ನಾಗರಿಕರನ್ನಾಗಿಸುವಲ್ಲಿ ಶಿಕ್ಷಣದ ಪಾತ್ರ ಅನನ್ಯ :-ಡಾ.ಎಂ.ವೀರಪ್ಪ ಮೊಯ್ಲಿ
ಕಾರ್ಕಳ : ಸತ್ಯ ಮತ್ತು ಪ್ರಾಮಾಣಿಕತೆಯ ಬದುಕು, ಹಾಗೂ ಶಿಸ್ತು ಸಂಯಮ ಮೈಗೂಡಿಸಿಕೊಳ್ಳುವ ಜತೆಗೆ ಒಬ್ಬ ಉತ್ತಮ ನಾಗರಿಕರನ್ನಾಗಿಸುವಲ್ಲಿ ಶಿಕ್ಷಣದ ಪಾತ್ರ ಅನನ್ಯವಾಗಿದೆ.
ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. ಅವರು ಶುಕ್ರವಾರ ಗಾಂಧಿಮೈದಾನದಲ್ಲಿ ನಡೆದ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯ ರಜತಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನಾಗರಿಕ ಮತ್ತು ಸಾಮಾಜಿಕ ಮೌಲ್ಯಗಳು ಶಿಕ್ಷಣದಿಂದ ದೊರೆಯುತ್ತಿದೆ. ಸಹಬಾಳ್ವೆಯ ಜತೆಗೆ ಎಲ್ಲಾ ಸಮುದಾಯಕ್ಕೂ ಬದುಕುವ ಅವಕಾಶ ಕಲ್ಪಿಸಿಕೊಡುವ ಮನೋಭೂಮಿಕೆ, ಸತ್ಯ ಮತ್ತು ಪ್ರಾಮಾಣಿಕತೆಯ ಬದುಕು, ಹಾಗೂ ಶಿಸ್ತು ಸಂಯಮ ಮೈಗೂಡಿಸಿಕೊಳ್ಳುವ ಜತೆಗೆ ಒಬ್ಬ ಉತ್ತಮ ನಾಗರಿಕರನ್ನಾಗಿಸುವಲ್ಲಿ ಶಿಕ್ಷಣದ ಪಾತ್ರ ಅನನ್ಯವಾಗಿದೆ. ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು ಜಗತ್ತಿನಲ್ಲಿ ಭಾರತ ಅತ್ಯುತ್ತಮ ರಾಷ್ಟ್ರವಾಗಬೇಕಾದರೆ ಆ ಪ್ರಯತ್ನ ಶಾಲಾ ಕೊಠಡಿಯಿಂದ ಆರಂಭವಾಗಬೇಕು ಎಂದಂತೆ, ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಅದನ್ನು ಅರಳಿಸುವ ಕೆಲಸ ಶಿಕ್ಷಕರಿಂದಾಗಬೇಕು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಮ್ಯಾನೇಜಿಂಗ್ ಟ್ರಸ್ಟಿ ಹರ್ಷೇಂದ್ರ ಜೈನ್ ಮಾತನಾಡಿ, ಹೆತ್ತವರು ಮತ್ತು ಶಿಕ್ಷಣ ನೀಡಿದ ಸಂಸ್ಥೆಯನ್ನು ನಾವೆಂದೂ ಮರೆಯಬಾರದು. ಜತೆಗೆ ಡಾ.ವೀರಪ್ಪ ಮೊಯ್ಲಿ ಅವರನ್ನು ಕೂಡಾ ನಾವ್ಯಾರು ಮರೆಯುವಂತಿಲ್ಲ. ಕಾರಣ ಸಿಇಟಿ ತರುವ ಸಂದರ್ಭ ಸಾಕಾಷ್ಟು ಶಿಕ್ಷಣ ಸಂಸ್ಥೆಗಳು ಅವರನ್ನು ದೂರಿದ್ದರು. ಆದರೆ ಪ್ರಸ್ತುತ ಸಿಇಟಿಯಿಂದಾಗಿ ಸಾಮಾನ್ಯ ಕುಟುಂಬದ ಮಕ್ಕಳು ಕೂಡಾ ವೈದ್ಯಕೀಯ ಮತ್ತು ಇಂಜಿನಿಯರ್ ಪದವಿ ಪಡೆಯುವಂತಾಗಿದೆ ಎಂದರು.
