ಪುತ್ತೂರು : ಮಾ.24ರಂದು ಪುತ್ತೂರಿನಲ್ಲಿ ಧರಣಿ ಸತ್ಯಾಗ್ರಹ
ಪುತ್ತೂರು: ಅಸಮರ್ಪಕ ಮರುಳು ನೀತಿಯನ್ನು ವಿರೋಧಿಸಿ ಪುತ್ತೂರು ತಾಲೂಕು ಲಾರಿ ಮಾಲಕ, ಚಾಲಕರ ಹಾಗೂ ಮರಳು ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಪುತ್ತೂರಿನ ಸಹಾಯಕ ಕಮೀಷನರ್ ಕಚೇರಿಯ ಮುಂಬಾಗದಲ್ಲಿ ಮಾ.24ರಂದು ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಅಧ್ಯಕ್ಷ ಗಿರೀಶ್ ಪಡ್ಡಾಯೂರು ಮತ್ತು ಗೌರವ ಸಲಹೆಗಾರ ತಾ.ಪಂ. ನಿಕಟಪೂರ್ವ ಉಪಾಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರದ ಮರಳು ನೀತಿಯು ಜಿಲ್ಲೆಯಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೆ ಕಳೆದ ಎರಡೂವರೆ ವರ್ಷಗಳಿಂದ ಮರಳುಗಾರಿಕೆಗೆ ಯಾವುದೇ ಪರವಾನಿಗೆಯನ್ನು ನೀಡದೆ ದ.ಕ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಮರಳು ಅಭಾವ ಸೃಷ್ಠಿಯಾಗುವಂತೆ ಮಾಡಿದೆ. ಜಿಲ್ಲೆಯಲ್ಲಿ ಸಿಆರ್ಝಡ್ ಮತ್ತು ನಾನ್ ಸಿಆರ್ಝಡ್ ಪ್ರತ್ಯೇಕಿಸಿ 2 ಮರಳು ನೀತಿಯನ್ನು ಹೇರುವ ಮೂಲಕ ತಾರತಮ್ಯ ಮಾಡಿ ಸಾಮಾನ್ಯ ಗ್ರಾಹಕನಿಗೆ ಹೊರೆಯಾಗುವಂತೆ ಮಾಡಿದೆ. ಇವೆಲ್ಲವನ್ನೂ ತಡೆದು ಈ ಹಿಂದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕ ಮರಳು ಪರವಾನಿಗೆ ನೀಡುವ ವ್ಯವಸ್ಥೆ ಮಾಡುವಂತೆ ಹಾಗೂ ಮರಳುಗಾರಿಕೆಗೆ ಅವಕಾಶ ನೀಡುವಂತೆ ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಆಗ್ರಹಿಸಲಾಗುವುದು ಎಂದರು. ಪುತ್ತೂರು ಮತ್ತು ಸುಳ್ಯ ಭಾಗದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ತಡೆಯೊಡ್ಡಿರುವ ಕಾರಣದಿಂದ ಸಾವಿರಾರು ಕೂಲಿ ಕಾರ್ಮಿಕರು ಮರಳು, ಕಾರ್ಮಿಕರು, ಲಾರಿ ಚಾಲಕರು ಜೀವನ ನಿರ್ವಹಣೆ ಮಾಡುವುದು ದುಸ್ಥರವಾಗಿದೆ. ಲಾರಿ ಹಾಗೂ ಇತರ ಮರಳು ಸಾಗಾಟದ ವಾಹನಗಳ ಚಾಲಕ ಮಾಲಕರು ಕೆಲಸವಿಲ್ಲದೆ ವಾಹನಗಳ ಸಾಲದ ಕಂತುಗಳನ್ನು ತುಂಬಲಾರದೆ ಸಂಕಷ್ಟಕೀಡಾಗಿದ್ದಾರೆ. ಮರಳು ಅಭಾವದಿಂದಾಗಿ ತಾಲೂಕಿನಾದ್ಯಂತ ಆಶ್ರಯ ಮನೆಗಳ ಪ್ರಗತಿ ಕುಂಠಿತವಾಗಿದೆ. ಸರ್ಕಾರದ ವಿವಿಧ ಇಲಾಖೆಗಲ ಕಾಮಗಾರಿಗಳನ್ನು ಮರಳಿನ ಅಲಭ್ಯತೆಯಿಂದಾಗಿ ನಿಗದಿತ ಅವಧಿಯಲ್ಲಿ ಪೂರೈಸಲಾಗದೆ ಅನುದಾನ ವಾಪಾಸಾಗುತ್ತಿದೆ. ಮರಳು ದರ ದುಪ್ಪಟ್ಟು ಆಗಿದ್ದು, ಇನ್ನೂ ಹೆಚ್ಚಾಗುವ ಅಪಾಯವಿದೆ. ಈ ಹಿನ್ನಲೆಯಲ್ಲಿ ಮರಳು ನೀತಿಯನ್ನು ಬದಲಾವಣೆಗೊಳಿಸಿ ಈ ಮೊದಲು ಗಣಿ ಇಲಾಖೆಯ ಮೂಲಕ ಮರಳು ತೆಗೆಯಲು ಅವಕಾಶ ಕಲ್ಪಿಸಿದಂತೆ ವ್ಯವಸ್ಥೆಗೊಳಿಸಲು ಸತ್ಯಾಗ್ರಹದ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ಲಾರಿ ಮಾಲಕ, ಚಾಲಕರ ಹಾಗೂ ಮರಳು ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಭರತ್ ರೈ ಮತ್ತು ಸದಸ್ಯ ಇಬ್ರಾಹಿಂ ಬಾತಿಷ ಉಪಸ್ಥಿತರಿದ್ದರು.