ಉಡುಪಿ: ಅಂ.ರಾ. ಚೆಫ್ ವಿಕಾಸ್ ಖನ್ನಾರಿಂದ ಮಣಿಪಾಲದಲ್ಲಿ ಮ್ಯೂಸಿಯಂ
ಉಡುಪಿ, ಎ.7: ವಿಶ್ವದ ಖ್ಯಾತನಾಮ ಚೆಫ್ (ಬಾಣಸಿಗ) ಹಾಗೂ ಮಣಿಪಾಲದ ವೆಲ್ಕಮ್ ಗ್ರೂಪ್ ಗ್ರಾಜ್ಯುವೆಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಶನ್ನ ಹಳೆ ವಿದ್ಯಾರ್ಥಿಯಾಗಿರುವ ವಿಕಾಸ್ ಖನ್ನಾ, ದುಬಾಯಿ ಮತ್ತು ನ್ಯೂಯಾರ್ಕ್ನ ಜುನೂನ್ ರೆಸ್ಟಾರೆಂಟ್ನ ಸ್ಥಾಪಕ ಮತ್ತು ಸಿಇಒ ರಾಜೇಶ್ ಬಾರದ್ವಾಜ್ ಅವರೊಂದಿಗೆ ಅಡುಗೆ ಸಾಮಗ್ರಿಗಳು, ಅಡುಗೆ ಕಲೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡುವ ವಸ್ತುಸಂಗ್ರಹಾಲಯ (ಮ್ಯೂಸಿಯಂ) ಒಂದನ್ನು ಮಣಿಪಾಲದಲ್ಲಿ ಪ್ರಾರಂಭಿಸಲು ನಿರ್ಧರಿಸಿದ್ದು, ಇದರ ಕಟ್ಟಡಕ್ಕೆ ಶಿಲಾನ್ಯಾಸವನ್ನು ಇಂದು ನೆರವೇರಿಸಲಾಯಿತು.
ದೇಶದ ವಿವಿಧ ರಾಜ್ಯಗಳಲ್ಲಿ, ಅಲ್ಲಿನ ವಿಭಿನ್ನ ಸಂಸ್ಕೃತಿಗಳಲ್ಲಿ ಅಡುಗೆಗೆ ಬಳಸುವ ಪಾತ್ರೆ, ಮಡಕೆ-ಕುಡಿಕೆ ಹಾಗೂ ಇತರ ಸಾಮಗ್ರಿಗಳನ್ನು ಈ ಸಂಗ್ರಹಾಗಾರದಲ್ಲಿ ಪ್ರದರ್ಶಿಸುವುದಾಗಿ ವಿಕಾಸ್ ಖನ್ನಾ ತಿಳಿಸಿದರು. ಅಲ್ಲದೇ ತನ್ನ ಸಂಗ್ರಹದಲ್ಲಿರುವ ವಿವಿಧ ದೇಶಗಳ ಅಡುಗೆ ಸಾಮಗ್ರಿ, ಪಾತ್ರೆಗಳನ್ನು ಇಲ್ಲಿ ಇಡುವುದಾಗಿ ಅವರು ತಿಳಿಸಿದರು. ಸದ್ಯಕ್ಕೆ ಟರ್ಕಿ ದೇಶದ ಪಿಂಗಾಣಿ ಹಾಗೂ ಇತರ ಪಾತ್ರೆಗಳು ಇಲ್ಲಿದ್ದು, ಇನ್ನು ಮುಂದೆ ಅರಬ್ ಸೇರಿದಂತೆ ವಿವಿಧ ದೇಶಗಳ ಅಡುಗೆ ಸಾಮಗ್ರಿಗಳ ಸಂಗ್ರಹಿಸುವುದಾಗಿ ತಿಳಿಸಿದರು.
ಶಿಲಾನ್ಯಾಸದ ಸಂದರ್ಭದಲ್ಲಿ ಮಣಿಪಾಲ ವಿವಿಯ ಚಾನ್ಸಲರ್ ಡಾ.ರಾಮದಾಸ ಎಂ.ಪೈ, ಪತ್ನಿ ವಸಂತಿ ಆರ್.ಪೈ, ರಾಜೇಶ್ ಭಾರದ್ವಾಜ್ ಉಪಸ್ಥಿತರಿದ್ದರು. ಅಲ್ಲದೇವಿಕಾಸ್ ಖನ್ನಾ ಮಣಿಪಾಲದಲ್ಲಿ ಕಲಿಯುತ್ತಿರುವಾಗ ಅವರಿಗೆ ಶಿಲ್ಪಕಲೆ, ಚಿತ್ರಕಲೆ, ಸಂಗೀತವನ್ನು ಕಲಿಸಿ, ಅಡುಗೆ ಕುರಿತಂತೆ ವಿಶೇಷ ಮಾಹಿತಿಗಳನ್ನು ನೀಡಿದ ‘ಗುರು’ ಉಡುಪಿಯ ಗಂಗಾಧರ ರಾವ್ ಮತ್ತವರ ಕುಟುಂಬವನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು.
