ಪುತ್ತೂರು: ಮನರಂಜನೆ ಕಡಿಮೆಯಾದರೂ ಪರವಾಗಿಲ್ಲ ಜನರ ಜೀವ ಮುಖ್ಯ: ಡಾ ರಾಜೇಂದ್ರ ಕೆ.ವಿ
ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಬ್ರಹ್ಮರಥೋತ್ಸವದ ಸಂದರ್ಭ ಎ. 17 ರಂದು ಸುಡುಮದ್ದು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸುಡುಮದ್ದಿನ ಅಬ್ಬರದ ಮನರಂಜನೆ ಕಡಿಮೆಯಾದರೂ ಪರವಾಗಿಲ್ಲ. ಜನರ ಜೀವ ಮತ್ತು ಸುರಕ್ಷತೆ ಮುಖ್ಯ ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ ರಾಜೇಂದ್ರ ಕೆ.ವಿ. ಅವರು ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಸಂಜೆ ಪುತ್ತೂರು ಜಾತ್ರೆಯ ಸುಡುಮದ್ದು ಪ್ರದರ್ಶನ ನಡೆಯುವ ಬೆಡಿ ಗದ್ದೆಯನ್ನು ಪರಿಶೀಲಿಸಿದ ಅವರು ಸುಡುಮದ್ದಿನ ವಿಚಾರದಲ್ಲಿ ಬಹಳಷ್ಟು ಎಚ್ಚರಿಕೆ ಆಗತ್ಯ. ಹೆಚ್ಚು ಸದ್ದು ಮಾಡುವ ಅಥವಾ ಅಪಾಯಕಾರಿಯಾದ ಸುಡುಮದ್ದಿನ ಬಳಕೆ ಬೇಡ . ಸುಡುಮದ್ದು ಪ್ರದರ್ಶನ ಸಂದರ್ಭದಲ್ಲಿ ಯಾವುದೇ ಅಪಾಯ ಸಂಭವಿಸಬಾರದು. ಸುಡುಮದ್ದನ್ನು ಗದ್ದೆಗೆ ಇಳಿಸಿದ ಬಳಿಕ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಅಜಾಗರೂಕತೆ ಅಥವಾ ಆತುರ ಸಲ್ಲದು ಎಂದು ಸುಡುಮದ್ದು ಪ್ರದರ್ಶನ ಗುತ್ತಿಗೆದಾರ ಕುಂಬಳೆ ಅಶ್ರಫ್ಗೆ ಸೂಚನೆ ನೀಡಿದರು ಸುತ್ತಲೂ ಬೇಲಿ
ಸುಡುಮದ್ದು ಗದ್ದೆಯ ಸುತ್ತಲೂ ಹಗ್ಗದ ಬೇಲಿ ರಚಿಸಿ ಸಾಕಷ್ಟು ಪೊಲೀಸ್ ಮತ್ತು ಗೃಹ ರಕ್ಷಕ ದಳದವರನ್ನು ನೇಮಿಸಬೇಕು. ಸುಡುಮದ್ದು ಪ್ರದರ್ಶನ ಮಾಡುವವರು ಮತ್ತು ಅದರ ನಿರ್ವಹಣೆಯನ್ನು ನೋಡಿಕೊಳ್ಳುವವರನ್ನು ಹೊರತುಪಡಿಸಿ ಸುಡುಮದ್ದು ಗದ್ದೆಗೆ ಸಂಜೆ 4 ರ ಬಳಿಕ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಬೇಕು. ಸುಡುಮದ್ದು ಪ್ರದರ್ಶನ ಪೂರ್ಣಗೊಂಡ ಬಳಿಕವಷ್ಟೇ ತಡೆಬೇಲಿಯ ಹಗ್ಗವನ್ನು ತೆರವುಗೊಳಿಸಬೇಕು ಎಂದು ಸಹಾಯಕ ಕಮಿಷನರ್ ಅವರು ಪುತ್ತೂರು ಪೊಲೀಸರಿಗೆ ಸೂಚನೆ ನೀಡಿದರು. ಎ.17 ರಂದು ಪುತ್ತೂರಿಗೆ
ಅಗ್ನಿ ಶಾಮಕ ಅಧಿಕಾರಿ
ಪುತ್ತೂರು ಬೆಡಿ ಪ್ರದರ್ಶನದ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಕರ್ತವ್ಯ ನಿರ್ವಹಣೆಯ ಉಸ್ತುವಾರಿಗಾಗಿ ಬೆಂಗಳೂರಿನಿಂದ ವಿಶೇಷ ಅಧಿಕಾರಿಯೊಬ್ಬರು ಪುತ್ತೂರಿಗೆ ಭೇಟಿ ನೀಡಲಿದ್ದಾರೆ. ಪುತ್ತೂರು ದೇವಾಲಯದ ಬೆಡಿ ಗದ್ದೆ ಸಮೀಪವಿರುವ ಕೊಳವೆ ಬಾವಿಗೆ ವಿಶೇಷ ನೆಕ್ ಅಳವಡಿಸುವ ಮೂಲಕ ಅಗ್ನಿಶಾಮಕ ದಳದ ವಾಹನಕ್ಕೆ ತುರ್ತಾಗಿ ನೀರು ತುಂಬಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಡುವಂತೆ ಪುತ್ತೂರು ಅಗ್ನಿಶಾಮಕದಳದ ಅಧಿಕಾರಿಗಳು ದೇವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರು ಎಎಸ್ಪಿ ಸಿ.ಬಿ. ರಿಷ್ಯಂತ್, ಪುತ್ತೂರು ನಗರ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಪುತ್ತೂರು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ರವೀಂದ್ರ ಉಪಸ್ಥಿತರಿದ್ದರು. ಫೋಟೋ: ಪುತ್ತೂರು ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಅವರು ಜಾತ್ರಾಗದ್ದೆಯನ್ನು ಪರಿಶೀಲನೆ ನಡೆಸುತ್ತಿರುವುದು.