ಕುಂದಾಪುರ ಪುರಸಭೆಗೆ ಅವಿರೋಧ ಆಯ್ಕೆ; ಕಾಂಗ್ರೆಸ್ಗೆ ಮುಖಭಂಗ
ಕುಂದಾಪುರ, ಮಾ.22: ಕುಂದಾಪುರ ಪುರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಬೆಂಬಲಿತ ವಸಂತಿ ಮೋಹನ್ ಸಾರಂಗ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿಯ ರಾಜೇಶ್ ಕಾವೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣ ದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಸದಸ್ಯರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಸಂತಿ ಮೋಹನ್ ಸಾರಂಗ ಅವರನ್ನು ಬೆಂಬಲಿಸಿದ್ದು, ಇದರಿಂದ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ರವಿಕಲಾ ಗಣೇಶ್ ಶೇರಿಗಾರ್ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಅವಿರೋಧ ವಾಗಿ ನಡೆಯಲು ಕಾರಣವಾಯಿತು. ಈ ಬಾರಿಯ ಮೀಸಲಾತಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರ -ಬಿಸಿಎ ಮಹಿಳೆ- ಬಂದಿದ್ದರೂ ಕೊನೆ ಕ್ಷಣದಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ರಂಗಪ್ರವೇಶಿಸಿದ್ದು, ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಗೆ ಬಿಜೆಪಿ ಬೆಂಬಲ ನೀಡುವ ಮೂಲಕ ಖಾರ್ವಿ ಜನಾಂಗದ ಮಹಿಳೆ ಮೊದಲ ಬಾರಿ ಕುಂದಾಪುರ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಕುಂದಾಪುರ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎ (ಮ) ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿತ್ತು. ಬಹುಮತವಿದ್ದರೂ ಬಿಜೆಪಿಯಲ್ಲಿ ಆ ಮೀಸಲಾತಿಯ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ರವಿಕಲಾ ಗಣೇಶ್ ಶೇರಿಗಾರ್, ಪುಷ್ಟ ಶೇಟ್, ವಸಂತಿ ಮೋಹನ್ ಸಾರಂಗ, ಜ್ಯೋತಿ ಗಣೇಶ್ ಮೊಗವೀರ್ ಹಾಗೂ ಶಕುಂತಲಾ ಗುಲ್ವಾಡಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ರವಿಕಲಾ ಗಣೇಶ್ ಸೇರಿಗಾರ್ ಅವರನ್ನು ಅಧ್ಯಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ಆದರೆ ಇತ್ತೀಚೆಗೆ ಕಾಂಗ್ರೆಸ್ನಿಂದ ಉಚ್ಛಾಟಿತರಾದ ಜಯಪ್ರಕಾಶ್ ಹೆಗ್ಡೆ ಮಾಡಿದ ಜಾದೂ ಕುಂದಾಪುರ ಪುರಸಭೆ ಅಧ್ಯಕ್ಷ ಸ್ಥಾನದ ಚಿತ್ರಣ ಬದಲಿಸಿತು. ಕೊನೆಯ ಕ್ಷಣದಲ್ಲಿ ಮತದಾನ ವೇನಾದರೂ ನಡೆಯಲೇಬೇಕಾದ ಸನ್ನಿವೇಶ ಎದುರಾದರೆ ಮತದಾನ ಮಾಡಲು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೂ ಸಭೆಯಲ್ಲಿ ಹಾಜರಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಗುಲ್ವಾಡಿ ಒಂದು ಹಾಗೂ ವಸಂತಿ ಮೋಹನ್ ಸಾರಂಗ ಎರಡು ಹಾಗೂ ಕಾಂಗ್ರೆಸ್ ಅಭ್ಯರ್ಥಿ ರವಿಕಲಾ ಗಣೇಶ್ ಶೇರಿಗಾರ್ ಎರಡು ನಾಮಪತ್ರ ಸಲ್ಲಿಸಿದ್ದರೆ, ಉಪಾದ್ಯಕ್ಷ ಸ್ಥಾನಕ್ಕೆ ರಾಜೇಶ್ ಕಾವೇರಿ ನಾಲ್ಕು ಹಾಗೂ ರವಿರಾಜ್ ಖಾರ್ವಿ ಒಂದು ನಾಪಪತ್ರ ಸಲ್ಲಿಸಿದ್ದು ಎಲ್ಲಾ ನಾಮಪತ್ರ ಗಳು ಸ್ವೀಕೃತವಾಗಿದ್ದವು. ಬಳಿಕ ರವಿರಾಜ್ ಖಾರ್ವಿ ಮತ್ತು ಶಂಕುತಲಾ ಗುಲ್ವಾಡಿ ನಾಮಪತ್ರ ಹಿಂದಕ್ಕೆ ಪಡೆದರು. ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯಕ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷರಾದ ಮೋಹನದಾಸ್ ಶೆಣೈ, ಗುಣರತ್ನ, ಕಲಾವತಿ ಯು.ಎಸ್. ಬಿಜೆಪಿ ಎಲ್ಲಾ ಸದಸ್ಯರು ಇದ್ದರು.