×
Ad

ಮೂಡುಬಿದಿರೆ: ಭ್ರಷ್ಟಾಚಾರ ನಿರ್ಮೂಲನೆಯಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯ: ಜಸ್ಟಿಸ್ ಚಂದ್ರಶೇಖರಯ್ಯ

Update: 2016-03-11 19:59 IST

  ಮೂಡುಬಿದಿರೆ: ಭ್ರಷ್ಟಾಚಾರವೆಂಬುದು ಸಮಾಜಕ್ಕೆ ಕ್ಯಾನ್ಸರ್ ರೋಗವಾಗಿ ಪರಿಣಮಿಸಿದೆ. ಮೌಲ್ಯಯುತ ಶಿಕ್ಷಣದ ಮೂಲಕ ಭ್ರಷ್ಟಾಚಾರದಂತಹ ಪಿಡುಗುಗಳನ್ನು ನಿವಾರಣೆ ಮಾಡಬಹುದು. ಭ್ರಷ್ಟಾಚಾರ ನಿರ್ಮೂಲನೆಯಾದರೆ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ ನ್ಯಾಯಾಧೀಶ ಚಂದ್ರಶೇಖರಯ್ಯ ಹೇಳಿದರು.

ಅವರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಭಕ್ತಿವೇದ ಅಕಾಡೆಮಿ ಫಾರ್ ಕಲ್ಚರಲ್ ಎಂಡ್ ಕ್ಯಾರೆಕ್ಟರ್ ಎಜ್ಯುಕೇಶನ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಶುಕ್ರವಾರ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಬಿಎಸಿಸಿಇ ವ್ಯಕ್ತಿತ್ವಕೋರ್ಸ್‌ನ್ನು ಉದ್ಘಾಟಿಸಿ ಮಾತನಾಡಿದರು.

  ಸಾಹಿತ್ಯದ ಓದು ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ. ಭವಿಷ್ಯದ ಅಭಿವೃದ್ಧಿ, ಯಾವುದೇ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸಾಹಿತ್ಯದ ಓದಿನ ಸಾರ ಪ್ರಯೋಜನವಾಗುತ್ತದೆ. ನಾವು ಯಾವುದೇ ಕ್ಷೇತ್ರದಲ್ಲಿ ತೊಡಗಿಸಿದರೂ ಸಾಹಿತ್ಯದಿಂದ ದೂರವಾಗಬಾರದು. ಯುವಕರು ನೈತಿಕ ಪೊಲೀಸ್‌ಗಿರಿಯಂತಹ ಚಟುವಟಿಕೆಗಳಿಂದ ದೂರವಿರಬೇಕು. ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
 
ದ.ಕ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀವಿದ್ಯಾ ಮುಖ್ಯ ಅತಿಥಿಯಾಗಿ ಮಾತನಾಡಿ, ನಾವು ಏನು ಶೈಕ್ಷಣಿಕ ಅರ್ಹತೆಯನ್ನು ಪಡೆದಿದ್ದೇವೆ ಎನ್ನುವದಕ್ಕಿಂತ ಜೀವನ ಮೌಲ್ಯವನ್ನು ಹೇಗೆ ರೂಢಸಿಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಸುಶಿಕ್ಷಿತರಿಂದಲೇ ಗೂಂಡಾಗಿರಿಯಂತಹ ಸಮಾಜ ವಿರೋಧಿ ಕೆಲಸಗಳು ಹೆಚ್ಚಾಗುತ್ತಿದ್ದು, ಜೀವನ ಮೌಲ್ಯದ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಪರಸ್ಪರ ವಿಶ್ವಾಸ, ಸ್ವಯಂ ವ್ಯಕ್ತಿತ್ವ ನಿರ್ಮಾಣ, ಆಶಾವಾದ ವಿದ್ಯಾರ್ಥಿಗಳಲ್ಲಿರಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು.

ಬಿಎಸಿಸಿಇ ಸ್ಥಾಪಕ ಶರದ್ ವಿಹಾರಿ ದಾಸ ಪ್ರಾಸ್ತಾವಿಕವಾಗಿ ಮಾತನಾಡಿ, ಆಧ್ಮಾತ್ಮಿಕವಾಗಿ ವಿದ್ಯಾರ್ಥಿಗಳನ್ನು ಗಟ್ಟಿಗೊಳಿಸಲು ದ.ಕ ಜಿಲ್ಲೆ ಸರ್ಕಾರಿ ಶಾಲಾ-ಕಾಲೇಜು ಸಹಿತ ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ಈ ಕೋರ್ಸ್ ಅನ್ನು ಆಯೋಜಿಸುತ್ತೇವೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಮಂಗಳೂರು ವಕೀಲರ ಸಂಘದ ಹಿರಿಯ ಸಲಹೆಗಾರ ಸೀತಾರಾಮ ಶೆಟ್ಟಿ, ಟೆಲಿಮ್ಯಾಟಿಕ್ಸ್4ಯು ಉದ್ಯಮ ಮುಖ್ಯಸ್ಥ ಹರ್ಷ ಮುಖ್ಯ ಅತಿಥಿಯಾಗಿದ್ದರು. ಪ್ರಶಾಂತ್ ಮಿರಾಂಡ ಔದ್ಯೋಗಿಕವಾಗಿ ವ್ಯಕ್ತಿತ್ವ ವಿಕಸನಗೊಳಿಸುವ ಕುರಿತು ಮಾತನಾಡಿದರು. ರವೀಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. --

ಆಳ್ವಾಸ್‌ನಲ್ಲಿ ಬಿಎಸಿಸಿಇ ವ್ಯಕ್ತಿತ್ವಕೋರ್ಸ್‌ನ್ನು ಜಸ್ಟಿಸ್ ಚಂದ್ರಶೇಖರಯ್ಯ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News