×
Ad

ಪಿಲಿಕುಳ: ಆ್ಯಂಗ್ಲಿಂಗ್ ಕ್ಲಬ್ ಉದ್ಘಾಟನೆ, ಗಾಳ ಶಿಕಾರಿ ಸ್ಪರ್ಧೆಗೆ ಚಾಲನೆ

Update: 2016-03-06 15:04 IST

ಮಂಗಳೂರು, ಮಾ.6: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ದೋಣಿ ವಿಹಾರ ಕೇಂದ್ರದ ಕೊಳದಲ್ಲಿ ಇಂದು ಆ್ಯಂಗ್ಲಿಂಗ್ ಕ್ಲಬ್ ಉದ್ಘಾಟನೆ ಹಾಗೂ ಗಾಳ ಶಿಕಾರಿ ಸ್ಪರ್ಧೆಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಚಾಲನೆ ನೀಡಿದರು.


ಪಿಲಿಕುಳ ದೋಣಿ ವಿಹಾರ ಕೇಂದ್ರದ ಕೊಳದಲ್ಲಿ ಆ್ಯಂಗ್ಲಿಂಗ್ ಕ್ಲಬ್‌ನ ಸದಸ್ಯರ ಜತೆ ಜಿಲ್ಲಾಧಿಕಾರಿ ಜತೆ, ಮನಪಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಸೇರಿದಂತೆ ಇತರ ಅಧಿಕಾರಿಗಳು ಗಾಳ ಹಾಕಿ ಮೀನು ಹಿಡಿಯುವ ಪ್ರಯತ್ನ ನಡೆಸಿದರು.


ಗಾಳ ಶಿಕಾರಿ ತಜ್ಞ ಡೆರಿಕ್ ಡಿಸೋಜಾ ಈ ಸಂದರ್ಭ ಮಾತನಾಡಿ, ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನವರಿಗೂ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ಆಹ್ಲಾದವನ್ನು ನೀಡುವ ಕ್ರೀಡೆ ಗಾಳ ಶಿಕಾರಿ ಎಂಬುದು ಸಂಶೋಧನೆಯಿಂದಲೂ ಸಾಬೀತಾಗಿದೆ.


ಗಾಳ ಶಿಕಾರಿ ಎಂಬುದು ಕೇವಲ ಮೀನುಗಳನ್ನು ಹಿಡಿದು ಆಹಾರವಾಗಿ ಉಪಯೋಗಿಸುವುದು, ವ್ಯಾಪಾರ ಮಾಡುವ ಉದ್ದೇಶದಿಂದ ನಡೆಯುತ್ತಿಲ್ಲ. ಇದರ ಮುಖ್ಯ ಉದ್ದೇಶ ಪ್ರಾಕೃತಿಕ ಸಂಪತ್ತಾಗಿರುವ ಮೀನುಗಳ ವೈವಿಧ್ಯತೆಯ ಬಗ್ಗೆ ಅರಿವುದು, ಅವುಗಳ ಬಗ್ಗೆ ಆಸಕ್ತಿ ಬೆಳೆಸಿ ಅವುಗಳ ಸಂತತಿಯನ್ನು ಮುಂದಿನ ಪೀಳಿಗೆಗೆ ವೃದ್ಧಿಗೊಳಿಸುವುದಾಗಿದೆ. ಹಾಗಾಗಿ ಆ್ಯಂಗ್ಲಿಂಗ್ ಕ್ಲಬ್ ಸದಸ್ಯರು ತಾವು ಹಿಡಿದ ಮೀನನ್ನು ಮತ್ತೆ ನೀರಿಗೆ ಬಿಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ನದಿ, ಕೊಳಗಳಲ್ಲಿ ಗಾಳ ಹಾಕುವ ಸಂದರ್ಭ ಜೆಲೆಟಿನ್ ಕಡ್ಡಿ ಉಪಯೋಗಿಸುವವರೂ ಇದ್ದು, ಇದು ತೀರಾ ಅಪಾಯಕಾರಿ. ಇದು ಮೀನುಗಳಿಗೆ ಮಾತ್ರವಲ್ಲ, ಗಾಳ ಹಾಕುವವರಿಗೂ ಇದರಿಂದ ಪ್ರಾಣಹಾನಿಯಾಗುವ ಅಪಾಯವಿದೆ. ಜಿಲೆಟಿನ್ ಉಪಯೋಗಿಸುವುದರಿಂದ ಅದು ನೀರಿಗೆ ಸೇರಿ ಮೀನುಗಳ ಮಾರಣ ಹೋಮಕ್ಕೂ ಸಾಧ್ಯವಾಗಲಿದೆ.

