ಪುತ್ತೂರು : ಹಾರಾಡಿ ಶಾಲೆಯಲ್ಲಿ ವಿಜ್ಞಾನ ಮತ್ತು ಮೆಟ್ರಿಕ್ ಮೇಳ
ಪುತ್ತೂರು : ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇಲ್ಲಿನ ಪೃಥ್ವಿ ವಿಜ್ಞಾನ ಸಂಘ ಹಾಗೂ ಆರ್ಯಭಟ ಗಣಿತ ಸಂಘಗಳ ವತಿಯಿಂದ ವಿಜ್ಞಾನ ಮೇಳ ಮತ್ತು ಗಣಿತ ಮೇಳ ಕಾರ್ಯಕ್ರಮಗಳು ಇತ್ತೀಚೆಗೆ ಶಾಲೆಯಲ್ಲಿ ಜರುಗಿತು.
ವಿಜ್ಞಾನ ಮೇಳವನ್ನು ಬಲೂನ್ ಹಾರಿಸುವ ಮೂಲಕ ಹಿರಿಯ ಶಿಕ್ಷಕಿ ಶ್ರೀಮತಿ ರತ್ನಮ್ಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು "ಶಾಲೆಯ ಈ ತೆರನಾದ ಕ್ರಿಯಾಶೀಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವುದರಿಂದ ಜ್ಞಾನ ಕ್ಷೇತ್ರ ವಿಸ್ತಾರಗೊಳ್ಳುತ್ತದೆ " ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಮಾತನಾಡಿ " ಹಾರಾಡಿ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮುಖವಾದ ವಿಕಾಸಕ್ಕೆ ಎಲ್ಲಾ ತೆರನಾದ ಅವಕಾಶಗಳು ಶಾಲೆಯಲ್ಲಿ ಪ್ರಾಪ್ತವಾಗುತ್ತದೆ " ಎಂದು ನುಡಿದರು. ಶಾಲಾ ಮುಖ್ಯ ಶಿಕ್ಷಕ ಮುದರ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಹೇಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಮತ್ತು ಗಣಿತ ಸಂಘದ ಸದಸ್ಯರಾದ ಶ್ವೇತಾ, ನಿಶಾಂತ್, ಶ್ರಾವ್ಯ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ವಿದ್ಯಾರ್ಥಿಗಳು ತಾವು ತಯಾರಿಸಿದ ವಿಜ್ಞಾನ ಮತ್ತು ಗಣಿತದ ಮಾದರಿಗಳನ್ನು ಪ್ರದರ್ಶಿಸಿದರು.
ಶಾಲಾ ಆವರಣದಲ್ಲಿ ನಡೆಸಲಾಗಿದ್ದ ಮೆಟ್ರಿಕ್ ಮೇಳವನ್ನು ಹಿರಿಯ ಶಿಕ್ಷಕಿ ಶ್ರೀಮತಿ ಹೇಮಲತಾ ಉದ್ಘಾಟಿಸಿದರು. ಹಿರಿಯ ವಿಭಾಗದ ವಿದ್ಯಾರ್ಥಿಗಳು ಹಲವಾರು ರೀತಿಯ ವ್ಯಾಪಾರ ಚಟುವಟಿಕೆಗಳನ್ನು ಈ ಮೇಳದಲ್ಲಿ ಆಯೋಜಿಸಿಕೊಂಡಿದ್ದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ಭಾಗವಹಿಸಿದ್ದರು.