ವೈದ್ಯರುಗಳು ಸಂಶೋಧನೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಯಶಸ್ಸಿಗೆ ಶ್ರಮವಹಿಸಬೇಕು-ಎಸ್. ರಮಾನಂದ
ಉಳ್ಳಾಲ: ಕಾರ್ಯಗಾರಗಳು ಜ್ಞಾನವೃದ್ಧಿಗೆ ಸಹಕಾರಿ, ವೈದ್ಯರುಗಳು ಸಂಶೋಧನೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಯಶಸ್ಸಿಗೆ ಶ್ರಮವಹಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಸ್. ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ವಿಂಶತಿ ಭವನದಲ್ಲಿ ಶನಿವಾರ ಜರಗಿದ ಮಿನಿಮಲ್ ಇನ್ವೇಸಿವ್ ಎಸ್ಥೆಟಿಕ್ ಆಂಡ್ ಏಂಡ್ ಏಜಿಂಗ್ ಮೆಡಿಸಿನ್ ನಿರಂತರ ಶಿಕ್ಷಣ ಕಾರ್ಯಗಾರದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಗಾರಗಳ ಮೂಲಕ ವಿವಿಧ ಆಸ್ಪತ್ರೆಗಳ ವೈದ್ಯರುಗಳ ಸಮ್ಮಿಲನ ಸಾಧ್ಯ. ಈ ಮೂಲಕ ಜ್ಞಾನ ಹಂಚುವಿಕೆಗೆ ಸಹಕಾರಿ. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳಿಗೆ ಕೊರತೆಯಿದ್ದು, ಇದನ್ನು ವೈದ್ಯರು ತಕ್ಕಮಟ್ಟಿನಲ್ಲಿ ನಡೆಸುವುದರ ಮೂಲಕ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ಕಾರ್ಯಗಾರವನ್ನು ಯೆನೆಪೋಯ ದಂತ ಕಾಲೇಜಿನ ಡೀನ್ ಡಾ. ಶ್ರೀಪತಿ ರಾವ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕ್ರೋಷಿಯಾದ ಡಿಎಂಡಿ ಏಸ್ತೆಟಿಕ್ನ ಡಾ.ಇವೋನಾ ಇಗರ್ಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕ್ಷೇಮದ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ, ಸ್ನಾತಕೋತ್ತರ ಕಲಿಕಾ ವಿಭಾಗಗಳ ನಿರ್ದೇಶಕ ಡಾ.ಬಿ.ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು. ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಡೀನ್ ಯು.ಯಸ್ ಕೃಷ್ಣ ನಾಯಕ್ ಸ್ವಾಗತಿಸಿದರು.