕಳ : ವಿದ್ಯುತ್ ಲೈನ್ ಸ್ಪರ್ಶಿಸಿದ ಹಿನ್ನೆಲೆಯಲ್ಲಿ ಚಲಿಸುತ್ತಿದ್ದ ಲಾರಿ ಹೊತ್ತಿ ಉರಿದ ಘಟನೆ ತಾಲೂಕಿನ ಮುಡಾರು ಗ್ರಾಮದ ಬಜಗೋಳಿ ಬಳಿ ಸಂಭವಿಸಿದೆ.
ಸೋಮವಾರ ನಸುಕಿನ ವೇಳೆ ಈ ಘಟನೆ ಸಂಭವಿಸಿದ್ದು, ಬೀಡಿ ಎಲೆ ಹೊತ್ತುಕೊಂಡು ಗುಜರಾತ್ ರಾಜ್ಯದಿಂದ ಕಾರ್ಕಳ ತಾಲೂಕಿನ ನಲ್ಲೂರಿಗೆ ಆಗಮಿಸಿದ ಸಂದರ್ಭ ಈ ಅವಘಡ ಸಂಭವಿಸಿದೆ. ವಿಪರೀಮಿತ ಪ್ರಮಾಣದಲ್ಲಿ ಲೋಡ್ಗಟ್ಟಲೆ ಬೀಡಿ ಎಲೆ ಹೊತ್ತುಕೊಂಡು ಬಂದದ್ದೇ ಘಟನೆಗೆ ಕಾರಣವಾಗಿದ್ದು, ಲಾರಿಯಿಂದ ಎತ್ತರದವರೆಗೆ ಬೀಡಿ ಎಲೆಯನ್ನು ಲೋಡ್ ಮಾಡಿದ ಹಿನ್ನೆಲೆಯಲ್ಲಿ ವಿದ್ಯುತ್ ಸ್ಪರ್ಶವಾಗಿದೆ ಬೆಂಕಿ ತಾಗಿದ ಸಂದರ್ಭ ಲಾರಿ ಚಾಲಕ ಮತ್ತು ಕ್ಲೀನರ್ ಕೆಳಗೆ ಹಾರಿ ಪ್ರಾಣವನ್ನು ಉಳಿಸಿಕೊಂಡರೆ, ಲಾರಿಯಲ್ಲಿದ್ದ ಬೀಡಿ ಎಲೆ ಸಂಪೂರ್ಣ ಭಸ್ಮವಾಗಿತ್ತು. ಅಗ್ನಿಶಾಮಕ ದಳ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಇಲ್ಲಿ ನಡೆಸಿ ಬೆಂಕಿ ನಂದಿಸಿತ್ತು. ಆದರೂ ಬೀಡಿ ಎಲೆಗಳ ಗೋಣಿಯನ್ನು ಉಳಿಸಲು ಸಾಧ್ಯವಾಗಿಲ್ಲ. ಕಾರ್ಕಳ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎರಡು ಅಗ್ನಿಶಾಮಕ ದಳದ ವಾಹನಗಳ ಸಹಾಯದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ, 28 ಲಕ್ಷ ರೂ. ಮೌಲ್ಯದ ಲಾರಿ ಹಾಗೂ 16 ಲಕ್ಷ ಮೌಲ್ಯದ ಬೀಡಿ ಎಲೆ ಸೇರಿದಂತೆ ಒಟ್ಟು 44 ಲಕ್ಷ ರೂ. ನಷ್ಟವನ್ನು ಅಂದಾಜಿಸಲಾಗಿದೆ.