ಮಂಗಳೂರು : ಭೂಮಿಯ ಹಕ್ಕು ರಾಷ್ಟ್ರೀಕರಣಗೊಳ್ಳಲಿ:ಪೀರ್ ಭಾಷಾ
ಮಂಗಳೂರು,ಮಾ.26: ಕೇಂದ್ರ ಸರಕಾರವು ಅಂಬೇಡ್ಕರ್ ನೆನಪಿನಲ್ಲಿ 100 ಕೋಟಿ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಅಂಬೇಡ್ಕರ್ ಮಂದಿರ ಅಂಬೇಡ್ಕರ್ವಾದವನ್ನು ದಮನ ಮಾಡುವ ಪ್ರಯತ್ನವಾಗಿದೆ .ಅದರ ಬದಲು ಭೂಮಿಯ ಹಕ್ಕನ್ನು ರಾಷ್ಟ್ರೀಕರಣಗೊಳಿಸಿ ಅಂಬೇಡ್ಕರ್ ಅವರಿಗೆ ಗೌರವ ನೀಡಲಿ ಎಂದು ಹಿರಿಯ ಚಿಂತಕ ಪೀರ್ಭಾಷಾ ಹೇಳಿದರು.
ನಗರದ ರೋಶನಿ ನಿಲಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಪ್ರತ್ಯೇಕತೆ ನೀತಿ ಅಧ್ಯಯನ ಸಂಸ್ಥೆ , ಅಂಬೇಡ್ಕರ್ ಅಧ್ಯಯನ ಕೇಂದ್ರವು ಆಯೋಜಿಸಿದ ‘ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್’ ಅಭಿಯಾನದ ದಕ್ಷಿಣ ಕನ್ನಡ ಜಿಲ್ಲೆಯ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಂಬೇಡ್ಕರ್ ಅವರ ಮಂದಿರ ನಿರ್ಮಾಣದಿಂದ ಅವರ ಭಾವಚಿತ್ರವನ್ನು ತೋರಿಸುವ ಪ್ರಯತ್ನವಾಗುತ್ತದೆಯೆ ಹೊರತು ಅಂಬೇಡ್ಕರ್ಅವರ ವಾದವನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅಂಬೇಡ್ಕರ್ ಅವರ ವಿಚಾರಕ್ಕೆ ಬೆಂಬಲ ಕೊಟ್ಟಂತಾಗುವುದಿಲ್ಲ ಎಂದರು
ಮತಬ್ಯಾಂಕ್ ಆಗಿ ದಲಿತರು : ಪ್ರಸಕ್ತ ಪ್ರಭುತ್ವ ಅಂಬೇಡ್ಕರ್ ವಿಚಾರಧಾರೆಗೆ ಒಪ್ಪದೆ ಕೇವಲ ಭಾವಚಿತ್ರವನ್ನು ತೋರಿಸಿ ದಲಿತ ಸಮುದಾಯವನ್ನು ಮತಬ್ಯಾಂಕ್ ಆಗಿ ಸೃಷ್ಟಿಸಲು ಮಾಡುತ್ತಿರುವ ಪ್ರಯತ್ನವಿದಾಗಿದೆ ಎಂದು ಆರೋಪಿಸಿದರು.
