ಈಶ್ವರಮಂಗಲ : ಪಂಚೋಡಿಯಲ್ಲಿ ಮದ್ಯದಂಗಡಿ ತೆರೆಯುವ ಪ್ರಯತ್ನ ಗ್ರಾಮಸ್ಥರಿಂದ ವಿರೋಧ- ಉಗ್ರ ಹೋರಾಟಕ್ಕೆ ಮತ್ತೆ ಸಿದ್ಧತೆ
ಈಶ್ವರಮಂಗಲ : ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ- ಓಣಿಯಡ್ಕದಲ್ಲಿ ಮದ್ಯದಂಗಡಿ ತೆರೆಯುವುದನ್ನು ತಡೆಯುವ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಉಗ್ರ ಹೋರಾಟ ನಡೆಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಗಡಿ ಪ್ರದೇಶವಾದ ಓಣಿಯಡ್ಕದಲ್ಲಿ ಸರಕಾರಿ ಶಾಲೆ , ಪ್ರಾರ್ಥನಾ ಮಂದಿರ ಮತ್ತು ಅಂಗನವಾಡಿಗಳು ಇದ್ದು ಈ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತರೆಯಬಾರದು ಎಂದು ಕೆಲವು ದಿನಗಳ ಹಿಂದೆ ಗ್ರಾಮಸ್ಥರು ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಸ್ಥಳೀಯ ಗ್ರಾಪಂನಿಂದ ಯಾವುದೇ ಅನುಮತಿಯನ್ನು ಪಡೆಯದೆ ಅಧಿಕಾರಿಗಳು ಪರವಾನಿಗೆ ನೀಡಿದ್ದಾಗಿ ಆರೋಪಿಸಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ದವೂ ಪ್ರತಿಭಟನೆ ನಡೆಸಿದ್ದರು. ವಾರದೊಳಗೆ ಸ್ಥಳದಲ್ಲಿ ದಾಸ್ತಾನಿರಿಸಲಾಗಿದ್ದ ಮದ್ಯವನ್ನು ತೆರವು ಮಾಡುವಂತೆಯೂ ಗ್ರಾಮಸ್ಥರು ಆಗ್ರಹಿಸಿದ್ದರು. ಆದರೆ ಮದ್ಯ ದಾಸ್ತಾನು ತೆರವು ಮಾಡದೇ ಇರುವುದು ಮತ್ತು ಈ ವಿಚಾರದಲ್ಲಿ ಅಬಕಾರಿ ಅಧಿಕರಿಗಳಿಂದ ಯಾವುದೇ ಭರವಸೆ ಸಿಗದೇ ಇರುವುದನ್ನು ಖಂಡಿಸಿ ಗ್ರಾಮಸ್ಥರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಪ್ರತಿಭಟನೆಗೆ ಸ್ಥಳೀಯ ಸಂಘ ಸಂಸ್ಥೆಗಳು ಬೆಂಬಲ ನೀಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.