ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲ್ಲಿ ಪುತ್ತೂರು ಜಾತ್ರೋತ್ಸವ: ಜಿಲ್ಲಾಧಿಕಾರಿ
ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಆತಿಥೇಯರ ಸಾಲಿನಲ್ಲಿ ನನ್ನ ಹೆಸರನ್ನು ಕೇವಲ ಶಿಷ್ಟಾಚಾರಕ್ಕೆ ಮಾತ್ರ ಮುದ್ರಿಸಲಾಗಿದೆ. ದೇವಾಲಯದ ಆಡಳಿತಕ್ಕೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ಅಪರ ಜಿಲ್ಲಾಧಿಕಾರಿ ಅವರೇ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.
ಈ ಸಂಬಂಧ ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 4ರಂತೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ. ನಾನು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 7ರಂತೆ ಅಪರ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿ ಅವರನ್ನು ಉಪ ಆಯುಕ್ತರನ್ನಾಗಿ ನೇಮಿಸಿ ಅದೇಶ ಹೊರಡಿಸಿದ್ದೇನೆ.
ಅಂದಿನಿಂದ ಅವರು ಜಿಲ್ಲಾ ಧಾರ್ಮಿಕ ಪರಿಷತ್ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ವಿವಿಧ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸುವುದು, ಅಗತ್ಯ ಸಂದರ್ಭದಲ್ಲಿ ದೇವಾಲಯಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವುದು, ನ್ಯಾಯಾಲಯದ ಕಲಾಪ ನಿರ್ವಹಿಸುವುದು, ಆನುವಂಶಿಕ ಹಕ್ಕು ನಿರ್ಧರಿಸುವುದು, ದೇವಾಲಯಗಳ ಯಾವುದೇ ವಿವಾದ ಬಗೆಹರಿಸುವುದು, ದೇವಾಲಯಗಳ ಮುಂಗಡಪತ್ರ ಪರಿಶೀಲನೆ, ನ್ಯೂನತೆ ಸರಿಪಡಿಸಲು ಕ್ರಮ ಕೈಗೊಳ್ಳುವುದು ಇವೇ ಮುಂತಾದ ಕೆಲಸಗಳನ್ನು ಅವರೇ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿ ಯಾವುದೇ ಗೊಂದಲ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪುತ್ತೂರು ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಂಬ ನೆಲೆಯಲ್ಲಿ ಕೇವಲ ಶಿಷ್ಟಾಚಾರಕ್ಕೆ ಮಾತ್ರ ಅಳವಡಿಸಲಾಗಿದೆಯೇ ಹೊರತು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 7ನ್ನು ಉಲ್ಲಂಘನೆ ಮಾಡುವಂತೆ ಮುದ್ರಿಸಿಲ್ಲ. ಈ ರೀತಿ ಬೇರೆ ದೇವಾಲಯಗಳಲ್ಲೂ ಮುದ್ರಿಸಿದ ನಿದರ್ಶನವಿದೆ. ಅದೇ ರೀತಿ ಬೇರೆ ಜಿಲ್ಲೆಯಲ್ಲೂ ಮುದ್ರಿಸಿದ ನಿದರ್ಶನವಿದೆ.
ಪ್ರಸ್ತುತ ಆಮಂತ್ರಣ ಪತ್ರಿಕೆ ವಿಚಾರಕ್ಕೆ ಸಂಬಂಧಿಸಿ ನವೀನ್ ಕುಲಾಲ್ ಎಂಬವರು ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಿದ್ದು, ಮಾರ್ಚ್ 21ರಂದು ವಿಚಾರಣೆ ನಡೆದಿದೆ. ಅರ್ಜಿದಾರರ ಪರ ವಕೀಲರು ಸಮಯಾವಕಾಶ ಕೋರಿದ ಕಾರಣ ಮಾರ್ಚ್ 24ಕ್ಕೆ ಮುಂದೂಡಲ್ಪಟ್ಟಿತ್ತು. 24ರಂದು ಕೂಡ ಅರ್ಜಿದಾರರ ಪರ ವಕೀಲರೇ ಮತ್ತೆ ಸಮಯಾವಕಾಶ ಕೇಳಿದ ಕಾರಣ ಮತ್ತೆ ಮುಂದೂಡಲ್ಪಟ್ಟಿದೆ.
ಪುತ್ತೂರಿನಲ್ಲಿ ಏಪ್ರಿಲ್ 10ರಿಂದ 20ರವರೆಗೆ ನಡೆಯುವ ವಾರ್ಷಿಕ ಜಾತ್ರೋತ್ಸವ ಸುಗಮವಾಗಿ, ಶಾಂತಿಯುತವಾಗಿ ಮತ್ತು ಸಂಪ್ರದಾಯ ಬದ್ಧವಾಗಿ ನಡೆಯುವಂತಾಗಲು ದೇವಾಲಯದ ಆಡಳಿತಾಧಿಕಾರಿ ಮತ್ತು ಕಾರ್ಯ ನಿರ್ವಹಣಾ ಅಧಿಕಾರಿ ಅವರು ಕ್ರಮ ಕೈಗೊಳ್ಳುತ್ತಿದ್ದಾರೆ. ಇದರೊಂದಿಗೆ ಪುತ್ತೂರಿನ ಎ.ಸಿ. ಅವರೂ ಮಾರ್ಗದರ್ಶಕರಾಗಿ ಜಾತ್ರೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಅಪರ ಜಿಲ್ಲಾಧಿಕಾರಿ ಅವರು ಕೂಡಾ ದೇವಸ್ಥಾನದಲ್ಲಿ ಖುದ್ದು ಹಾಜರಿದ್ದು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಹೀಗಾಗಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಜಾತ್ರೋತ್ಸವ ಶಾಂತಿಯುತವಾಗಿ ಮತ್ತು ವಿಜೃಂಭಣೆಯಿಂದ ನಡೆಯುವಂತಾಗಲು ಸಹಕರಿಸಬೇಕು ಎಂದು ಅವರು ವಿನಂತಿಸಿದ್ದಾರೆ.