ಈ ಬಗ್ಗೆ ಗಾಳ ಹಾಕುವವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಆ್ಯಂಗ್ಲಿಂಗ್ ಕ್ಲಬ್ ಮೂಲಕ ಮಾಡಲಾಗುತ್ತಿದೆ. ಜತೆಗೆ ಅಳಿವಿನಂಚಿನಲ್ಲಿರುವ ಮೀನುಗಳ ತಳಿಗಳನ್ನು ಗುರುತಿಸಿ ಅವುಗಳ ಸಂತಾನೋತ್ಪತ್ತಿಗೆ ಹೆಚ್ಚಿನ ಒತ್ತು ನೀಡುವ ಕಾರ್ಯ ಮಾಡುವಲ್ಲಿಯೂ ಈ ಗಾಳ ಶಿಕಾರಿಯಿಂದ ಸಾಧ್ಯ ಎಂದವರು ಹೇಳಿದರು.

ಪಿಲಿಕುಳದ ಕೊಳದಲ್ಲಿ ಗಾಳ ಶಿಕಾರಿ ನಡೆಸುವ ಬಗ್ಗೆ ಪ್ರತಿಕ್ರಿಯಿದ ಅವರು, ಇದು ಉತ್ತಮವಾದ ಪರಿಸರ. ಆದರೆ ದೋಣಿ ವಿಹಾರ ಕೇಂದ್ರವಾದ್ದರಿಂದ ಇಲ್ಲಿ ಬೋಟಿಂಗ್ ಕೂಡಾ ನಡೆಯುವುದರಿಂದ ಗಾಳ ಹಾಕುವುದಕ್ಕೆ ತೊಂದರೆಯಾಗುತ್ತಿದೆ. ಮಾತ್ರವಲ್ಲದೆ ಗಾಳ ಹಾಕಿ ಮೀನು ಹಿಡಿಯಲು ಮುಂಜಾನೆಯ ಅಥವಾ ಸಂಜೆಯ ಪ್ರಶಾಂತ ವಾತಾವರಣ ಸೂಕ್ತ ಎಂದು ಹೇಳಿದರು.


ಸಮಾರಂಭದಲ್ಲಿ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎ. ಪ್ರಭಾಕರ ಶರ್ಮಾ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಶೆಟ್ಟಿ, ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ವಿಜ್ಞಾನ ಕೇಂದ್ರದ ಡಾ.ಕೆ.ವಿ. ರಾವ್, ಎನ್.ಜಿ. ಮೋಹನ್, ಮೊದಲಾದವರು ಉಪಸ್ಥಿತರಿದ್ದರು.


*ಗಾಳ ಹಾಕಿ ಸುಸ್ತಾದರು- ಒಂದು ಮೀನು ಸಿಕ್ಕಾಗ ಸಂಭ್ರಮಿಸಿದರು!
ಪಿಲಿಕುಳ ದೋಣಿ ವಿಹಾರ ಕೇಂದ್ರದಲ್ಲಿ ಇಂದು ಗಾಳ ಶಿಕಾರಿಯಲ್ಲಿ ಪಾಲ್ಗೊಳ್ಳಲು ಹಲವು ಮಂದಿ ಗಾಳ ಹಾಕುವವರು ಬಂದಿದ್ದರು. ಬೆಳಗ್ಗೆ 10 ಗಂಟೆಯಿಂದ ಗಾಳ ಹಾಕುವ ಸ್ಪರ್ಧೆ ಆರಂಭವಾಗಿತ್ತಾದರೂ, ಮೀನು ಸಿಗದೆ ಮತ್ತೆ ಮತ್ತೆ ಗಾಳವನ್ನು ಕೊಳಕ್ಕೆ ಬೀಸುತ್ತಾ ಮೀನಿಗಾಗಿ ಕಾದರು. ಗಾಳಕ್ಕೆ ಸಣ್ಣ ಮೀನು, ಕೋಳಿ ಮಾಂಸದ ತುಣುಕು ಸಿಕ್ಕಿಸಿ ಗಾಳ ಹಾಕಲು ಆರಂಭಿಸಿ ಒಂದೆರಡು ಗಂಟೆಯಾದರೂ ಮೀನು ಸಿಗದೆ ಕೆಲವರು ಬೇಸರಿಸಿದರು. ಮತ್ತೆ ಕೆಲವರು ಮರಳಿ ಯತ್ನವ ಮಾಡು ಎಂಬಂತೆ ಮತ್ತೆ ಮತ್ತೆ ಗಾಳ ಹಾಕುತ್ತಾ ಸಾಗಿದಾಗ ಕೊನೆಗೊಂದು ಸಣ್ಣ ಮೀನು ಗಾಳಕ್ಕೆ ಸಿಕ್ಕಾಗ ಅದನ್ನು ಕಂಡು ಸಂಭ್ರಮಿಸಿದರು.