ರಾಜ್ಯ ಅರಣ್ಯ ಹಾಗೂ ದ.ಕ.ಜಿಲ್ಲೆ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯ ಕೊಡುಗೆ ಅನನ್ಯವಾದುದು ಎಂದು ಶ್ಲಾಘಿಸಿದರು. ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಮಾತನಾಡಿ, ಮಾನವ ಸಂಪತ್ತಿನ ಸದ್ಬಳಕೆಯಾಗಬೇಕಾದರೆ ಸೂಕ್ತವಾದ ಶಿಕ್ಷಣವನ್ನು ಪಡೆಯಬೇಕು ಎಂದರು.
ಉಡುಪಿ ಪ್ರಾಂಥ್ಯದ ಧರ್ಮಗುರುಗಳಾದ ಡಾ.ಐಸಾಕೋ ಲೋಬೋ ಅಧ್ಯಕ್ಷತೆ ವಹಿಸಿದ್ದು, ಪ್ರತಿಯೊಂದು ದೇಶಕ್ಕೂ ವಿಶಿಷ್ಟ ಲಕ್ಷಣಗಳಿವೆ. ಉತ್ತಮ ನಾಗರಿಕನಾಗಲು ನೀಡುವ ಸಂಸ್ಕಾರವೇ ಶಿಕ್ಷಣ. ಬದುಕು ಕಲ್ಪಿಸುವ ಶಾಶ್ವತ ಮೌಲ್ಯ ಅದು ಶಿಕ್ಷಣದಿಂದ ಸಿಗುತ್ತದೆ. ಶಿಕ್ಷಣ ಎಂದರೆ ಓದು-ಬರಹ ಮಾತ್ರ ಅಲ್ಲ. ಮಾನವತೆಯ ವಿಕಾಸ ಎಂದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಕ್ರೈಸ್ಟ್ಕಿಂಗ್ ಚರ್ಚ್ನ ಧರ್ಮಗುರುಗಳಾದ ರೆ.ಫಾ.ಜೊಸ್ವಿ ಫೆರ್ನಾಂಡೀಸ್, ಉದ್ಯಮಿಗಳಾದ ರೋನಾಲ್ಡ್ ಕೊಲಾಸೋ ದುಬೈ, ರಿಚಾರ್ಡ್ ಲೋಬೋ ಲಂಡನ್, ಕ್ರೈಸ್ಟ್ಕಿಂಗ್ ಟ್ರಸ್ಟ್ನ ಕಾರ್ಯದರ್ಶಿ ಅವೆಲಿನ್ ಆರ್.ಲೂಯಿಸ್, ಸದಸ್ಯರಾದ ವಾಲ್ಟರ್ ಡಿಸೋಜ, ಪೀಟರ್ ಫೆರ್ನಾಂಡೀಸ್, ಲೂಸಿ ಡಿಲೀಮಾ, ಪ್ರಾಂಶುಪಾಲ ನಾರಾಯಣ ಶೇಡಿಕಜೆ, ಪುರಸಭೆ ಸದಸ್ಯ ಅಕ್ಷಯ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜೋನ್ ಸುದರ್ಶನ್, ರಿಚಾರ್ಡ್ ಮಿರಾಂಡ ಸಿಸ್ಟರ್ ಮೆಡೋನಾ ಉಪಸ್ಥಿತರಿದ್ದರು.
ಪೀಟರ್ ಫೆರ್ನಾಂಡೀಸ್ ಸ್ವಾಗತಿಸಿದರು, ಉಮೇಶ್ ಬೆಳ್ಳಿಪ್ಪಾಡಿ ಮತ್ತು ಅಲೆನ್ ಅತ್ತೂರು ಕಾರ್ಯಕ್ರಮ ನಿರೂಪಿಸಿದರು, ನಾರಾಯಣ ಶೇಡಿಕಜೆ ವಂದಿಸಿದರು.