×
Ad

ಮಂಗಳೂರು: ಕಾರ್ಪ್ ಬ್ಯಾಂಕ್‌ನ 111ನೆ ಸಂಸ್ಥಾಪನಾ ದಿನಾಚರಣೆ

Update: 2016-03-12 19:35 IST

ಮಂಗಳೂರು, ಮಾ.12: ಕಾರ್ಪೋರೇಶನ್ ಬ್ಯಾಂಕ್‌ನ 111ನೆ ಸಂಸ್ಥಾಪನಾ ದಿನಾಚರಣೆ ಇಂದುನಗರದ ಪುರಭವನದಲ್ಲಿ ನಡೆಯಿತು. ಬ್ಯಾಂಕ್‌ನ ಸಂಸ್ಥಾಪಕ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ ಸಾಹೇಬರ ಭಾವಚಿತ್ರಕ್ಕೆ ಅತಿಥಿಗಳಿಂದ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಹೊಸ ಉತ್ಪನ್ನ ‘ಇ ಪರ್ಸ್’ನ (ಚುಟ್ಕಿ ಮೇ ಪೇ ಕರೋ) ಉದ್ಘಾಟನೆಯನ್ನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಜೈ ಕುಮಾರ್ ಗರ್ಗ್  ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಾರ್ಪ್ ಬ್ಯಾಂಕ್ ಅನನ್ಯ ಬ್ಯಾಂಕ್ ಆಗಿದ್ದು, ಗ್ರಾಹಕ ಕೇಂದ್ರಿತ ಸೇವೆಯನ್ನು ನೀಡುತ್ತಿದೆ ಎಂದರು.
ಸ್ವದೇಶಿ ಆಂದೋಲನದ ಪರಿಕಲ್ಪನೆಯಡಿ ಆರಂಭಗೊಂಡ ಬ್ಯಾಂಕ್ ಸಾಮಾನ್ಯ ಜನರ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವುದಲ್ಲದೆ ಬ್ಯಾಂಕಿಂಗ್ ಕ್ಷೇತ್ರದ ಸವಾಲುಗಳನ್ನು ಅವಕಾಶಗಳಾಗಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಾಗತಿಕ ಆರ್ಥಿ ಕುಸಿತದ ಪರಿಣಾಮ ಕಾರ್ಪ್ ಬ್ಯಾಂಕ್‌ಗೆ ಯಾವುದೇ ತೊಂದರೆ ನೀಡಿಲ್ಲ. ಮಾತ್ರವಲ್ಲದೆ ಸಾಲ ವಸೂಲಾತಿಗಾಗಿ ಶಿಬಿರವೊಂದರಲ್ಲೇ 127 ಕೋಟಿ ರೂ.ಗಳನ್ನು ವಸೂಲು ಮಾಡುವ ಸಾಧನೆಯನ್ನು ಬ್ಯಾಂಕ್ ಮಾಡಿದೆ ಎಂದು ಅವರು ಹೇಳಿದರು.
ಇ ಪರ್ಸ್ ಮೊಬೈಲ್ ಆಧಾರಿತ ಇ ಪಾವತಿ ಅಪ್ಲಿಕೇಶನ್ ಆಗಿದ್ದು, ಸ್ಮಾರ್ಟ್ ಫೋನ್‌ನ ಪ್ಲೇಸ್ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದು ಕೇಂದ್ರ ಸರಕಾರದ ನಗದು ರಹಿತ ಸಮಾಜ ನಿರ್ಮಾಣದ ಆಶಯಕ್ಕೆ ಪೂರಕವಾಗಿದೆ ಎಂದವರು ಹೇಳಿದರು.
