ಉಳ್ಳಾಲ : ತೊಕ್ಕೊಟ್ಟು ಜನಪ್ರಿಯ ದಸ್ತಾವೇಜು ಬರಹಗಾರ ನಿಧನ
Update: 2016-03-28 21:02 IST
ಉಳ್ಳಾಲ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪೆರ್ಮನ್ನೂರು ಬ್ಲಾಕ್ನ ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ತೊಕ್ಕೊಟ್ಟುವಿನಲ್ಲಿ ಜನಪ್ರಿಯ ದಸ್ತಾವೇಜು ಬರಹಗಾರರಾಗಿದ್ದ ಅಚ್ಚುತ್ತ ಬಬ್ಬುಕಟ್ಟೆ ಇವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನ ಹೊಂದಿದರು. ಪೆರ್ಮನ್ನೂರು ಮಂಡಲ ಪಂಚಾಯಿತಿಯ ಮಾಜಿ ಸದಸ್ಯ, ನಾಟಕ ಕಲಾವಿದ, ಬಬ್ಬುಕಟ್ಟೆ ಯುವಕ ಮಂಡಲದ ಸ್ಥಾಪಕ ಸದಸ್ಯ , ಬಬ್ಬುಕಟ್ಟೆ ಸರಕಾರಿ ಶಾಲೆಯ ಆಡಳಿತ ಮಂಡಳಿ ಸದಸ್ಯ, ನೂತನ ಕಲಾವೃಂದ ಕುತ್ತಾರುಪದವು ಇದರ ಸ್ಥಾಪಕ ಸದಸ್ಯರಾಗಿದ್ದರು. ಇವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. 1990ರಿಂದ ತನ್ನ ಜೀವನ ನಿರ್ವಹಣೆಗಾಗಿ ದಸ್ತಾವೇಜು ಬರಹಗಾರ ವೃತ್ತಿಯನ್ನು ಮಾಡಿಕೊಂಡು ಜನಪ್ರಿಯರೆನಿಸಿಕೊಂಡಿದ್ದರು. ಸಂತಾಪ: ತೊಕ್ಕೊಟ್ಟು ಪುರಸಭಾ ವಾಣಿಜ್ಯ ಸಂಕೀರ್ಣ ಬಾಡಿಗೆದಾರರ ಒಕ್ಕೂಟವು ತೀವ್ರ ಸಂತಾಪ ವ್ಯಕ್ತಪಡಿಸಿರುತ್ತಾರೆ.