×
Ad

ವಿದ್ಯಾಸಂಸ್ಥೆಗಳಲ್ಲಿ ಪಠ್ಯ-ಕ್ರೀಡೆಗೆ ಸಮಾನ ಪ್ರಾಮುಖ್ಯತೆ ಅಗತ್ಯ: ಜಾವಗಲ್ ಶ್ರೀನಾಥ್

Update: 2016-04-07 23:46 IST

ನಿಟ್ಟೆ ‘ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣ’ ಉದ್ಘಾಟನೆ

ನಿಟ್ಟೆ, ಎ.7: ವಿದ್ಯಾಸಂಸ್ಥೆಗಳು ಪಠ್ಯ ಮತ್ತು ಕ್ರೀಡೆಗೆ ಸಮಾನವಾದ ಪ್ರಾಮುಖ್ಯತೆಯನ್ನು ನೀಡಬೇಕು. ಕ್ರೀಡೆಯಲ್ಲಿ ಕೇವಲ ಕೌಶಲ್ಯ ಇದ್ದರೆ ಸಾಲದು. ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ಹಾಗೂ ಉತ್ತಮ ಶಿಕ್ಷಕರನ್ನು ಒದಗಿಸುವ ಕಾರ್ಯವಾಗಬೇಕು. ಇದರಿಂದ ಮಾತ್ರ ಪರಿಪೂರ್ಣ ಕ್ರೀಡಾಪಟುಗಳ ಸೃಷ್ಟಿ ಸಾಧ್ಯ. ಇದು ಶಿಕ್ಷಣಕ್ಕೂ ಅನ್ವಯವಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಹೇಳಿದ್ದಾರೆ.

ನಿಟ್ಟೆ ಶಿಕ್ಷಣ ಸಂಸ್ಥೆಯು ತನ್ನ ನಿಟ್ಟೆ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯಗಳನ್ನೊಳಗೊಂಡ ‘ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣ’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

14-28 ವರ್ಷ ವಯಸ್ಸಿನ ಮಧ್ಯೆ ಒಬ್ಬ ವ್ಯಕ್ತಿ ಸಾಕಷ್ಟು ಸ್ಪರ್ಧೆಗಳನ್ನು ಎದುರಿಸಬೇಕಾಗುತ್ತದೆ. ಈ ಸ್ಪರ್ಧೆಯ ಒತ್ತಡದಿಂದ ವಿಮುಕ್ತಿ ಪಡೆಯಲು ಪ್ರತಿದಿನ ಎರಡು ಗಂಟೆಗಳ ಕಾಲ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮನಸ್ಸು ಉಲ್ಲಾಸ ಪಡೆದುಕೊಳ್ಳುತ್ತದೆ ಎಂದರು.

ಬದುಕಿನಲ್ಲಿ ಸೋಲು-ಗೆಲುವನ್ನು ಯಾವ ರೀತಿ ಸ್ವೀಕರಿಸಬೇಕೆಂಬುದನ್ನು ಕ್ರೀಡೆ ಕಲಿಸಿಕೊಡುತ್ತದೆ. ಪರೀಕ್ಷೆ ಸಂದರ್ಭದಲ್ಲಿ ಓದಲು ಸಮಯ ಇಲ್ಲ ಎಂಬ ಕಾರಣ ನೀಡಿ ವಿದ್ಯಾರ್ಥಿಗಳು ಕ್ರೀಡೆಯಿಂದ ದೂರ ಇರುತ್ತಾರೆ. ಆದರೆ ಪರೀಕ್ಷೆ ಸಂದರ್ಭದಲ್ಲೂ ಒಂದು ಗಂಟೆಗಳ ಕಾಲ ಕ್ರೀಡೆಯಲ್ಲಿ ತೊಡಗಿಕೊಂಡರೆ ರಕ್ತ ಸಂಚಲನ ಸರಿಯಾಗಿ ತಾಜಾತನ ಮೂಡಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದ 50 ಮೀ. ಉದ್ದದ ಈಜುಕೊಳಕ್ಕೆ ಸಾಂಕೇತಿಕವಾಗಿ ಶಿಲಾನ್ಯಾಸ ನೆರವೇ ರಿಸಿದ ಕರ್ನಾಟಕದ ಮಾಜಿ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ವಿದ್ಯೆ ಮತ್ತು ಕ್ರೀಡೆ ಜೊತೆಯಾಗಿ ಸಾಗಿದರೆ ಮಾತ್ರ ಶಿಕ್ಷಣ ಪರಿಪೂರ್ಣವಾಗಲು ಸಾಧ್ಯ ಎಂದು ಹೇಳಿದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದೇಶದಲ್ಲೇ ಅತ್ಯಂತ ಹೆಚ್ಚು ಇಂಜಿನಿಯರಿಂಗ್ ಕಾಲೇಜು ಗಳಿರುವುದು ಕರ್ನಾಟಕದಲ್ಲಿ. ಎಲ್ಲ ಕಾಲೇಜುಗಳು ಕ್ರೀಡೆಗೆ ಆದ್ಯತೆ ನೀಡಿದರೆ, ಕರ್ನಾಟಕವು ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದರು.

ನಿಟ್ಟೆ ವಿವಿಯ ಚಾನ್ಸಲರ್ ಅಧ್ಯಕ್ಷ ಎನ್.ವಿನಯ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಳೂಣ್‌ಕರ್ ಸ್ವಾಗತಿಸಿದರು. ರಿಜಿಸ್ಟ್ರಾರ್ ಯೋಗೇಶ್ ಹೆಗ್ಡೆ ವಂದಿಸಿದರು. ರೋಶನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News