ಕಾರ್ಪ್ ಬ್ಯಾಂಕ್ 2.17 ಕೋಟಿ ಗ್ರಾಹಕರನ್ನು ಹೊಂದಿದ್ದು, ಇಂದು ಕಾರ್ಯಕ್ರಮದಲ್ಲಿ ಮಂಗಳೂರು ಕಾರ್‌ಸ್ಟ್ರೀಟ್ ಶಾಖೆಯ ಗ್ರಾಹಕ ಕುಡ್ಪಿ ಮಾಧವ ಶೆಣೈ, ಬಂದರು ಶಾಖೆಯ ಗ್ರಾಹಕ ಮುಕುಂದ ಹೆಗ್ಡೆ, ಪದವು ಶಾಖೆಯ ಗ್ರಾಹಕ ರಾಮದಾಸ ಶೆಣೈ, ಕಂಕನಾಡಿ ಶಾಖೆಯ ಹಿರಿಯ ಗ್ರಾಹಕ ರಾಘವೇಂದ್ರ ಭಟ್, ಪಾಂಡೇಶ್ವರ ಶಾಖೆಯ ಗ್ರಾಹಕ ಉಳ್ಳಾಲ್ ಸುಂದರ್‌ರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಬ್ಯಾಂಕ್‌ನ ಉದ್ಯೋಗಿಗಳ ವಿಶೇಷ ಸಾಧನೆಗೈದ ಮಕ್ಕಳನ್ನು ಪುರಸ್ಕರಿಸಲಾಯಿತು.
ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಲಕ್ಷ್ಮೀನಾಥ ರೆಡ್ಡಿ, ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಜಯರಾಂ ಭಟ್, ಬ್ಯಾಂಕ್‌ನ ಗ್ರಾಹಕ ಕುಡ್ಪಿ ಮಾಧವ ಶೆಣೈ, ಬ್ಯಾಂಕ್‌ನ ನಿರ್ದೇಶಕರಾದ ಆದೀಶ್ ಕುಮಾರ್ ಜೈನ್, ಏಕನಾಥ ಬಾಳಿಗ, ಆರ್‌ಬಿಐ ಡೆಪ್ಯುಟಿ ಮಾಜಿ ಗವರ್ನರ್ ವಿಠಲದಾಸ್ ಲೀಲಾಧರ್, ಉಪಸ್ಥಿತರಿದ್ದರು.
ಕಾರ್ಪ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್ ಮೆಹ್ತಾ ಸ್ವಾಗತಿಸಿದರು. ಈ ಸಂದರ್ಭ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳು ಮಹತ್ತರ ಕೊಡುಗೆಯನ್ನು ನೀಡುತ್ತಿರುವುದಲ್ಲದೆ ಸಾಮಾಜಿಕ ಜವಾಬ್ಧಾರಿಯನ್ನೂ ನಿರ್ವಹಿಸುತ್ತಿವೆ. ಸಾರ್ವಜನಿಕ ರಂಗದ ಬ್ಯಾಂಕ್‌ಗಳು ನೀಡುವ ಎಲ್ಲಾ ಉತ್ಪನ್ನಗಳನ್ನು ಕಾರ್ಪ್ ಬ್ಯಾಂಕ್ ನೀಡುತ್ತಿದೆ. ಮಾಲ್‌ಗಳಲ್ಲಿ ಒಂದು ಛಾವಣಿಯಡಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯವಾಗುವಂತೆ ಬ್ಯಾಂಕ್‌ನಿಂದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಜೀವವಿಮೆ, ಮ್ಯೂಚುವಲ್ ಫಂಡ್, ಇ ಉತ್ಪನ್ನಗಳಾದ ಇಂಟರ್‌ನೆಟ್ ಬ್ಯಾಂಕಿಂಗ್ ಆರ್‌ಟಿಜಿಎಸ್, ಮೊಬೈಲ್ ಬ್ಯಾಂಕಿಂಗ್, ಇ ಪೇಯ್‌ಮೆಂಟ್ ಹಾಗೂ ಇ ಪರ್ಸ್ ಕೂಡಾ ಈ ಲಭ್ಯವಿದೆ ಎಂದು ಅವರು ಹೇಳಿದರು. 
ಉದ್ಘಾಟನಾ ಸಮಾರಂಭಕ್ಕೂ ಮೊದಲು ಮಾಸ್ಟರ್ ಸದ್ಗುಣ ಐತಾಳ್‌ರಿಂದ ಮಾಂಡೊಲಿನ್ ವಾದನ ನೆರವೇರಿತು. ಮೃದಂಗದಲ್ಲಿ ನಿಕ್ಷಿತ್ ಸಾಥ್ ನೀಡಿದರು.
ಬ್ಯಾಂಕ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಡುಂಡಿರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News