ಭಟ್ಕಳ: ಬಿಜೆಪಿಗರಿಂದ ಕಾಂಗ್ರೇಸ್ ಮುಖಂಡರ ಮೇಲೆ ಹಲ್ಲೆ ಪ್ರಕರಣ, ಗೃಹ ಸಚಿವರಿಗೆ ದೂರು ನೀಡಲು ಕಾಂಗ್ರೇಸ್ ನಿರ್ಧಾರ
ಭಟ್ಕಳ: ಹಾಡುಹಗಲೇ ಪೊಲೀಸ್ ಠಾಣೆಗೆ ನುಗ್ಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠಲ್ ನಾಯ್ಕ ರ ಮೇಲೆ ಬಿಜೆಪಿಗರು ಹಲ್ಲೆ ನಡೆಸಿದ್ದು ಇದರ ನಂತರದ ಬೆಳವಣಿಗೆಗಳಿಂದ ಪೊಲೀಸರು ಕಾಂಗ್ರೇಸ್ ಪಕ್ಷವನ್ನು ದಮನಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ಕಾಂಗ್ರೇಸ್ ಮುಖಂಡರು ಈ ಕುರಿತಂತೆ ಗೃಹಸಚಿವರಿಗೆ ದೂರು ಸಲ್ಲಿಸಲು ಕಾಂಗ್ರೇಸ್ ನಿರ್ಧರಿಸಿದೆ ಎನ್ನುವ ವಿಷಯ ತಿಳಿದುಬಂದಿದೆ.
ಗುರುವಾರ ತಾಲೂಕಿನ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಪಕ್ಷದ ಮುಖಂಡ ಹಾಗೂ ಶಾಸಕ ಮಾಂಕಾಳು ವೈದ್ಯರೊಡನೆ ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ವಿಷಯ ಬಹಿರಂಗವಾಗಿದ್ದು ವಾಟ್ಸ್ಅಪ್ ಮೂಲಕ ಹಲವು ದಿನಗಳಿಂದ ಇಲ್ಲಿನ ಶಾಂತಿ ಸೌಹಾರ್ಧತೆಯನ್ನು ಕೆಡಿಸುವ ಪ್ರಯತ್ನಗಳು ಬಿಜೆಪಿ ಹಾಗೂ ಅದರ ಸೋದರ ಸಂಘಟನೆಗಳ ಸದಸ್ಯರಿಂದ ಅವ್ಯಹತವಾಗಿ ನಡೆಯುತ್ತಿದ್ದರೂ ಈ ಕುರಿತು ವಿವಿಧ ಸಂಘಟನೆಗಳು ಸಾಮಾಜಿಕ ಕಾರ್ಯಕರ್ತರು ಪೊಲೀಸರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆ ನಿಷ್ಕ್ರಿಯತೆಯನ್ನು ತೋರುತ್ತಿದ್ದು ಇದರಿಂದಾಗಿ ಶಾಂತಿಕದಡುವ ಮಂದಿಗೆ ಆನೆ ಬಲಬಂದಂತಾಗಿದೆ. ಇಲ್ಲಿನ ಅಲ್ಪಸಂಖ್ಯಾತರ ವಿರುದ್ಧ ಇಲ್ಲಸಲ್ಲದೆ ಅವಹೇಳನ ಬರಹಗಳು ದಿನಕ್ಕೊಂದರಂತೆ ವಾಟ್ಟ್ಅಪ್ ನಲ್ಲಿ ಹರಿದಾಡುತ್ತಿದ್ದರೂ ಪೊಲೀಸರು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಜಾಣಕುರುಡು ಅನುಸರಿಸುತ್ತಿದ್ದಾರೆ. ಕಿಡಿಗಳಿಗಳ ವಿರುದ್ದ ಕ್ರಮ ಜರಗಿಸಿದ್ದೇ ಆದಲ್ಲಿ ಇಂದು ಪೊಲೀಸ್ ಠಾಣೆ ನುಗ್ಗಿ ಪೊಲೀಸ ಎದುರೇ ಹಲ್ಲೆ ಮಾಡುವ ದೈರ್ಯ ಕಿಡಿಗೇಡಿಗಳಿಗೆ ಬರುತ್ತಿರಲಿಲ್ಲ ಎನ್ನುವ ಮಾತುಗಳು ಸಭೆಯಲ್ಲಿ ಕಾರ್ಯಕರ್ತರಿಂದ ಕೇಳಿಬಂತು ಎನ್ನಲಾಗಿದ್ದು ಬುಧವಾರದ ಘಟನೆಗೆ ಸಂಬಂಧಿಸಿದಂತೆ ಆಕ್ರೋಶಿತ ಕಾಂಗ್ರೇಸ್ ಕಾರ್ಯಕರ್ತರು ಭಟ್ಕಳ ಬಂದ್ ಗೆ ಕರೆ ಕೊಡುವಂತೆ ಮುಖಂಡರಲ್ಲಿ ಒತ್ತಾಯಿಸಿದ್ದಾರೆ. ಆದರೆ ಶಾಸಕ ವೈದ್ಯ ಭಟ್ಕಳದಲ್ಲಿ ಶಾಂತಿ ಯನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದ್ದು ಬಂದ್ ಬಗ್ಗೆ ಯೋಚಿಸದೇ ಭಟ್ಕಳದ ಸ್ಥಿತಿಗತಿ ಹಾಗೂ ಪೊಲೀರ ನಿಷ್ಕ್ರೀಯತೆ ಕುರಿತಂತೆ ರಾಜ್ಯ ಗೃಹ ಸಚಿವರಿಗೆ ದೂರು ನೀಡುವ ನಿರ್ಧಾರ ಕೈಗೊಂಡಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ.