ಮಂಗಳೂರು : ಎ.ಜೆ ಆಸ್ಪತ್ರೆಯಲ್ಲಿ ಅಪರೂಪದ ಚಿಕಿತ್ಸೆ
ಮಂಗಳೂರು, ಮಾ. 21: ಏಳು ಜನ ಮಕ್ಕಳ ಹೃದಯದಲ್ಲಿ ಜನ್ಮತಃ ರಂದ್ರವಿರುವ ವೆಂಟ್ರಿಕ್ಯುಲರ್ ಸೆಪ್ಟಲ್ ದೋಷವನ್ನು ಪತ್ತೆ ಹಚ್ಚಿ ನಗರದ ಎ ಜೆ ಆಸ್ಪತ್ರೆಯಲ್ಲಿ ಅಪರೂಪದ ಚಿಕಿತ್ಸೆಯನ್ನು ನಡೆಸಲಾಯಿತು.
ಮಕ್ಕಳ ಹೃದ್ರೋಗ ತಜ್ಞರಾದ ಡಾ. ಪ್ರೇಮ್ ಆಳ್ವ ಅವರ ನಾಯಕತ್ವದಲ್ಲಿ ಅರಿವಳಿಕೆ ತಜ್ಞರಾದ ಡಾ. ಬಿ.ವಿ . ತಂತ್ರಿ ಮತ್ತು ಡಾ. ಟ್ರೆವರ್ ಸಿಕ್ವೇರಾ ಇವರುಗಳ ಸಹಯೋಗದೊಂದಿಗೆ ಚಿಕಿತ್ಸೆಯನ್ನು ನೀಡಲಾಯಿತು. ಈ ಚಿಕಿತ್ಸೆಗೆ ಒಳಗಾಗಿದ್ದ ಎಲ್ಲಾ 7 ಮಕ್ಕಳು ಆರೋಗ್ಯವಂತರಾಗಿದ್ದು ಮೂರು ದಿನಗಳ ಅವಧಿಯಲ್ಲೇ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಮೊತ್ತಮೊದಲ ಬಾರಿಗೆ ಮಂಗಳೂರಿನಲ್ಲಿ ಅಪಧಮನಿಯ ಮೂಲಕ .ಎಸ್.ಡಿ.ಗಳನ್ನು ಎ.ಡಿ.ಒ. 1 ಸಾಧನಗಳನ್ನು ಉಪಯೋಗಿಸಿ ಈ ಚಿಕಿತ್ಸೆಯನ್ನು ಮಾಡಲಾಯಿತು.
ಈ ಏಳು ಮಕ್ಕಳಿಗೆ ಪದೇ ಪದೇ ಶ್ವಾಸಕೋಶದ ಸೋಂಕು, ಆಟ ಆಡುವಾಗ ಉಸಿರಾಟದ ತೊಂದರೆ ಮತ್ತು ಇತರ ಮಕ್ಕಳಂತೆ ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಎ. ಜೆ. ಆಸ್ಪತ್ರೆಯಲ್ಲಿ ಎಕೋಕಾರ್ಡಿಯೋಗ್ರಾಮ್ ಮಾಡುವ ಮೂಲಕ ಈ ದೋಷಗಳನ್ನು ಪತ್ತೆಹಚ್ಚಲಾಯಿತು ಮತ್ತು ಕೆಲವು ಮಕ್ಕಳ ಹೃದಯದ ಎಡ ಭಾಗವು ಅಸಹಜವಾಗಿ ದೊಡ್ಡದಾಗಿದ್ದು ಹೃದಯದ ಒತ್ತಡವು ಹೆಚ್ಚಾಗಿತ್ತು. ಆದ್ದರಿಂದ ಈ ರಂದ್ರಗಳನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆಯಿಲ್ಲದೆ ಶುದ್ದ ರಕ್ತವನ್ನು ಕೊಂಡು ಹೋಗುವ ಅಪಧಮನಿಯ ಮೂಲಕ ಡಿವೈಸ್ ಕ್ಲೋಷರ್ ಆಫ್ ಎಸ್ಡಿ ತಂತ್ರಜ್ಞಾನವನ್ನು ಬಳಸಿ ಮುಚ್ಚಲು ನಿರ್ಧರಿಸಲಾುತು. ಹೃದಯದ ರಂಧ್ರದ ಗಾತ್ರ ಮತ್ತು ರಂಧ್ರವನ್ನು ಮುಚ್ಚಲು ಬೇಕಾಗುವ ಸಾಧನದ ನಿಖರವಾದ ಗಾತ್ರವನ್ನು ಪತ್ತೆಹಚ್ಚುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಮಂಗಳೂರಿನಲ್ಲಿ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವಿಶೇಷವಾಗಿ ಮಕ್ಕಳ ಹೃದ್ರೋಗ ಭಾಗವನ್ನು ಹೊಂದಿರುವ ಏಕೈಕ ಕೇಂದ್ರವಾಗಿದ್ದು ಇದೇ ರೀತಿಯ ಹೆಚ್ಚಿನ ಗುಣಮಟ್ಟದ ಸೇವೆಯನ್ನು ನೀಡಲು ಆಶಿಸುತ್ತೇವೆ ಎಂದು ಡಾ. ಪ್ರೇಮ್ ಆಳ್ವರವರು ತಿಳಿಸಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಅನೇಕ ಸರಕಾರಿ ಯೋಜನೆಗಳ ಮೂಲಕ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗಿದೆ.