ಬಿಜೆಪಿಗೆ ಅಧಿಕಾರದ ಭ್ರಮೆ: ಕಾಂಗ್ರೆಸ್
ಮಂಗಳೂರು, ಎ.12: ದೇಶ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಅಧಿಕಾರ ಬಂದೇ ಬಿಟ್ಟಿತು ಎಂದು ಭಾವಿಸಿಕೊಂಡಿದ್ದಾರೆ. ಯಡಿಯೂರಪ್ಪರು ಮುಂದೆ ಮುಖ್ಯಮಂತ್ರಿಯಾಗುವುದು ಕೇವಲ ಭ್ರಮೆಯಾಗಿ ಉಳಿಯುತ್ತದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೆ ಜೈಲು ವಾಸ ಮಾಡಿದ್ದಾರೆ. ಅವರ ಸಚಿವ ಸಂಪುಟದ ಕೆಲವರು ಜೈಲುವಾಸ ಮಾಡಿದ್ದಾರೆ. ಇದನ್ನು ಕರ್ನಾಟಕದ ಜನತೆ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಸಂವಿಧಾನ ಶಿಲ್ಪಿ ಡಾ.ಬಿ .ಆರ್.ಅಂಬೇಡ್ಕರ್ರ 125ನೆ ಜನ್ಮ ದಿನವನ್ನು ಎ.14 ರಂದು ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಗುವುದು ಎಂದ ಅವರು, ಕೋಟೆಕಾರು ಮತ್ತು ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಹರಿನಾಥ್, ಮಾಜಿ ಮೇಯರ್ ಅಶ್ರಫ್ ಕೆ., ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ, ಅಶೋಕ್ ಡಿ.ಕೆ., ನಝೀರ್ ಬಜಾಲ್, ಅಹ್ಮದ್ ಬಾವ, ಮುಸ್ತಫಾ, ರಮಾನಂದ ಪೂಜಾರಿ ಉಪಸ್ಥಿತರಿದ್ದರು.