×
Ad

ಉರುಂಬಿಯಲ್ಲಿ ಕಿರು ಜಲವಿದ್ಯುತ್ ಯೋಜನೆ ಕಾಮಗಾರಿ ಆರಂಭ: ಹೋರಾಟಕ್ಕೆ ಅಣಿಯಾದ ಅಣೆಕಟ್ಟು ವಿರೋಧಿ ಹೋರಾಟ ಸಮಿತಿ

Update: 2016-03-02 23:36 IST

ಕಡಬ, ಮಾ.2: ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಉರುಂಬಿ ಎಂಬಲ್ಲಿ ಅನಧಿಕೃತವಾಗಿ ಕುಮಾರಧಾರಾ ನದಿಗೆ ಅಣೆಕಟ್ಟು ನಿರ್ಮಿಸಿ ಕಿರುಜಲವಿದ್ಯುತ್ ಯೋಜನೆಯ ಕಾಮಗಾರಿ ಕೈಗೆತ್ತಿಕೊಂಡಿರುವ ಕುಕ್ಕೆ ಹೈಡಲ್ ಪವರ್ ಪ್ರಾಜೆಕ್ಟ್ ಕಂಪೆನಿ ಯವರು ಕಾನೂನು ಉಲ್ಲಂಘಿಸುತ್ತಿದ್ದಾರೆ.

ಈ ಬಗ್ಗೆ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಕುಮಾರಧಾರಾ ಅಣೆಕಟ್ಟು ವಿರೋಧಿ ಹೋರಾಟ ಸಮಿತಿಯು ಎಚ್ಚರಿಸಿದೆ.

 ಕಡಬದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಹೋರಾಟ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ, ಇತ್ತೀಚೆಗೆ ಜಿಪಂ, ತಾ.ಪಂ ಚುನಾವಣೆ ಸಂದರ್ಭ ನೀತಿಸಂಹಿತೆ ಲಾಭವನ್ನು ಗಿಟ್ಟಿಸಿಕೊಂಡು, ಸ್ಥಳೀಯ ಅಧಿಕಾರಿಗಳಿಗೆ 2012-13ನೆ ಸಾಲಿನಲ್ಲಿ ಕೆಲವು ಇಲಾಖೆಗಳಲ್ಲಿ ಸಿಕ್ಕಿರುವ ಅನುಮತಿ ಪತ್ರವನ್ನು ತೋರಿಸಿ ಅದನ್ನೇ ಅಧಿಕೃತ ಅನುಮತಿ ಎಂದು ನಂಬಿಸಿ ಯೋಜನಾ ಉದ್ದೇಶಿತ ಸ್ಥಳವಾದ ಉರುಂಬಿ ಯಲ್ಲಿ ಕಾಮಗಾರಿ ಆರಂಭಿಸಿದ್ದರು ಎಂದು ಆರೋಪಿಸಿದರು.

ಈ ಬಗ್ಗೆ ಹೋರಾಟ ಸಮಿತಿ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದಾಗ ಕಂಪೆನಿಯವರಿಗೆ ಯಾವುದೇ ಅನುಮತಿ ದೊರೆತಿಲ್ಲ ಎಂದು ಹೇಳಿ, ಎ.ಸಿ ಹಾಗೂ ಕಡಬ ವಿಶೇಷ ತಹಶೀಲ್ದಾರರಿಗೆ ಸೂಚಿಸಿ ಕಾಮಗಾರಿಗೆ ತಡೆ ನೀಡಿದ್ದಾರೆ.
ಈ ನಡುವೆ ಹೋರಾಟ ಸಮಿತಿ ನಿಯೋಗ ಬೆಂಗಳೂರಿನ ಇಂಧನ ಇಲಾಖೆ, ಕ್ರೆಡಲ್ ಮತ್ತು ಅರಣ್ಯ ಇಲಾಖೆಗೆ ತೆರಳಿ ವಿಚಾರಿಸಿದಾಗಲೂ ಯಾವುದೇ ರೀತಿಯ ಅನುಮತಿ ನೀಡದಿ ರುವುದರ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕ್ರೆಡೆಲ್ ಅಧಿಕಾರಗಳ ತಂಡವೊಂದು ಮುಂದಿನ 15 ದಿನದೊಳಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದೆ ಎಂದರು.


ಯೋಜನೆ ಅನುಷ್ಠಾನವಾಗಲು ಸುಮಾರು 39 ಇಲಾಖೆಗಳ ಹಾಗೂ ಸ್ಥಳೀಯಾಡಳಿತದ ಅನುಮತಿ ಬೇಕು. ಈ ಪೈಕಿ ಕೆಲವೊಂದು ಇಲಾಖೆಗಳ ಅನುಮತಿ ಪಡೆದು ಈ ಹಿಂದೆ ಕೆಲಸ ಪ್ರಾರಂಭಿಸಿತ್ತು. ಆ ಸಂದರ್ಭ ಸ್ಥಳದಲ್ಲಿ ಹೋರಾಟ ಸಮಿತಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಿದ್ದರು. ಕಂಪೆನಿಗೆ ನೀಡುವ ಅನುಮತಿ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವುದಿದ್ದರೆ ಹೋರಾಟ ಸಮಿತಿಯವರಿಗೆ ಮುಂಚಿತವಾಗಿ ತಿಳಿಸಿಯೇ ಮುಂದುವರಿಯುತ್ತೇವೆ ಎಂದು ಭರವಸೆ ನೀಡಿದ್ದರು. ಕಾಮಗಾರಿಗೆ ಅಂದು ನೀಡಿದ್ದ ತಡೆಯಾಜ್ಞೆ ಊರ್ಜಿತ ದಲ್ಲಿದೆ. ಆದರೂ ಕೆಲವು ದಿನಗಳ ಹಿಂದೆ ಹಿಟಾಚಿ ಯಂತ್ರದ ಮೂಲಕ ನದಿ ಪಾತ್ರದಲ್ಲಿ ಸಮತಟ್ಟು ಕಾರ್ಯವನ್ನು ಕಂಪೆನಿಯವರು ಮಾಡುತ್ತಿದ್ದಾರೆ. ಅನಧಿಕೃತ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಕಾರ್ಯದರ್ಶಿ ಕಿರಣ್ ಗೋಗಟೆ, ಕೋಶಾಧಿಕಾರಿ ರಘುನಾಥ ಹೆಬ್ಬಾರ್, ಉಪಾಧ್ಯಕ್ಷ ಗೋಪಾಲಕೃಷ್ಣ ಗೌಡ ದೋಳ್ಪಾಡಿ, ಜೊತೆ ಕಾರ್ಯದರ್ಶಿ ಎಲ್ಸಿ ತೋಮಸ್, ಸದಸ್ಯ ಜಯರಾಮ ಆರ್ತಿಲ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News