ಗ್ರಾಮೀಣ ಬಡಜನರ ಬದುಕಿಗೆ ಸಹಾಯಕವಾಗುವ ಸಾಮಾಜಿಕ ಹೊಣೆಗಾರಿಕೆಯ ಉದ್ಯಮಗಳು ಹೆಚ್ಚ ಬೇಕು-ಡಾ.ಎನ್.ಕೆ.ತಿಂಗಳಾಯ

Update: 2016-03-25 10:14 GMT

 ಮಂಗಳೂರು.ಮಾ.25:ಗ್ರಾಮೀಣ ಪ್ರದೇಶದ ಕೃಷಿ ಕೂಲಿ ಕಾರ್ಮಿಕರ,ಬಡವರ ಬದುಕಿಗೆ ಪೂರಕವಾಗುವ ಸಾಮಾಜಿಕ ಹೊಣೆಗಾರಿಕೆಯ ಉದ್ಯಮಗಳು ಹೆಚ್ಚಬೇಕಾಗಿದೆ ಎಂದು ಖ್ಯಾತ ಆರ್ಥಿಕ ತಜ್ಞ ಡಾ.ಎನ್.ಕೆ.ತಿಂಗಳಾಯ ತಿಳಿಸಿದರು.

   ಅವರು ಇಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಪಂಪ್‌ವೆಲ್ ಬಳಿ ಇರುವ ಅಂತಾರಾಷ್ಟ್ರೀಯ ಶಿಕ್ಷಣ ಕೇಂದ್ರದಲ್ಲಿ ಭಾರತದಲ್ಲಿ ಸಾಮಾಜಿಕ ಉದ್ಯಮದ ಅವಕಾಶ ಹಾಗೂ ಸವಾಲುಗಳು ಎಂಬ ವಿಷಯದ ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡಿದರು.

ಭಾರತದಲ್ಲಿ ಸಾಮಾಜಿಕ ಕಾಳಜಿಯನ್ನು ಉದ್ದೇಶವಾಗಿರಿಸಿಕೊಂಡು ನಡೆಸುವ ಉದ್ಯಮಗಳು ಗ್ರಾಮೀಣ ಪ್ರದೇಶದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.ಇಂದಿಗೂ ಭಾರತದ ಹಲವು ಗ್ರಾಮೀಣ ಪ್ರದೇಶಗಳು ಸಾಕಷ್ಟು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ.ಜೊತೆಗೆ ಬಡತನ,ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಗ್ರಾಮೀಣ ಜನರು ಸಂಕಷ್ಟಕ್ಕೀಡಾಗಿದ್ದಾರೆ.ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಸಾಮಾಜಿಕ ಕಾಳಜಿಯ ಉದ್ಯಮಗಳು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ಎದುರಿಸಬೇಕಾಗಿದೆ ಎಂದು ಡಾ.ಎನ್.ಕೆ.ತಿಂಗಳಾಯ ತಿಳಿಸಿದರು.

        ಕಾರ್ಪೊರೇಟ್ ಸಂಸ್ಥೆಗಳಿಗೆ ನಿಗದಿ ಪಡಿಸಿರುವ ಸಾಮಾಜಿಕ ಹೊಣೆಗಾರಿಕೆಯ ನಿಧಿಯ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ:-ಸರಕಾರ ಕಾರ್ಪೋರೇಟ್ ಸಂಸ್ಥೆಗಳಿಗೆ ಪ್ರಸಕ್ತ ನಿಗದಿ ಪಡಿಸಿರುವ ಸಾಮಾಜಿಕ ಹೊಣೆಗಾರಿಕೆಯ ಮೊತ್ತ ವನ್ನು ಶೇ 2ಎಂದು ನಿಗದಿ ಪಡಿಸಿದೆ.ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕಾದ ಅಗತ್ಯವಿದೆ.ಈ ನಿಧಿಯ ಮೂಲಕ ಸಂಗ್ರಹವಾಗುವ ಮೊತ್ತವನ್ನು ಗ್ರಾಮೀಣ ಪ್ರದೇಶದ ಕೃಷಿಕರ,ಬಡವರ ಆರೋಗ್ಯ ಸುಧಾರಣೆಗೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವ್ಯಯಿಸಬೇಕಾಗಿದೆ ಎಂದರು.ಬಾಂಗ್ಲಾದಲ್ಲಿ ಬ್ಯಾಂಕ್ ಸ್ಥಾಪಿಸಿದ ಸ್ಥಾಪಕರ ಮೂಲ ಉದ್ದೇಶ ಲಾಭಗಳಿಕೆಯಾಗಿರಲಿಲ್ಲ.ಬ್ಯಾಂಕ್ ಉದ್ಯಮದ ಮೂಲಕ ದೇಶದ ಜನಸಾಮಾನ್ಯರ ಸಾಮಾಜಿಕ ಬದಲಾವಣೆಯನ್ನು ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಗೆ ಕಾರಣವಾಯಿತು.ಭಾರತದಲ್ಲೂ ಹಸಿರು ಕ್ರಾಂತಿಯ ಸಾಧನೆ ಒಂದು ಕಡೆ ಆದರೆ ಇನ್ನೊಂದು ಕಡೆ ಕೀಟನಾಶಕ ಬಳಕೆಯಿಂದ ತೊಂದರೆ ಗೀಡಾದ ಬಡಜನರು ಆಸ್ಪತ್ರೆ ಸೇರುತ್ತಿರುವುದು ಹೆಚ್ಚುತ್ತಿದೆ.ಈ ಹಿನ್ನೆಲೆಯಲ್ಲಿ ಜನರ ಆರೋಗ್ಯ ಸುಧಾರಣೆಗೆ ಸರಕಾರ ಒತ್ತು ನೀಡಬೇಕಾಗಿದೆ ಎಂದು ತಿಂಗಳಾಯ ತಿಳಿಸಿದರು.

   ಸಮಾರಂಭದಲ್ಲಿ ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಎಂ.ಎಸ್.ಮೂಡಿತ್ತಾಯ ಸೋಶಿಯಲ್ ಬ್ಯುಸಿನೆಸ್ ನೆಟ್‌ವರ್ಕ್ ಇಂಡಿಯಾ ಘಟಕದ ಗೌರವ ಅಧ್ಯಕ್ಷ ಡಾ.ಯಶವಂತ ಡೊಂಗ್ರೆ,ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರಾಮ ಮೋಹನ್ ಪೈ,ಎಸ್‌ಬಿಆರ್‌ಆರ್ ಮಹಾಜನ್ ಕಾಲೇಜಿನ ಪ್ರಾಂಶುಪಾಲ ಕೆ.ವಿ.ಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದರು.ಸೋನಾ ರೈ ಕಾರ್ಯಕ್ರಮ ನಿರೂಪಿಸಿದರು.ಪ್ರೊ.ಸಿ.ಎಸ್.ಶಾಸ್ತ್ರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News