×
Ad

ಮನಪಾ ಒಳಚರಂಡಿ ಪುನರ್‌ನಿರ್ಮಾಣ: ಮೇಯರ್ ಹರಿನಾಥ್

Update: 2016-03-11 16:33 IST

ಮಂಗಳೂರು, ಮಾ. 11: ಜನರ ನಿರೀಕ್ಷೆ, ಬೇಡಿಕೆಗಳಿಗೆ ತಕ್ಕುದಾಗಿ ಕಾರ್ಯ ನಿರ್ವಹಿಸಲು ತಾನು ಬದ್ಧವಾಗಿದ್ದು, ನಗರದ ಒಳಚರಂಡಿ ವ್ಯವಸ್ಥೆಯನ್ನು ಪುನರ್ ನಿರ್ಮಿಸುವ ನಿಟ್ಟಿನಲ್ಲಿ ಹಳೆಯ ಪೈಪ್‌ಲೈನ್‌ಗಳನ್ನು ತೆಗೆದು ಹೊಸತನ್ನು ಅಳವಡಿಸುವ ಕಾರ್ಯವನ್ನು ಮಾಡುವುದಾಗಿ ನೂತನ ಮೇಯರ್ ಹರಿನಾಥ್ ಭರವಸೆ ನೀಡಿದ್ದಾರೆ.
ನೂತನ ಮೇಯರ್ ಆಗಿ ಇಂದು ಆಯ್ಕೆಯಾದ ಅವರು ಮನಪಾ ಸದಸ್ಯರು, ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಸ್ನೇಹಿತರಿಂದ ಮನಪಾ ಸಭಾಂಗಣದಲ್ಲಿ ಶುಭಾಶಯಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮನಪಾ ಜನತೆಯ ನಿರೀಕ್ಷೆ ಬಹಳಷ್ಟಿದ್ದು, ಅವರ ನಿರೀಕ್ಷೆಗಳೆಲ್ಲವನ್ನೂ ಪೂರೈಸಲು ಸಾಧ್ಯವಾಗದಿದ್ದರೂ ಜನರಿಗೆ ನ್ಯಾಯ, ಸಮಸ್ಯೆಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಮನಪಾ ವತಿಯಿಂದ ಈಗಾಗಲೇ ಪೌರ ಕಾರ್ಮಿಕರಿಗೆ ಗೃಹಭಾಗ್ಯ, ನಗರವನ್ನು ಸೀಮೆಎಣ್ಣೆ ಮುಕ್ತ ನಗರ, ಪುರಭವನಕ್ಕೆ ಹೊಸ ರೂಪು, ಕಾಂಕ್ರಿಟೀಕರಣ ಗೊಂಡ ರಸ್ತೆಗಳಲ್ಲಿ ಚರಂಡಿ ನಿರ್ಮಾಣಕ್ಕೆ ಟೆಂಡರ್ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ.

ನಗರದಲ್ಲಿ ಶೀಘ್ರದಲ್ಲೇ ಉಚಿತ ಆ್ಯಂಬುಲೆನ್ಸ್ ಸೇವೆ
ನಗರದಲ್ಲಿ ಶೀಘ್ರವೇ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗುತ್ತಿದ್ದು, ಆರಂಭದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಖಾಸಗಿ ವಾಹನದ ಮೂಲಕ ಈ ಸೇವೆ ಆರಂಭಗೊಳ್ಳಲಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ನೂತನ ಮೇಯರ್ ಹರಿನಾಥ್ ತಿಳಿಸಿದರು.
ಎಂಟು ಅಂಶಗಳ ಕ್ರಿಯಾ ಯೋಜನೆ ಮೂಲಕ ನಗರದಲ್ಲಿ ಮಲೇರಿಯಾ ರೋಗ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ ಇರಿಸಲಾಗಿದ್ದು, ಈ ಹಿಂದಿನ ಮೇಯರ್‌ಗಳು ಕೈಗೊಂಡ ಪ್ಲಾಸ್ಟಿಕ್ ಮುಕ್ತ ನಗರದ ಯೋಜನೆಗೆ ಒತ್ತು ನೀಡಲಾಗುವುದು ಎಂದರು.


