ಮುಡಿಪುವಿನಲ್ಲಿ ‘ಝೇಂಕಾರ-2016’ ಉದ್ಘಾಟನೆ
ಕೊಣಾಜೆ, ಮಾ.12: ವಿದ್ಯೆ, ಸಂಸ್ಕಾರ, ಸಾಧನೆ ಇದು ನಮ್ಮ ಜೀವನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ವಿದ್ಯೆಯಿದ್ದು ಸಂಸ್ಕಾರ ಇಲ್ಲದಿದ್ದರೆ ಅಂತಹ ಜೀವನಕ್ಕೆ ಅರ್ಥವಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲೇ ಸಂಸ್ಕಾರವಂತರಾಗಿ ಉತ್ತಮ ಶಿಕ್ಷಣದೊಂದಿಗೆ ಇಂತಹ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿವೃತ್ತ ಸೈನಿಕ ನಕ್ರೆ ಸುರೇಂದ್ರ ಶೆಟ್ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಡಿಪು-ಕುರ್ನಾಡು ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಶನಿವಾರ ನಡೆದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಝೇಂಕಾರ-2016’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
ಕುರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರಿಧರ್ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಉದ್ಯಮಿ ರಮೇಶ್ ಶೇಣವ ಭಾಗವಹಿಸಿದ್ದರು. ಅಧ್ಯಾಪಕ ಡಾ.ಶ್ರೀಧರ ಮಣಿಯಾಣಿ ಸ್ವಾಗತಿಸಿದರು. ದೈಹಿಕ ಶಿಕ್ಷಕಿ ಶುಭಾ ವಂದಿಸಿದರು. ವಿದ್ಯಾರ್ಥಿಗಳಾದ ಗೌತಮಿ ಹಾಗೂ ಶಬೀರ್ ಕಾರ್ಯಕ್ರಮ ನಿರೂಪಿಸಿದರು.