×
Ad

‘ಎಂ- ಸ್ಯಾಂಡ್’ಗೆ ಸರಕಾರದಿಂದ ಅನುಮತಿ: ಸಚಿವ ವಿನಯ ಕುಲಕರ್ಣಿ

Update: 2016-03-06 16:00 IST

ಮಂಗಳೂರು, ಮಾ.6: ಸಮುದ್ರ ಮತ್ತು ನದಿಗಳಿಂದ ಅವ್ಯಾಹತ ಮರಳುಗಾರಿಕೆಯಿಂದ ಅಂತರ್ಜಲ ಕುಸಿತದ ಭೀತಿಯೂ ಇರುವುದರಿಂದ ಖಾಸಗಿ ಅಥವಾ ಸರ್ಕಾರಿ ಜಾಗದಲ್ಲಿ ಉತ್ಪಾದಿತ ಮರಳುಗಾರಿಕೆಗೆ(ಮ್ಯಾನುಫ್ಯಾಕ್ಟರ್ಡ್‌ ಸ್ಯಾಂಡ್ ಅಥವಾ ಎಂ-ಸ್ಯಾಂಡ್)ಸರ್ಕಾರ ಅನುಮತಿ ನೀಡಲಿದೆ ಎಂದು ಗಣಿ ಮತ್ತುಭೂವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮಂಗಳೂರಿಗೆ ಆಗಮಿಸಿದ್ದ ಸಂದರ್ಭ ಅವರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಮರಳುಗಾರಿಕೆ ವಿರುದ್ಧ ಕಾನೂನು ಕ್ರಮಗಳನ್ನು ಬಿಗಿ ಮಾಡಿರುವುದರಿಂದ ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಮರಳಿನ ಬೇಡಿಕೆಯನ್ನು ಪೂರೈಸುವ ಜತೆಗೆ ಪ್ರಕೃತಿಯ ಸಮತೋಲನವನ್ನೂ ಕಾಯ್ದುಕೊಳ್ಳಬೇಕಾಗಿದೆ. ಕೋಲಾರದಲ್ಲಿ 2000 ಅಡಿಗೆ ಅಂತರ್ಜಲ ಕುಸಿದಿದ್ದು, ಮಲೆನಾಡು ಪ್ರದೇಶದಲ್ಲೂ 400 ಅಡಿವರೆಗೆ ಅಂತರ್ಜಲ ಕುಸಿತಗೊಂಡಿದೆ. ಈ ಬಗ್ಗೆ ಭೂಗರ್ಭ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಎಂ ಸ್ಯಾಂಡ್‌ಗೆ ಉತ್ತೇಜನ ನೀಡುವುದು ಅಗತ್ಯವಾಗಿದೆ. ರಾಜ್ಯದ ಕೆಲವೊಂದು ಪಟ್ಟಾ ಭೂಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಇದೆ. ಅವನ್ನೆಲ್ಲಾ ಗುರುತಿಸಲಾಗಿದೆ. ಈ ಖಾಸಗಿ ಭೂಮಿಯವರು ಮುಂದೆ ಬಂದಲ್ಲಿ ಅವರಿಗೆ ಸಬ್ಸಿಡಿ, ರಿಯಾಯಿತಿ ಮೂಲಕ ಮರಳುಗಾರಿಕೆಗೆ ಪರವಾನಿಗೆ ಒದಗಿಸಲಾಗುವುದು ಎಂದವರು ಹೇಳಿದರು.

ರಾಜ್ಯದಲ್ಲಿ ವಾರ್ಷಿಕ 28 ಸಾವಿರ ಲಕ್ಷ ಮೆಟ್ರಿಕ್ ಟನ್ ಮರಳಿನ ಬೇಡಿಕೆ ಇದೆ. ಆದರೆ ಪ್ರಸ್ತುತ 10 ಸಾವಿರ ಮೆಟ್ರಿಕ್ ಟನ್ ಮರಳು ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಎಂ-ಮರಳುಗಾರಿಕೆಯ 86 ಘಟಕಗಳು ಇದೆ. ಬೆಂಗಳೂರಿನಲ್ಲಿ 40 ಘಟಕಗಳಿದ್ದು, ಒಂದು ಘಟಕದಲ್ಲಿ ವಾರ್ಷಿಕ 4ರಿಂದ 5 ಕೋಟಿ ವಹಿವಾಟು ನಡೆಯುತ್ತಿದೆ. ಮರಳಿನ ಅಭಾವ ರಾಜ್ಯಾದ್ಯಂತದ ಸಮಸ್ಯೆಯಾಗಿದ್ದು, ಇದರಿಂದ ಮನೆ ಮತ್ತಿತರ ನಿರ್ಮಾಣ ಕಾರ್ಯಗಳಿಗೆ ತೊಂದರೆಯಾಗಿದೆ. ಮುಂದಿನ ಆರು ತಿಂಗಳೊಳಗೆ ಮರಳಿನ ಪ್ರಸಕ್ತ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ನದಿಯಿಂದ ತೆಗೆದಿರುವ ಹೂಳಿನಲ್ಲಿರುವ ಮರಳನ್ನು ಸೋಸಿಕೊಂಡು ಮರು