ಮಾರುಕಟ್ಟೆಗಳ ನಿರ್ಮಾಣಕ್ಕೆ ಆದ್ಯತೆ
ನಗರದಲ್ಲಿ ಮಂಗಳೂರು ಸೆಂಟ್ರಲ್, ಕಾವೂರು, ಕಂಕನಾಡಿ, ಸುರತ್ಕಲ್‌ನಲ್ಲಿ ಮಾರುಕಟ್ಟೆ ನಿರ್ಮಾಣ ಕಾರ್ಯವನ್ನು ಆದ್ಯತೆ ನೆಲೆಯಲ್ಲಿ ಕೈಗೊಳ್ಳುವುದಾಗಿ ಹೇಳಿದ ನೂತನ ಮೇಯರ್ ಹರಿನಾಥ್, ಮಂಗಳೂರು ಸೆಂಟ್ರಲ್ ಮಾರುಕಟ್ಟೆಯನ್ನು ಈಗಾಗಲೇ ಸಮೀಕ್ಷೆ ಮಾಡಿದ್ದು, ಇದ್ದ ಜಾಗದಲ್ಲಿಯೇ ಕಡಿಮೆ ಅವಧಿಯಲ್ಲಿ ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಕೆಪಿಟಿಯಲ್ಲಿ ವಾಹನ ದಟ್ಟಣೆ ಅಧಿಕವಾಗಿರುವುದರಿಂದ ಅಲ್ಲಿ ಫ್ಲೈ ಓವರ್ ನಿರ್ಮಾಣ ಮಾಡುವ ಬಗ್ಗೆ ರಾಷ್ಟ್ರೀಯ ಹೆದ್ದಾರಿಯವರ ಜತೆ ಈಗಾಗಲೇ ಚರ್ಚೆ ನಡೆದಿದೆ. ಅವರು ಮನಪಾಕ್ಕೆ ಅನುಮತಿ ನೀಡಿದ್ದಲ್ಲಿ ಅಲ್ಲಿ ಫ್ಲೈ ಓವರ್ ಅಥವಾ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸುದ್ದಿಗಾರರ ಪ್ರಶ್ನೆಗೆ ಹರಿನಾಥ್ ಪ್ರತಿಕ್ರಿಯಿಸಿದ್ದಾರೆ.
ನಗರದ ಸಮಗ್ರ ಅಭಿವೃದ್ಧಿ ಬದ್ದ: ಸುಮಿತ್ರಾ ಕರಿಯ
ತಾನು ಉಪ ಮೇಯರ್ ಸ್ಥಾನವೇರಲು ಸಹಕರಿಸಿದ ಪಕ್ಷಕ್ಕೆ ಆಭಾರಿಯಾಗಿದ್ದು, ನಗರದ ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಉಪ ಮೇಯರ್ ಸುಮಿತ್ರಾ ಕರಿಯ ಅಭಿಪ್ರಾಯಿಸಿದ್ದಾರೆ.
ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸೇರಿದಂತೆ ಪಕ್ಷದ ಹಿರಿಯ ಸದಸ್ಯರು, ಕಾರ್ಯಕರ್ತರು, ಹಿತೈಷಿಗಳಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ದಯವಿಟ್ಟು ಉದ್ಘಾಟನೆ- ಸಭೆ ಸಮಾರಂಭಗಳಿಗೆ ಕರೆಯಬೇಡಿ!
ದಯವಿಟ್ಟು ಉದ್ಘಾಟನೆಗಳು ಸಭೆ ಸಮಾರಂಭಕ್ಕೆ ಕರೆಯಬೇಡಿ. ಆ ಸಮಯವನ್ನು ಜನರ ಕೆಲಸಕ್ಕೆ ಮೀಸಲಿಡಲು ಅವಕಾಶ ನೀಡಿ. ಇದು ನನ್ನ ನಗರದ ಜನತೆಯಲ್ಲಿ ವಿನಮ್ರ ಮನವಿ ಎಂದು ಹೇಳುವ ಮೂಲಕ ಜನ ಪ್ರತಿನಿಧಿಗಳು ಜನರ ಸೇವೆಗೆ ಒತ್ತು ನೀಡಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಾ ನೂತನ ಮೇಯರ್ ಹರಿನಾಥ್ ಹೊಸ ಪರಿಪಾಠವೊಂದಕ್ಕೆ ನಾಂದಿ ಹಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News