ಕುದುರೆಯ ಕಾಲು ಮುರಿದ ಬಿಜೆಪಿ ಶಾಸಕನ ಕೃತ್ಯಕ್ಕೆ ವ್ಯಾಪಕ ಆಕ್ರೋಶ
ಮುಂಬೈ, ಮಾ. 15 : ಡೆಹ್ರಾಡೂನ್ ನಲ್ಲಿ ಬಿಜೆಪಿ ಶಾಸಕ ಗಣೇಶ್ ಜೋಶಿ ಪೊಲೀಸ್ ಕುದುರೆಗೆ ಎದ್ವಾತದ್ವಾ ದೊಣ್ಣೆಯೊಂದರಲ್ಲಿ ಹೊಡೆದು ಅದರ ಕಾಲು ಮುರಿದು ಹಾಕಿರುವ ಆಘಾತಕಾರಿ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
" ಈ ವ್ಯಕ್ತಿ ಇಡೀ ಸಮಾಜಕ್ಕೆ ಅಪಾಯಕಾರಿ. ಅಮಾಯಕ ಪ್ರಾಣಿಯೊಂದಿಗೆ ಹೀಗೆ ಮಾಡಿದವನು ಮನುಷ್ಯರಿಗೂ ಹೀಗೇ ಮಾಡಬಹುದು. ಈತನನ್ನು ಪಕ್ಷ ಹಾಗು ಶಾಸನ ಸಭೆಯಿಂದ ಹೊರಗೆ ಹಾಕಬೇಕು" ಎಂದು ಪ್ರಾಣಿ ದಯಾ ಸಂಸ್ಥೆ ' ಪೇಟಾ' ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ವಾ ಜೋಶಿಪುರ ಆಗ್ರಹಿಸಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಮುಖಂಡನ ಈ ವರ್ತನೆಯನ್ನು ಸಾರ್ವಜನಿಕವಾಗಿ ಖಂಡಿಸಿ ಸೂಕ್ತ ಸಂದೇಶ ರವಾನಿಸಬೇಕು. ಪಕ್ಷಾಧ್ಯಕ್ಷ ಅಮಿತ್ ಷಾ ಅವರು ಜೋಷಿಯನ್ನು ಪಕ್ಷದಿಂದ ತೆಗೆದು ಹಾಕಬೇಕು ಎಂದು ಪೂರ್ವಾ ಆಗ್ರಹಿಸಿದ್ದಾರೆ.
ಬಾಲಿವುಡ್ ನಟಿ ಸೋನಂ ಕಪೂರ್ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. " ಇದು ಅತ್ಯಂತ ಹೇಯ , ಅಮಾನವೀಯ ವರ್ತನೆ , ನೀವು ಈ ವ್ಯಕ್ತಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೀರಿ ಎಂದು ಆಶಿಸುತ್ತೇನೆ " ಎಂದು ಸೋನಂ , ಉತ್ತಾರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಅವರನ್ನು ಆಗ್ರಹಿಸಿದ್ದಾರೆ.