ಆರ್ ಎಸ್ ಎಸ್ ಒಂದು ಕಡೆ ಅಂಬೇಡ್ಕರ್ ಅವರನ್ನು ಹಿಂದೂ ಧರ್ಮದ ಸುಧಾರಕ ಎಂದು ಹೇಳುತ್ತಿದೆ.ಮತ್ತೊಂದೆಡೆ ಅದರ ಮುಖ್ಯಸ್ಥ ಮೀಸಲಾತಿಯ ಬಗ್ಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಅಂಬೇಡ್ಕರ್ ಅವರ ತಾತ್ವಿಕತೆಗೆ ಚುಚ್ಚುವ ಪ್ರಯತ್ನವಾಗಿದೆ. ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿ ಐದು ಲಕ್ಷ ಜನರೊಂದಿಗೆ ಭೌದ್ದ ಧರ್ಮವನ್ನು ಸ್ವೀಕರಿಸಿದವರು. ಭಾರತ ಮಾತಕೀ ಜೈ ಎನ್ನುವಂತಹ , ರಾಷ್ಟ್ರಭಕ್ತಿ, ದೇಶ,ಧರ್ಮ ಎಂಬ ವಿಚಾರದಲ್ಲಿ ಅನಗತ್ಯ ವಾದಗಳನ್ನು ಮಾಡಲಾಗುತ್ತಿದೆ. ಆದರೆ ಅಂಬೇಡ್ಕರ್ ಅವರು ನನಗೆ ಮಾತೃಭೂಮಿಯೆಂಬುದಿಲ್ಲ. ನಾಯಿಗಿಂತ ಕೀಳಾಗಿ ಕಾಣುವ , ನೀರನ್ನು ಕೊಡದ ಈ ಭೂಮಿಯನ್ನು ಮಾತೃಭೂಮಿ ಎಂದು ಹೇಗೆ ಹೇಳಲಿ ಎಂದು ಹೇಳಿದ್ದರು. ದೇಶದಲ್ಲಿ ರೈತರ ಆತ್ಮಹತ್ಯೆ ಸಮಸ್ಯೆ, ನಿರುದ್ಯೋಗ, ಆಹಾರ, ಅತ್ಯಾಚಾರ, ಶಿಕ್ಷಣ ಮುಂತಾದ ಸಮಸ್ಯೆಗಳು ಜರನ್ನು ಸಂಕಷ್ಟಕ್ಕೆ ಈಡು ಮಾಡಿದೆ.ಇದನ್ನು ಮರೆಮಾಚಿ ಕೇವಲ ರಾಷ್ಟ್ರಭಕ್ತಿ,ಧರ್ಮ, ದೇಶ ಮುಂತಾದ ಚರ್ಚೆಗಳಾಗುತ್ತಿದೆ ಎಂದು ಹೇಳಿದರು.
ಪ್ರಸಕ್ತ ಅಂಬೇಡ್ಕರ್ ವಿಚಾರದ ಆಧಾರದಲ್ಲಿ ಹುಟ್ಟಿಕೊಳ್ಳಬೇಕಾದ ಚಳವಳಿ ಬರಲಿಲ್ಲ. ಲೋಹಿಯಾ ಅವರಲ್ಲಿಯೂ ಅಂಬೇಡ್ಕರ್ ಬಗ್ಗೆ ಅನುಮಾನಗಳು ಇತ್ತು. ಕರ್ನಾಟಕದ ದಲಿತ ಚಿಂತಕರುಗಳು ಅಂಬೇಡ್ಕರ್ವಾದಿಗಳಾಗದೆ ಕೇವಲ ಗಾಂಧಿವಾದಿಗಳಾಗಿದ್ದಾರೆ. ದಲಿತ ಚಿಂತಕರುಗಳು ಗಾಂಧಿವಾದದಿಂದ, ಲೋಹಿಯಾವಾದದವರೆಗೆ ಬರುತ್ತಾರೆ. ಆದರೆ ಅಂಬೇಡ್ಕರ್ ವಾದದತ್ತ ಬರುವುದಿಲ್ಲ. ಈ ಕಾರಣದಿಂದಲೆ ರಾಜ್ಯದಲ್ಲಿ ದಲಿತ ಚಳವಳಿಯನ್ನು ಪರಿಣಾಕಾರಿಯಾಗಿ ಕಟ್ಟಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಕಾರ್ಯಕ್ರಮವನ್ನು ವಿವಿಧ ಶಾಲೆಯ ವಿದ್ಯಾರ್ಥಿಗಳು ಸಂವಿಧಾನದ ಮುನ್ನುಡಿಯನ್ನು ಓದುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಸಂಯೋಜಕಿ ವಿನೀತಾ ರೈ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಯೋಜಕರಾದ ಮನ್ಜಿತ್ , ಡಾ.ವಾಸುದೇವ ಬೆಳ್ಳೆ, ಆಶಾಲತಾ ಉಪಸ್ಥಿತರಿದ್ದರು.