×
Ad

ಭಟ್ಕಳ: ಉತ್ತರಕನ್ನಡ ಜಿಲ್ಲೆ ಕೊಂಕಣಿ ಭಾಷಿಗರ ಜಿಲ್ಲೆಯಾಗಿದೆ- ರಾಯ್ ಕಾಸ್ತೆಲಿನೋ

Update: 2016-03-05 22:57 IST

ಭಟ್ಕಳ: ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾ ಭವನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಹಾಗೂ ಯುವ ಪುರಸ್ಕಾರ ಪ್ರಧಾನ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಕೊಂಕಣಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಅಕಾಡೆಮಿಯ ಅಧ್ಯಕ್ಷ ರಾಯ್ ಕಾಸ್ತೆಲಿನೋ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ರಾಯ್ ಕಾಸ್ತೆಲಿನೋ ಉತ್ತರ ಕನ್ನಡ ಜಿಲ್ಲೆ ಕೊಂಕಣಿ ಭಾಷಿಕರ ಜಿಲ್ಲೆ ಎನ್ನುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಇಲ್ಲಿನ ಪ್ರತಿಯೊಂದು ಮಾರ್ಕೆಟ್‌ನಲ್ಲಿಯೂ ಕೂಡಾ ಕೊಂಕಣಿ ಭಾಷಿಕರೇ ಅಧಿಕವಾಗಿದ್ದು ಹೆಚ್ಚು ಜನರು ಕೊಂಕಣಿಯನ್ನು ಬಳುಸುತ್ತಾರೆ ಎಂದರು. ಉತ್ತರ ಕನ್ನಡದಲ್ಲಿ ವ್ಯಾವಹಾರಿಕ ಭಾಷೆ ಕೊಂಕಣಿ ಎನ್ನುವುದನ್ನು ಮನಗಂಡಿದ್ದೇನೆ ಎಂದು ಹೇಳಿದ ಅವರು ಈ ಬಾರಿಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉತ್ತರ ಕನ್ನಡದವರಿಗೇ 8 ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಕ್ಕೆ ತುಂಬಾ ಹರ್ಷಿತನಾಗಿದ್ದೇನೆ ಎಂದರು. ಕೊಂಕಣಿ ಕಲಿಯುವವರಿಗೆ ಕೊಂಕಣಿ ಲಿಪಿಯ ಕುರಿತು ಗೊಂದಲವಿದೆ. ಆದರೆ ಕೊಂಕಣಿಗೆ ಐದು ಲಿಪಿಗಳಿವೆ, ಕೊಂಕಣಿಯಲ್ಲಿ ಕನ್ನಡದಲ್ಲಿಯೂ ಕಲಿಯಬಹುದು, ದೇವನಾಗರಿ ಲಿಪಿಯಲ್ಲಿಯೂ ಕಲಿಯಬಹುದು. 