‘‘ನಾನು ಕಳೆದ 10 ವರ್ಷಗಳಿಂದ ಉಳ್ಳಾಲದ ಸೋಮೇಶ್ವರ, ಕೋಟೆಪುರ ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸವನ್ನು ಹೊಂದಿದ್ದೇನೆ. ಸಾಕಷ್ಟು ಮೀನುಗಳನ್ನು ಹಿಡಿದ್ದೇನೆ. ಆದರೆ ಇಂದು ಬೆಳಗ್ಗಿನಿಂದ ಇಲ್ಲಿ ನಾನು ಗಾಳ ಹಾಕಿ ಪ್ರಯತ್ನಿಸುತ್ತಿದ್ದೇನೆ. ಒಂದೇ ಒಂದು ಮೀನು ಸಿಗುತ್ತಿಲ್ಲ. ಬಹುಶ: ಗಾಳಕ್ಕೆ ಈ ಮಧ್ಯಾಹ್ನದ ಹೊತ್ತು ಸರಿಯಾಗಿಲ್ಲವಾದ್ದರಿಂದ ಮೀನು ಸಿಗುತ್ತಿಲ್ಲ’’ ಎಂದು ಗಾಳ ಶಿಕಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉಳ್ಳಾಲ ರಫೀಕ್ ಅಭಿಪ್ರಾಯಿಸಿದರು.
ಗಾಳ ಶಿಕಾರಿ ಒಂದು ಕ್ರೀಡೆ!


ನಾನು ಸುಮಾರು 12 ವರ್ಷಗಳಿಂದ ಗಾಳ ಶಿಕಾರಿ ಹವ್ಯಾಸವನ್ನುಹೊಂದಿದ್ದೇನೆ. ಗಾಳ ಶಿಕಾರಿ ಎನ್ನುವುದು ಕ್ರಿಕೆಟ್, ಫುಟ್ಬಾಲ್‌ನಂತೆ ಒಂದು ಕ್ರೀಡೆ ಎಂಬುದು ನನ್ನ ಭಾವನೆ. ಗಾಳ ಹಾಕಿ ಮೀನು ಹಿಡಿದು ಅದನ್ನು ಆಹಾರವಾಗಿ ಉಪಯೋಗಿಸುವುದು ಅಥವಾ ಮಾರಾಟ ಮಾಡುವುದು ನಮ್ಮ ಉದ್ದೇಶವಲ್ಲ. ಪ್ರಕೃತಿ ಜತೆ ನೇರ ಸಂಪರ್ಕವನ್ನು ಇರಿಸಿಕೊಳ್ಳುವ ಮೂಲಕ ಕ್ರೀಡಾ ಮನೋಭಾವನೆಯಿಂದ ಈ ಕಾರ್ಯದಲ್ಲಿ ನಮ್ಮನ್ನು ಕುಟುಂಬ ಸಮೇತರಾಗಿ ತೊಡಗಿಸಿಕೊಳ್ಳುವ ಪ್ರಕ್ರಿಯೆ ಇದಾಗಿದೆ ಎನ್ನುತ್ತಾರೆ ರೆಜಿನಾಲ್ಡ್ ಅಮ್ಮಣ್ಣ.


ಮಂಗಳೂರಿನ ವೆಲೆನ್ಶಿಯಾ ನಿವಾಸಿ, ಆ್ಯಂಗ್ಲಿಂಗ್ ಕ್ಲಬ್‌ನ ಸದಸ್ಯರಾಗಿರುವ ಇವರು ಗಲ್ಫ್ ರಾಷ್ಟ್ರದಲ್ಲಿ, ಮುಂಬೈನಲ್ಲಿಯೂ ಗಾಳ ಶಿಕಾರಿ ಮಾಡಿದ್ದು, ಮೀನಿನ ಮಹತ್ವವನ್ನು ಅರಿಯುವಲ್ಲಿಯೂ ಈ ಗಾಳ ಶಿಕಾರಿ ಪ್ರಯೋಜನಕಾರಿ ಎನ್ನುವುದು ಅವರ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News