ಬೇಂಗಮಲೆ: ಕೋಳಿ ತ್ಯಾಜ್ಯ ಎಸೆದವರಿಗೆ ಸ್ವಚ್ಛತೆಯ ಶಿಕ್ಷೆ!

Update: 2016-03-31 18:25 GMT

ಸುಳ್ಯ, ಮಾ.31: ಬೇಂಗಮಲೆ ರಸ್ತೆಬದಿ ಅರಣ್ಯದಲ್ಲಿ ಕೋಳಿ ತ್ಯಾಜ್ಯ ಎಸೆದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು, ಅವರ ಮೂಲಕವೇ ತ್ಯಾಜ್ಯವನ್ನು ಸ್ವಚ್ಛ ಮಾಡುವ ಶಿಕ್ಷೆ ನೀಡಿದ ಘಟನೆ ನಡೆದಿದೆ.

ಸೋಣಂಗೇರಿ-ಬೆಳ್ಳಾರೆ ರಸ್ತೆಯ ಮಧ್ಯೆ ಬೇಂಗಮಲೆ ಅರಣ್ಯ ಪ್ರದೇಶವಿದ್ದು, ಇಲ್ಲಿ ಸ್ವಚ್ಛತೆ ಕಾಪಾಡಲು ಐವರ್ನಾಡು ಗ್ರಾಪಂ ಶ್ರಮಿಸುವ ಜೊತೆಗೆ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದೆ. ಆದರೆ ಇಲ್ಲಿ ನಿರಂತರವಾಗಿ ಕೋಳಿ ತ್ಯಾಜ್ಯವನ್ನು ಎಸೆಯಲಾಗುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡೇ ಸಂಚರಿಸುವಂತಾಗಿದೆ. ಬುಧವಾರ ಸಂಜೆ ಜಿಪಂ ಸದಸ್ಯ ಮನ್ಮಥ ಅರಣ್ಯ ಪ್ರದೇಶದಲ್ಲಿ ಕೋಳಿ ಸಾಗಾಟ ವಾಹನದ ಮಂದಿ ತ್ಯಾಜ್ಯ ಎಸೆಯುವುದನ್ನು ಗಮನಿಸಿ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ವಾಹನವನ್ನು ಅರಂತೋಡು ಬಳಿ ತಡೆದು, ತ್ಯಾಜ್ಯ ಎಸೆಯುತ್ತಿದ್ದ ಇಬ್ಬರನ್ನು ಠಾಣೆಗೆ ಕರೆಸಿ, ಬೇಂಗಮಲೆ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದರು.

ಇರಾಯಿತ್ ಪಾಷಾ ಮತ್ತು ಲೋಕೇಶ್ ಎಂಬವರು ಪಿರಿಯಾಪಟ್ಟಣದಿಂದ ಬೆಳ್ಳಾರೆಗೆ ಬಂದು ಕೋಳಿಗಳನ್ನು ಮಾರಾಟ ಮಾಡಿ, ಹಿಂದಿರುಗುವ ವೇಳೆ ಬೆಳ್ಳಾರೆಯಲ್ಲಿ ಅಂಗಡಿಯ ವ್ಯಕ್ತಿಯೋರ್ವರು ತಮ್ಮ ಕೋಳಿ ಅಂಗಡಿಯ ತ್ಯಾಜ್ಯವನ್ನು ಇವರ ವಾಹನದಲ್ಲಿ ಹಾಕಿದ್ದರು. ಇದೇ ತ್ಯಾಜ್ಯವನ್ನು ಬೇಂಗಮಲೆ ರಸ್ತೆ ಬದಿಯ ಅರಣ್ಯದಲ್ಲಿ ಎಸೆದಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡರು.

ಈ ವೇಳೆ ಪೊಲೀಸರು ಬೇಂಗಮಲೆ ಅರಣ್ಯದಲ್ಲಿದ್ದ ಕೋಳಿ ತ್ಯಾಜ್ಯವನ್ನು ಶುಚಿಗೊಳಿಸುವ ಶಿಕ್ಷೆ ನೀಡಿದ್ದಾರೆಂದು ತಿಳಿದು ಬಂದಿದೆ.

ಮಾತುಕತೆ ವೇಳೆ ಜಿಪಂ ಸದಸ್ಯ ಮನ್ಮಥ, ಐವರ್ನಾಡು ಗ್ರಾ ಪಂ ಅಧ್ಯಕ್ಷೆ ರಾಜೀವಿ, ಎಸೈ. ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News