ಕೊಂಕಣಿಯನ್ನು ಮೂರು ಧರ್ಮದವರು ಮಾತನಾಡುತ್ತಾರೆನ್ನಲು ಹೆಮ್ಮೆಯೆನಿಸುತ್ತದೆ. ಭಟ್ಕಳವು ಕೊಂಕಣಿಗರ ನಾಡಾಗಿದೆ. ಇಲ್ಲಿನ ನವಾಯತ ಮುಸ್ಲಿಂ, ಕ್ರಿಶ್ಚಿಯನ್, ದಾಲ್ಜಿಗಳು, ಮರಾಠಿಗಳು, ಕೊಂಕಣಿಗರು ಸೇರಿದಂತೆ ಹಲವರು ಕೊಂಕಣಿ ಭಾಷೆಯನ್ನು ಬಳಸುತ್ತಾರೆ. ಅದಕ್ಕಾಗಿಯೇ ಇಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಂಡಿದ್ದೇನೆ ಎಂದೂ ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ನ್ಯಾಯವಾದಿ ವಿಕ್ಟರ್ ಎಫ್. ಗೋಮ್ಸ ಮಾತನಾಡಿ ಕರ್ನಾಟದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯು ಉತ್ತಮ ಕೆಲಸ ಮಾಡುತ್ತಿದೆ. ಕಳೆದ ಎರಡು ವರ್ಷಗಳ ಸಾಧನೆಯನ್ನು ನೋಡಿದರೆ ಅಕಾಡೆಮಿಯ ಕಿರು ಪರಿಚಯವಾದಂತಾಗುವುದು. ಭಟ್ಕಳದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಅಧ್ಯಕ್ಷರು ಕರಾವಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡಿದಂತಾಗಿದೆ ಎಂದರು. ಮುಂದಿನ ದಿನಗಳಲ್ಲಿ ಅಕಾಡೆಮಿಯು ಇನ್ನೂ ಹೆಚ್ಚಿನ ಉತ್ತಮ ಕಾರ್ಯಗಳನ್ನು ಮಾಡಲಿ ಎಂದೂ ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿ ಶ್ರೀ ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮದಾಸ ಪ್ರಭು ಮಾತನಾಡಿ ಕೊಂಕಣಿಗರಾಗಿ ನಾವು ಹೆಮ್ಮೆ ಪಡುವಂತಹ ಕಾರ್ಯಕ್ರಮವನ್ನು ಭಟ್ಕಳದಲ್ಲಿ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು. ವೇದಿಕೆಯಲ್ಲಿ ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷೆ ಶಾಂತಿ ಜಗಧೀಶ ಸುಕ್ರನಮನೆ, ಜಿ..ಎಸ್.ಬಿ. ಹಸ್ತು ಸಮಸ್ತರ ಅಧ್ಯಕ್ಷ ಹರಿಶ್ಚಂದ್ರ ಕಾಮತ್, ಮುಂಡಳ್ಳಿಯ ಕ್ಯಾತಲಿಕ್ ಸಭಾದ ಅಧ್ಯಕ್ಷ ಜೋನ್ ಫ್ರಾನ್ಸಿಸ್ ಗೋಮ್ಸ್, ಅಕಾಡೆಮಿಯ ರಿಜಿಸ್ಟ್ರಾರ್ ಡಾ. ದೇವಿದಾಸ ಪೈ, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿರಸಿಯ ಕೊಂಕಣ ಕಲಾ ಮಂಡಲದ ವಾಸುದೇವ ಶಾನಭಾಗ ಇವರು ರಚಿಸಿದ 25 ಗೀತೆಗಳುಳ್ಳ ಕೊಂಕಣಿ ಸಿ.ಡಿ.ಯನ್ನು ಬಿಡುಗಡೆಗೊಳಿಸಲಾಯಿತು. ಸಂತೋಷ ಡಿಸಿಲ್ವ ಪ್ರಾರ್ಥನೆ ಹಾಡಿದರು. ಝೇಂಕಾರ ಕಲಾ ಸಂಘದ ಪ್ರಸನ್ನ ಪ್ರಭು ನಿರೂಪಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ದೇವಿದಾಸ ಪೈ ವಂದಿಸಿದರು. ಕಾರ್ಯಕ್ರಮಕ್ಕೆ ಅಕಾಡೆಮಿಯ ಸದಸ್ಯರುಗಳಾದ ಮಮತಾ ಕಾಮತ್ ಮೈಸೂರು, ಶಿವಾನಂದ ಶೇಟ್, ಆಶೋಕ ಕಾಸರಗೋಡು, ಕಮಾಕ್ಷ ಶೇಟ್ ಉಡುಪಿ, ಲುಲುಸ್ ಕುಟಿನೋ ಬೆಂಗಳೂರು, ಡಾ. ವಾರಿಜಾ ನೀರಬೈಲ್, ಶೇಖರ ಗೌಡ ಮುಂತಾದವರು ಸಹಕರಿಸಿದರು.

