ಮರಗಳ್ಳರಿಂದ ಅರಣ್ಯಾಧಿಕಾರಿಗಳಿಗೆ ಬೆದರಿಕೆ
ಮೂಡುಬಿದಿರೆ, ಮಾ.22: ಇಬ್ಬರು ಮರದ ವ್ಯಾಪಾರಿಗಳು ಇತ್ತೀಚೆಗೆ ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆಯೊಡ್ಡಿದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ. ಶಿರ್ತಾಡಿ ತಾಪಂನ ಮಾಜಿ ಸದಸ್ಯ, ಉದ್ಯಮಿ ರುಕ್ಕಯ ಪೂಜಾರಿ ಮತ್ತು ಮರದ ವ್ಯಾಪಾರಿ ಪಡುಕೊಣಾಜೆ ರಾಜೇಂದ್ರ ಜೈನ್ ಎಂಬವರು ಮೂಡುಬಿದಿರೆ ಅರಣ್ಯಾಧಿಕಾರಿಗಳಿಗೆ ಬೆದರಿಕೆ ಹಾಕಿದ ವ್ಯಕ್ತಿಗಳು. ಕೆಲವು ದಿನಗಳ ಹಿಂದೆ ಬಾಹುಬಲಿ ಎಂಬ ಹೆಸರಿನ ಲಾರಿಯೊಂದು ಮರವನ್ನು ತುಂಬಿಸಿಕೊಂಡು ಬಿ.ಸಿರೋಡ್ ಕಡೆಗೆ ಹೋಗುತ್ತಿದ್ದಾಗ ಉಪ ವಲಯಾರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ ಎಂಬವರು ಗಂಟಾಲ್ಕಟ್ಟೆ ಬಳಿ ತಡೆದು ನಿಲ್ಲಿಸಿ ವಿಚಾರಿಸಿದಾಗ ತಾಪಂನ ಮಾಜಿ ಸದಸ್ಯ ರುಕ್ಕಯ ಪೂಜಾರಿ ಎಂಬವರಿಗೆ ಸೇರಿದ ಮರವೆಂದು ಚಾಲಕ ಬಾಯ್ಬಿಟ್ಟಿದ್ದ. ಮರ ಅಕ್ರಮವಾಗಿ ಸಾಗಾಟವಾಗುತ್ತಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡ ಅಧಿಕಾರಿಗಳು ರಾತ್ರಿ 8 ಗಂಟೆಯ ವೇಳೆಗೆ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಮರುದಿನ ಬೆಳಗ್ಗೆ ರುಕ್ಕಯ ಪೂಜಾರಿ ಮರದ ವ್ಯಾಪಾರಿ ರಾಜೇಂದ್ರ ಜೈನ್ರ ಜತೆಗೂಡಿ ಅರಣ್ಯಾಧಿಕಾರಿಗಳ ಕಚೇರಿಗೆ ಆಗಮಿಸಿ ತನ್ನ ಲಾರಿ ಸಹಿತ ಮರವನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸಿದ್ದ ಅರಣ್ಯಾಧಿಕಾರಿಗಳಿಗೆ ಕಚೇರಿಯಲ್ಲೇ ಬೆದರಿಕೆಯೊಡ್ಡಿದ್ದಾರೆನ್ನಲಾಗಿದೆ.