ಮಂಜೇಶ್ವರ : ಚೆಕ್ಪೋಸ್ಟ್ ದಾಂಧಲೆ-ಇಬ್ಬರ ಸೆರೆ
ಮಂಜೇಶ್ವರ: ಮಂಜೇಶ್ವರ ವಾಣಿಜ್ಯ ತೆರಿಗೆ ಚೆಕ್ಪೋಸ್ಟ್ ನಲ್ಲಿ ಸ್ಕೂಟರ್-ಮೀನಿನ ಲಾರಿ ಡಿಕ್ಕಿಯಾಗಿ ವಿದ್ಯಾರ್ಥಿ ಶಹದಾನ್(22)ಮೃತಪಟ್ಟ ಘಟನೆಯ ಬಳಿಕ ನಡೆದ ರಸ್ತೆತಡೆ ಬಳಿಕದ ಅಹಿತಕರ ಘಟನೆಗೆ ಸಂಬಂಧಿಸಿ ಇಬ್ಬರನ್ನು ಮಂಜೇಶ್ವರ ಪೋಲೀಸರು ಬಂಧಿಸಿದ್ದಾರೆ.
ಮೀಯಪದವು ನಿವಾಸಿ ಡಿವೈಎಫ್ಐ ಕಾರ್ಯಕರ್ತ ಮುಹಮ್ಮದ್ ಅಸೀಫ್(30) ಹಾಗೂ ಪಚ್ಲಂಪಾರೆಯ ಕಲಂದರ್ (28)ಎಂಬವರನ್ನು ಮಂಜೇಶ್ವರ ಎಸ್ ಐ ಪ್ರಮೋದ್ ನೇತೃತ್ವದ ತಂಡ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರಸ್ತೆತಡೆ,ದಾಂಧಲೆಯ ಸಂದರ್ಭದಲ್ಲಿ ಆಗಮಿಸಿದ ಜಿಲ್ಲಾ ಪೋಲೀಸ್ ವರಿಷ್ಠ ಡಾ.ಎ.ಶ್ರೀನಿವಾಸ್ ರ ವಾಹನಕ್ಕೆ ಕಲ್ಲೆಸೆತ,ಅಬಕಾರಿ ಇಲಾಖೆಯ ಕಚೇರಿಗೆ ಹಾನಿ,ಜೀಪು ಹಾನಿಗೊಳಿಸಿರುವುದು,ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿ,ವ್ಯಾನ್ ಗಳನ್ನು ಹಾನಿಗೊಳಿಸಿರುವುದು,ರಸ್ತೆಸಾರಿಗೆ ಬಸ್ ಗೆ ಕಲ್ಲೆಸೆದು ಹಾನಿಗೊಳಿಸಿರುವುದು ಮೊದಲಾದ ಪ್ರಕರಣದಲ್ಲಿ ನೀಡಿದ ದೂರಿನಂತೆ ಈ ಘಟನೆಗೆ ಸಂಬಂಧಸಿ 250 ಮಂದಿಯ ವಿರುದ್ದ ದೂರು ದಾಖಲಿಸಲಾಗಿದೆ.