ಪಠಾಣ್ ಕೋಟ್ ದಾಳಿಗೂ ತಂಝೀಲ್ ಕೊಲೆಗೂ ಸಂಬಂಧವೇನು ?
ಹೊಸದಿಲ್ಲಿ , ಎ. 5: ಎನ್ ಐ ಎ ಅಧಿಕಾರಿ ತಂಝೀಲ್ ಅಹ್ಮದ್ ಅವರ ಬರ್ಬರ ಕೊಲೆಯಲ್ಲಿ ನಿಜವಾಗಿ ಯಾರ ಕೈವಾಡವಿದೆ ? ಪಠಾಣ್ ಕೋಟ್ ದಾಳಿಗೂ ಅವರ ಕೊಲೆಗೂ ಏನಾದರೂ ಸಂಬಂಧವಿದೆಯೇ ? 2003 ರಲ್ಲಿ ಗುಜರಾತ್ ನಲ್ಲಿ ನಡೆದ ಹರೇನ್ ಪಾಂಡ್ಯ ಕೊಲೆಗೂ ತಂಝೀಲ್ ಕೊಲೆಗೂ ಸಾಮ್ಯತೆ ಇದೆಯೇ ? ಪಠಾಣ್ ಕೊಟ್ ದಾಳಿಯ ಕುರಿತ ಮಹತ್ವದ ಸುಳಿವೊಂದು ತಂಝೀಲ್ ಗೆ ಸಿಕ್ಕಿತ್ತೇ ? ಅದು ಯಾವುದೇ ಕಾರಣಕ್ಕೂ ಬಹಿರಂಗವಾಗಬಾರದು ಎಂದು 21 ಗುಂಡುಗಳನ್ನು ಹಾರಿಸಿ ತಂಝೀಲ್ ರನ್ನು ಮುಗಿಸಲಾಯಿತೆ ? ಈ ಎಲ್ಲ ಆತಂಕಕಾರಿ ಪ್ರಶ್ನೆಗಳನ್ನು ಗುಜರಾತ್ ನ ಮಾಜಿ ಹಿರಿಯ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಎತ್ತಿದ್ದಾರೆ.
ಸಂಜೀವ್ ಭಟ್ ಅವರು ಎಪ್ರಿಲ್ 5 ರಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದ ಪೋಸ್ಟ್ ಹೀಗಿದೆ : " ಬಲ್ಲ ಮೂಲಗಳ ಪ್ರಕಾರ ಅಕ್ಷರಧಾಮ ಭಯೋತ್ಪಾದಕ ದಾಳಿ ದೇಶದೊಳಗಿನವರದೇ ಕೃತ್ಯ ಎಂಬ ಕುರಿತು ಸ್ಪೋಟಕ ಸತ್ಯವೊಂದನ್ನು 2003 ರಲ್ಲಿ ಹರೇನ್ ಪಾಂಡ್ಯ ಬಹಿರಂಗಪಡಿಸಲು ಸಜ್ಜಾಗಿದ್ದರು. ಆದರೆ ಹರೇನ್ ಅವರನ್ನು ಈಗ ಎನ್ ಐ ಎ ಅಧಿಕಾರಿ ತಂಝೀಲ್ ಅಹ್ಮದ್ ಅವರನ್ನು ಕೊಂದಂತೆಯೇ ಕಾರಿನೊಳಗಿರುವಾಗ ಕೊಂದು ಹಾಕಲಾಯಿತು. ಈಗ ಪಾಕ್ ' ಸತ್ಯ ಶೋಧನಾ ' ತಂಡದ ಪ್ರಕಾರ ಪಠಾಣ್ ಕೊಟ್ ದಾಳಿಯಲ್ಲಿ ಭಾರತ ಸರಕಾರದ ಪಾತ್ರದ ಕುರಿತು ಭಯಾನಕ ಸತ್ಯವೊಂದು ತಂಝೀಲ್ ಅಹ್ಮದ್ ಗೆ ಸಿಕ್ಕಿತ್ತು. ಅದಕ್ಕಾಗಿಯೇ ಅವರನ್ನು ಮುಗಿಸಲಾಗಿದೆ. ಇತಿಹಾಸ ಮತ್ತೆ ದುರಂತವಾಗಿ ಮರುಕಳಿಸುತ್ತಿದೆಯೇ ? "