ಸುಮಾರು ನಾಲ್ಕು ಮಿಲಿಯ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ದೇಶದಲ್ಲೇ ವಿಶಿಷ್ಟವಾದ ಈ ವಸ್ತುಸಂಗ್ರಹಾಲಯ 2017ರ ಆಗಸ್ಟ್ ವೇಳೆಗೆ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ. ಅತ್ಯಂತ ಪುರಾತನವಾದ, ಮನೆಗಳಲ್ಲಿ ಮೂಲೆಗುಂಪಾಗಿರುವ ಹಳೆಯ ಪಾತ್ರೆ ಪಗಡಿಗಳನ್ನು ತಾನು ಸಂಗ್ರಹಿಸುತಿದ್ದು, ಹಿಂದೆಲ್ಲ ಇದ್ದ ಅವಿಭಕ್ತ ಕುಟುಂಬದಲ್ಲಿ ಅಡುಗೆಗೆ ಬಳಸುತಿದ್ದ ಅನೇಕ ವಿಶಿಷ್ಟ ಅಡುಗೆ ಸಾಮಗ್ರಿಗಳು ತನಗೆ ಸಿಕ್ಕಿವೆ ಎಂದರು.
ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಕಾಸ್ ಖನ್ನಾ, ತನ್ನ ಸಂಗ್ರಹದಲ್ಲಿರುವ ಪುರಾತನ ಅಡುಗೆ ಸಾಮಗ್ರಿಗಳನ್ನು ವಿವರಿಸಿ, ಮೈಸೂರು ಪರಿಸರದಲ್ಲಿ 300 ವರ್ಷಗಳ ಹಿಂದೆ ಮೈಸೂರು ಪಾಕ್ ತಯಾರಿಸುತಿದ್ದ ಪಾತ್ರೆ ತನಗೆ ದೊರಕಿದೆ ಎಂದರು. ಅವರ ಸಂಗ್ರಹದಲ್ಲಿರುವ ಟರ್ಕಿಯ ಕೆಲವು ವಸ್ತುಗಳು ಮೋಹಕವಾಗಿದ್ದು, ಕಾಶ್ಮೀರದ ಜಗ್ ಒಂದು ಅತ್ಯಾಕರ್ಷವಾಗಿತ್ತು.
ಕರ್ನಾಟಕ, ಗೋವಾಸ ಜಮ್ಮುಕಾಶ್ಮೀರ, ರಾಜಸ್ತಾನ, ಪಾಂಡಿಚೇರಿಗಳಲ್ಲಿ ಇಂಥ ಹಳೆಯ ವಸ್ತುಗಳ ಸಂಗ್ರಹದ ವೇಳೆ ತನಗಾದ ಅನುಭವವನ್ನು ಹಂಚಿಕೊಂಡರು. ‘ವಿಶ್ವ ಶಾಂತಿ ಆರಂಭಗೊಳ್ಳುವುದೇ ಅಡುಗೆಮನೆಯಿಂದ’ ಎಂಬುದು ತನ್ನ ಅಭಿಪ್ರಾಯ. ನಮ್ಮ ತಾತ, ಮುತ್ತಾತಂದಿರು ಬಳಸುತಿದ್ದ ಅಡುಗೆ ಪಾತ್ರೆಗಳನ್ನು, ವಸ್ತುಗಳನ್ನು ಮುಂದಿನ ಜನಾಂಗ ಅರಿಯಬೇಕೆಂಬ ಉದ್ದೇಶದಿಂದ ತಾನು ಇಂಥ ವಿಶಿಷ್ಟ ಯೋಜನೆ ಹಾಕಿಕೊಂಡಿದ್ದಾಗಿ ನುಡಿದರು.
ನಾನು ಹುಟ್ಟಿ, ಬೆಳೆದಿದ್ದು ಪಂಜಾಬ್ನ ಅಮೃತಸರವಾದರೆ, ನನಗೆ ಬದುಕನ್ನು ಕಲಿಸಿಕೊಟ್ಟ ಉಡುಪಿ ನನಗೆ ಎರಡನೇ ಮನೆಯಿದ್ದಂತೆ. ದೇವಸ್ಥಾನಗಳ ನಗರಿ ಉಡುಪಿ, ಇಂಗ್ಲೀಷ್ ಭಾಷೆಯೇ ಬಾರದ ನನಗೆ ಎಲ್ಲವನ್ನೂ ಕಲಿಸಿಕೊಟ್ಟ ಊರು ಎಂದು ಕೃತಜ್ಞತೆಯಿಂದ ಸ್ಮರಿಸಿದರು. ನನ್ನ ಗುರುಗಳಾದ ಗಂಗಾಧರ ರಾವ್ ಅವರು ತನಗೆ ಶಿಲ್ಪಕಲೆ, ಚಿತ್ರಕಲೆ, ಮರದ ಕೆತ್ತನೆ, ಸಂಗೀತ ಎಲ್ಲವನ್ನೂ ಕಲಿಸಿದರು ಎಂದು ನುಡಿದರು.
ಭಾರೀ ಜನಪ್ರಿಯತೆ ಪಡೆದಿರುವ ತನ್ನ ಪುಸ್ತಕ ‘ಉತ್ಸವ್’, ಟಿವಿಯಲ್ಲಿ ಪ್ರಸಾರವಾಗುವ ತನ್ನ ಮುಂದಿನ ಅಡುಗೆ ಧಾರಾವಾಹಿ, ಅಡುಗೆ ಕುರಿತ ಸಾಕ್ಷಚಿತ್ರದ ಕುರಿತು ಅವರು ಮಾತನಾಡಿದರು. ವಾಗ್ಷಾದ ಪ್ರಾಂಶುಪಾಲೆ ಪ್ರೊ.ಪರ್ವದವರ್ಧಿನಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.