ಮಾ6 ರಂದು ಬೆಳಿಗ್ಗೆ ಪ್ರಶಸ್ತಿ ವಿಜೇತರೊಂದಿಗೆ ಸಂವಾದ ಕಾರ್ಯಕ್ರಮ, ಸಂಜೆ 4 ಕ್ಕೆ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ ಮೆರವಣಿಗೆ ಅಂಜುಮನ್ ಗ್ರೌಂಡನಿಂದ ಹೊರಟು ನಾಗಯಕ್ಷೇ ಸಭಾಭವನದ ವರೆಗೆ ತಲುಪಲಿದೆ. ನಂತರ ವಿವಿದ ಕಲಾಪಂಗಡದವರಿಂದ ವೈವಿದ್ಯಮಯ ಜಾನಪದ ಪ್ರದರ್ಶನ ನಡೆಯಲಿದೆ. ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಕನ್ನಡ ಮತ್ತು ಸಂಸೃತಿ ಇಲಾಖೆಯ ಉಮಾಶ್ರೀ, ಬ್ರಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ ದೇಶಪಾಂಡೆ, ಸಂಸದಿಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ಸಂಸದ ಅನಂತ ಕುಮಾರ, ಭಟ್ಕಳ ಶಾಸಕ ಮಂಕಾಳ ವೈದ್ಯ, ಅಧ್ಯಕ್ಷ ರೋಯ್ ಕ್ಯಾಸ್ತಲಿನೋ ಬಾಗವಹಿಸಲಿದ್ದಾರೆ .
ಸನ್ಮಾನಿತರು: ಗೌರವ ಪ್ರಶಸ್ತಿ ವಿಬಾಗ: ಸಾಹಿತ್ಯದಲ್ಲಿ ರಾಮಚಂದ್ರ ಎಂ. ಶೇಟ್, ಕಲೆಯಲ್ಲಿ ಕಾಸಗೋಡು ಚಿನ್ನಾ, ಜಾನಪದದಲ್ಲಿ ಆಲೂ ಪೀಲೂ ಮರಾಠಿ.
ಪುಸ್ತಕ ಬಹುಮಾನ: ಭಾಷಾಂತರದಲ್ಲಿ ಒಂ ಗಣೇಶ ಉಪ್ಪುಂದ, ರೊನಿ ಅರುಣ್, ಲೇಖನದಲ್ಲಿ ಫಾ. ಡೆನಿಸ್ ಕ್ಯಾಸ್ತಲಿನೊ
 
ಯುವ ಪುರಸ್ಕಾರ: ನೃತ್ಯ ಕು. ಅಂಜಲಿ ವಿಲ್ಸನ್ ವಾಜ್, ಕ್ರೀಡೆಯಲ್ಲಿ ನಸ್ರುಲ್ಲಾ ಆಸ್ಕೇರಿ, ಸಂಗೀತದಲ್ಲಿ ರಾಜರಾಮ ಪ್ರಭು. ಸಾಧಕರಿಗೆ ಸನ್ಮಾನ ವಿಭಾಗ: ಎಸ್.ಎಂ ಸೈಯ್ಯದ್ ಖಲೀಲುರ್ರಹ್ಮಾನ್ ಅನಿವಾಸಿ ಭಾರತೀಯ,ಪ್ರದೀಪ್ ಜಿ.ಪೈ, ಜಾರ್ಜ ಫರ್ನಾಂಡಿಸ್.

ಕೊಂಕಣಿ ಸಾಹಿತ್ಯ ಕಾರ್ಯಕ್ರಮದ ಮೇಲೆ ಬಂದ್ ಪ್ರಭಾವ: ಇಸ್ಲಾಂ ಧರ್ಮಕ್ಕೆ ಅವಹೇಳನ ಮಾಡಿದ್ದ ಸಂಸದ ಅನಂತ್ ಕುಮಾರ್ ಹೆಗಡೆಯನ್ನು ಬಂಧಿಸುವಂತೆ ಆಗ್ರಹಿಸಿ ಇಲ್ಲಿನ ಮುಸ್ಲಿಮ್ ಸಟನೆಗಳು ಭಟ್ಕಳ ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಕೊಂಕಣಿ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸಾಹಿತ್ಯ ಕಾರ್ಯಕ್ರಮದ ಮೇಲೆ ತೀವ್ರ ಪ್ರಭಾವ ಬೀರಿತ್ತು. ಕಾರ್ಯಕ್ರಮದಲ್ಲಿ ಜನರೇ ಇಲ್ಲದೆ ಸಭಾಂಗಣದ ಆಸನಗಳು ಖಾಲಿಖಾಲಿಯಾಗಿದ್ದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News