×
Ad

ಬಸ್ಸು ನಿಲ್ದಾಣವನ್ನು ಬಂಡೀಮಠಕ್ಕೆ ಸ್ಥಳಾಂತರಿಸಿ - ಪುರಸಭೆ ಸದಸ್ಯ ಮಹಮ್ಮದ್ ಆಕ್ಷೇಪಣೆ

Update: 2016-03-10 18:01 IST

ಬಸ್ಸು ನಿಲ್ದಾಣವನ್ನು ಬಂಡೀಮಠಕ್ಕೆ ಸ್ಥಳಾಂತರಿಸಿ ಎಂದು ಪುರಸಭೆ ಸದಸ್ಯ ಮಹಮ್ಮದ್ ಆಕ್ಷೇಪಿಸಿದ್ದಾರೆ. ಅವರು ಗುರುವಾರ ನಡೆದ ಪುರಸಭೆ ಕಲಾಪದಲ್ಲಿ ಮಾತನಾಡಿ, ರಸ್ತೆಯಲ್ಲಿ ಡಿವೈಡರ್ ಇಲ್ಲದ ಪರಿಣಾಮ ಸದಾಶಿವ ಆಚಾರ್ಯ ರಿಕ್ಷಾ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ. ರಸ್ತೆ ಅಗಲೀಕರಣ ಹಾಗೂ ಚರಂಡಿ ನಿರ್ಮಾಣ ಕುರಿತಂತೆ ಜಿಲ್ಲಾಡಳಿತ ತೋರಿದ ವೈಫಲ್ಯದಿಂದ ಈ ಸಾವು ಘಟಿಸಿದೆ ಎನ್ನುವುದು ಪತ್ರಿಕೆಗಳಲ್ಲಿ ವರದಿಯಾಗಿದೆ ಎಂದರು. ಕಲಾಪ ಆರಂಭವಾಗುತ್ತಿದ್ದಂತೆ ಪುರಸಭೆ ಸದಸ್ಯ ಶ್ರೀಧರ್ ತಮ್ಮ ವಾರ್ಡ್ ಹಾಗೂ ನನ್ನ ಮನೆಗೆ ನೀರೇ ಬರುತ್ತಿಲ್ಲ ಎಂದು ಆರೋಪಿಸಿ ಸದನದ ಕೆಳಗಿಳಿದು ಪ್ರತಿಭಟನೆ ಆರಂಭಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಿದೆ ಎಂದು ಅಧ್ಯಕ್ಷ ರೆಹಮತ್ ಎನ್.ಶೇಖ್ ಹೇಳಿದರು. ವಿದ್ಯುತ್ ಸಮಸ್ಯೆಯಿಂದ ತೊಂದರೆಯಾಗುತ್ತಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದಾಗ, ನಳಿನಿ ಆಚಾರ್ಯ ಮಾತನಾಡಿ, ನಮ್ಮ ವಾರ್ಡ್‌ನಲ್ಲೂ ನೀರಿನ ಸಮಸ್ಯೆಯಿದೆ. ಶಾಂತಿ ಶೆಟ್ಟಿ, ನವೀನ್ ದೇವಾಡಿಗ, ಯೋಗೀಶ್ ದೇವಾಡಿಗ, ಸುನಿಲ್ ಕೋಟ್ಯಾನ್ ಮುಂತಾದವರು ತಮ್ಮ ವಾರ್ಡ್‌ನಲ್ಲಿರುವ ನೀರಿನ ಸಮಸ್ಯೆಯ ಬಗ್ಗೆ ಗಮನ ಸೆಳೆದರು.

ರಸ್ತೆ ಅಗಲೀಕರಣ ಪೂರ್ಣಗೊಳಿಸಿ, ಜಾಗ ಬಿಟ್ಟುಕೊಡದೆ ಅಸಹಕಾರ ನೀಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಿ. ಈಗಾಗಲೇ ರಸ್ತೆಯ ಜಾಗ ಸ್ವಾದೀನಪಡಿಸಿಕೊಳ್ಳಲು ಭೂಸ್ವಾಧೀನ ಪ್ರಕ್ರಿಯೆಗೆ ನಿರ್ಣಯಿಸಲಾಗಿತ್ತು. ಆದರೆ ಕೌನ್ಸಿಲ್ ಕೈಗೊಂಡ ನಿರ್ಣಯ ಅನುಷ್ಟಾನವಾಗುತ್ತಿಲ್ಲ ಎಂದು ಸುಭಿತ್ ಎನ್.ಆರ್ ಆರೋಪಿಸಿದರು. ಗಿರಿಧರ್ ನಾಯಕ್ ಮಾತನಾಡಿ ಈ ಕುರಿತಂತೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂದು ದೂರಿದರು. ಮೊಹಮ್ಮದ್ ಶರೀಫ್ ಮಾತನಾಡಿ, ರಸ್ತೆ ಅಗಲೀಕರಣದ ಕುರಿತಂತೆ ಯಾವ ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹೇರಬಾರದು ಎಂದಾಗ ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ಜನತೆಯ ಮತ್ತು ಸದಸ್ಯರ ಸಹಕಾರವಿದ್ದರೆ ಮಾತ್ರ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಧ್ಯ ಎಂದರು. ನಾಳೆಯಿಂದಲೇ ಮುಖ್ಯರಸ್ತೆಯ ಕಾಮಗಾರಿ ಬಗ್ಗೆ ಕಾರ್ಯಪ್ರವೃತ್ತನಾಗುತ್ತೇನೆ. ಕಾನೂನು ಉಲ್ಲಂಘಿತರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ. ಯಾವ ಒತ್ತಡವೂ ನನ್ನ ಮೇಲೆ ಹೇರಬಾರದು ಎಂದು ಅವರು ಈ ಸಂದರ್ಭ ತಿಳಿಸಿದರು. ಸರ್ವ ಸದಸ್ಯರು ಮುಖ್ಯಾಧಿಕಾರಿಗಳು ಕೈಗೊಂಡ ನಿರ್ಣಯದ ಬಗ್ಗೆ ಸಭೆಯಲ್ಲಿ ಆಕ್ಷೇಪಿಸದೆ ಬೆಂಬಲಿಸಿದರು.

ಜಿಲ್ಲಾಡಳಿತ ಕಾರಣ :

ಪ್ರಿಯಾ ರಾಜೇಂದ್ರ ಮಾತನಾಡಿ, ಬಸ್ಸು ನಿಲ್ದಾಣ ಸುಂಕ ವಸೂಲಿ ಗುತ್ತಿಗೆಯಲ್ಲಿ ತಾರತಮ್ಯವಾಗಿದ್ದು, ಸಮರ್ಪಕ ನ್ಯಾಯ ಲಭಿಸದಿದ್ದಲ್ಲಿ ಪುರಸಭೆಯ ಎಲ್ಲಾ ಅವ್ಯವಹಾರ ಬಯಲಿಗೆಳೆಯುತ್ತೇನೆ ಎಂದರು. ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಶಿಕಲ ರಾಣೆ, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಮುಖ್ಯಾಧಿಕಾರಿ ರಾಯಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News