ಬಳಕೆ ಮಾಡಲು ಅವಕಾಶ ಇದೆ. ಮರಳು ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್, ಬಾರ್‌ಕೋಡ್ ಹೊಂದಿರುವ ಟ್ರಿಪ್ ಶೀಟ್ ಕಡ್ಡಾಯಗೊಳಿಸಲಾಗುವುದು ಎಂದು ಸಚಿವ ವಿನಯ ಕುಲಕರ್ಣಿ ತಿಳಿಸಿದರು.

ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕರಾದ ಮೊಯ್ದಿನ್ ಬಾವಾ,

ಜೆ.ಆರ್.ಲೋಬೋ, ಐವನ್ ಡಿಸೋಜಾ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ., ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಟಿ.ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

ಬಾಕ್ಸ್ ಮಾಡಬಹುದು...

ದ.ಕ. ಜಿಲ್ಲೆಯ ಸಿಆರ್‌ಝೆಡೇತರದಲ್ಲಿ 5 ಮಂದಿಗೆ ಪರವಾನಿಗೆ

ಕರಾವಳಿಯ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ಕೇಂದ್ರದ ಪರಿಸರ ಇಲಾಖೆಯಿಂದ ಅನುಮತಿ ದೊರೆಯಬೇಕಿದೆ. ಒಂದೆರಡು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಯಬಹುದು. ದ.ಕ.ಜಿಲ್ಲೆಯಲ್ಲಿ ಸಿಆರ್‌ಝೆಡೇತರ 38 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. 23 ಬ್ಲಾಕ್‌ಗಳಿಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ 11 ಬ್ಲಾಕ್‌ಗಳಿಗೆ ಟೆಂಡರ್ ಹಾಕಿದ್ದಾರೆ. 5 ಮಂದಿಗೆ ಪರವಾನಗಿ ನೀಡಲಾಗಿದೆ. ಮರಳುಗಾರಿಕೆ ನಡೆಸುವವರು ಸ್ವಂತ ವಾಹನ ಹೊಂದಿರಬೇಕು ಎಂಬ ಷರತ್ತಿನ ಹಿನ್ನೆಲೆಯಲ್ಲಿ ಟೆಂಡರ್ ಹಾಕಲು ಹೆಚ್ಚು ಮಂದಿ ಮುಂದೆ ಬಂದಿಲ್ಲ. ಹಾಗಾಗಿ ಎರಡನೇ ಬಾರಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಸರಕಾರಿ ಇಲಾಖೆಗಳಿಗೆ ಪ್ರತ್ಯೇಕ ಮರಳು ಬ್ಲಾಕ್

ಸರಕಾರಿ ಇಲಾಖೆಗಳಿಗೆ ವಿವಿಧ ಕಾಮಗಾರಿಗಳಿಗೆ ತೊಡಕಾಗದಂತೆ ಮರಳುಗಾರಿಕೆಗೆ ಪ್ರತ್ಯೇಕ ಬ್ಲಾಕ್ ಗುರುತಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.

ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಗಳಲ್ಲಿ ನಿರಂತರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಮರಳಿನ ಕೊರತೆ ಬಾರದಂತೆ ಪ್ರತ್ಯೇಕ ಬ್ಲಾಕ್‌ಗಳನ್ನು ಗುರುತಿಸಲಾಗುವುದು. ಆ ಬ್ಲಾಕ್‌ಗಳಲ್ಲಿ ಮಾತ್ರ ಸಂಬಂಧಪಟ್ಟ ಇಲಾಖೆಗಳು ಮರಳುಗಾರಿಕೆ ನಡೆಸಬುದಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News