×
Ad

ಜಮ್ಮು-ಕಾಶ್ಮೀರಕ್ಕೆ ಕೇಂದ್ರದಿಂದ ಹೆಚ್ಚುವರಿ ಪಡೆಗಳ ರವಾನೆ

Update: 2016-04-16 18:43 IST

ಹೊಸದಿಲ್ಲಿ,ಎ.16: ಕಳೆದ ನಾಲ್ಕು ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿನ ಹಿಂಸಾಚಾರಗಳಿಂದ ಕಳವಳಗೊಂಡಿರುವ ಕೇಂದ್ರ ಸರಕಾರವು ಅಲ್ಲಿಗೆ 3,600 ಹೆಚ್ಚುವರಿ ಅರೆ ಮಿಲಿಟರಿ ಸಿಬ್ಬಂದಿಗಳನ್ನು ಕಳುಹಿಸಲು ನಿರ್ಧರಿಸಿದೆ. ಇನ್ನಷ್ಟು ಪ್ರಾಣಹಾನಿಯಾಗದಂತೆ ನೋಡಿಕೊಳ್ಳುವಂತೆ ಅದು ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಶನಿವಾರವೇ ಅರೆ ಮಿಲಿಟರಿ ಪಡೆ ಸಿಬ್ಬಂದಿಗಳ 12 ಕಂಪನಿಗಳನ್ನು ಜಮ್ಮು-ಕಾಶ್ಮೀರಕ್ಕೆ ರವಾನಿಸಲಾಗಿದ್ದು, ಇನ್ನೂ 24 ಕಂಪನಿಗಳು ರವಿವಾರ ಅಲ್ಲಿಗೆ ತಲುಪಲಿವೆ. ಒಂದು ಕಂಪನಿಯು 100 ಸಿಬ್ಬಂದಿಗಳನ್ನು ಹೊಂದಿರುತ್ತದೆ.

ಮಂಗಳವಾರದಿಂದ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಐವರು ಸಾವನ್ನಪ್ಪಿದ್ದು, ಶನಿವಾರವೂ ಕಾಶ್ಮೀರದ ಹಲವೆಡೆಗಳಲ್ಲಿ ಕರ್ಫ್ಯೂ ಸದೃಶ ಸ್ಥಿತಿ ಮುಂದುವರಿದಿದೆ.

ಕೇಂದ್ರ ಗೃಹ ಸಚಿವಾಲಯವು ಜಮ್ಮು-ಕಾಶ್ಮೀರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಮೇಲೆ ಸತತ ನಿಗಾಯಿರಿಸಿದೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ಮರಳಿಸಲು ರಾಜ್ಯ ಸರಕಾರಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲದ ಭರವಸೆಯನ್ನು ಅದು ನೀಡಿದೆ.

ಯುವತಿಯೋರ್ವಳಿಗೆ ಸೈನಿಕನಿಂದ ಲೈಂಗಿಕ ಕಿರುಕುಳವನ್ನು ಆರೋಪಿಸಿ ಹಂದ್ವಾರಾದಲ್ಲಿ ಮಂಗಳವಾರ ನಡೆದ ಪ್ರತಿಭಟನೆ ಸಂದರ್ಭ ಮೂವರು ಮೃತಪಟ್ಟ ನಂತರ ಕಣಿವೆಯಲ್ಲಿ ಕರ್ಫ್ಯೂಸದೃಶ ನಿರ್ಬಂಧಗಳನ್ನು ಹೇರಲಾಗಿತ್ತು. ನಂತರದ ದಿನಗಳಲ್ಲಿ ಪೊಲೀಸ್ ಗೋಳಿಬಾರ್‌ಗೆ ಇಬ್ಬರು ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News