×
Ad

ಅಂಬೇಡ್ಕರ್ ಜಗತ್ತು ಕಂಡ ಮಾನವ ಹಕ್ಕುಗಳ ಪ್ರತಿಪಾದಕ-ಕೇಶವ ಬಂಗೇರ

Update: 2016-04-15 17:48 IST

ಸುಳ್ಯ: ಅಂಬೇಡ್ಕರ್ ಜಗತ್ತು ಕಂಡ ಮಾನವ ಹಕ್ಕುಗಳ ಪ್ರತಿಪಾದಕ. ಅವರು ದಲಿತ ನಾಯಕರೆಂದು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ದೇಶದ ನಾಯಕ ಎಂದು ಮಂಗಳೂರು ಶ್ರೀನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಹೇಳಿದ್ದಾರೆ.

   ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್, ದಾಸನಕಜೆಯ ದೀನದಯಾಳ್ ಎಜ್ಯುಕೇಶನ್ ಮತ್ತು ರೂರಲ್ ಅರ್ಬನ್ ಡೆವಲಪ್‌ಮೆಂಟ್ ಟ್ರಸ್ಟ್, ಶ್ರೀ ನಾಗಬ್ರಹ್ಮ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನಗಳ ಆಶ್ರಯದಲ್ಲಿ ದೈವಸ್ಥಾನದ ವಠಾರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ರ 125ನೇ ಜನ್ಮ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಅಂಬೇಡ್ಕರ್‌ರ ಈ ದೇಶದ ಮಹಾನ್ ವ್ಯಕ್ತಿಯಾಗಿ ಬಾಳಿದವರು. ಸಂವಿಧಾನವನ್ನು ರೂಪಿಸಿ ದೇಶದ ಆಡಳಿತ ವ್ಯವಸ್ಥೆಯನ್ನು ಗಟ್ಟಿಗೊಳಿಸಿದವರು. ಅಪಾರ ಜ್ಞಾನವನ್ನು ಹೊಂದಿದ್ದ ಅಂಬೇಡ್ಕರ್‌ರವರು ಹುಟ್ಟಿದ ದಿನವನ್ನು 100ಕ್ಕೂ ಮಿಕ್ಕಿ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ ಎಂದು ಹೇಳಿದ ಅವರು ಅಂಬೇಡ್ಕರ್‌ರವರ ಸಾಧನೆಗಳನ್ನು 1 ದಿನ ಅವರ ಫೊಟೋ ಇಟ್ಟು ನೆನಪು ಮಾಡಿಕೊಳ್ಳುವುದಕ್ಕಿಂತ ಅವರು ಪ್ರತಿಪಾದಿಸಿರುವ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ. ಸದಸ್ಯೆ ವಿದ್ಯಾಲಕ್ಷ್ಮಿ ಎರ್ಮೆಟ್ಟಿ, ಗ್ರಾ.ಪಂ. ಅಧ್ಯಕ್ಷ ಈಶ್ವರಪ್ಪ ಗೌಡ ಮುಖ್ಯ ಅತಿಥಿಯಾಗಿದ್ದರು. ದಾಸನಕಜೆ ಶ್ರೀನಾಗಬ್ರಹ್ಮ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಅಧ್ಯಕ್ಷ ಕೃಷ್ಣ ಸುಳ್ಳಿ ವೇದಿಕೆಯಲ್ಲಿದ್ದರು. ನ್ಯಾಯವಾದಿ ಜಗದೀಶ್ ಡಿ.ಪಿ. ಸ್ವಾಗತಿಸಿ, ಬಾಬು ದಾಸನಕಜೆ ವಂದಿಸಿದರು. ಪ್ರಶಾಂತ್ ಮತ್ತು ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಅಂಬೇಡ್ಕರ್ ಜನ್ಮ ದಿನಾಚರಣೆ ಸಭಾ ಕಾರ್ಯಕ್ರಮಕ್ಕೂ ಮೊದಲು ದುಗಲಡ್ಕದಿಂದ ವಾಹನ ಜಾಥಾ ನಡೆಯಿತು. ದುಗಲಡ್ಕ ದುಗ್ಗಲಾಯ ದೈವಸ್ಥಾನದ ಅಧ್ಯಕ್ಷ ದಯಾನಂದ ಸಾಲಿಯಾನ್ ಜಾಥಾಕ್ಕೆ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News