×
Ad

ಪಿ.ಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ತನಿಖೆಗೆ ಎಲ್ಲಾ ರೀತಿಯ ಸಹಾಕರ ನರೇಂದ್ರ ಎಲ್ ನಾಯಕ್

Update: 2016-04-17 20:40 IST

ಮಂಗಳೂರು,ಎ.17:ಪದವಿ ಪೂರ್ವ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಮೇಲೆ ಯಾವುದೇ ಸಿಐಡಿ ದಾಳಿ ನಡೆದಿಲ್ಲ. ಆದರೆ ಸಿಐಡಿ ಅಧಿಕಾರಿಗಳು ಭೇಟಿಕೊಟ್ಟು ಕೆಲವೊಂದು ಮಾಹಿತಿಯನ್ನು ಕೇಳಿದ್ದರು. ಸಿಐಡಿ ಕೇಳಿರುವ ಮಾಹಿತಿಯನ್ನು ತಕ್ಷಣ ನೀಡುವ ಮೂಲಕ ಇಡೀ ಪ್ರಕರಣದ ತನಿಖೆಗೆ ಸಂಸ್ಥೆಯು ಪೂರ್ಣ ಪ್ರಮಾಣದಲ್ಲಿ ಸಹಕರಿಸಿದೆ. ಮುಂದೆಯೂ ತನಿಖೆಗೆ ಬೇಕಾದ ಎಲ್ಲ ಸಹಕಾರವನ್ನು ಸಂಸ್ಥೆಯು ನೀಡಲು ಬದ್ಧವಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಆದರೆ ಕೆಲವೊಂದು ಮಾಧ್ಯಮಗಳು, ವ್ಯಕ್ತಿಗಳು ಸಾಮಾಜಿಕ ತಾಣಗಳಲ್ಲಿ ಮಾಹಿತಿ ಕೇಳಿರುವುದನ್ನು ದಾಳಿ ಎಂಬುದಾಗಿ ಬಿಂಬಿಸಿ ಸಮಾಜಕ್ಕೆ ತಪ್ಪು ಸಂದೇಶಗಳನ್ನು ನೀಡುತ್ತಿದ್ದಾರೆ. ಸಂಸ್ಥೆಯು ಕಳೆದ 29 ವರ್ಷದಿಂದ ಕಾಪಾಡಿಕೊಂಡು ಬಂದ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಕೆಲವೊಂದು ಟಿವಿ ಮಾಧ್ಯಮ, ವಾಟ್ಸಪ್ ಹಾಗೂ ಫೇಸ್‌ಬುಕ್‌ನಲ್ಲಿ ಸಂಸ್ಥೆಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಮನಸ್ಸಿಗೆ ಆಘಾತವನ್ನುಂಟು ಮಾಡಿದೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ತೆಗಳ ಅಧ್ಯಕ್ಷ ನರೇಂದ್ರ ನಾಯಕ್ ಹೇಳಿದ್ದಾರೆ.

ಕಳೆದ ಹಲವು ವರ್ಷಗಳಿಂದ ನಮ್ಮ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಪರಿಣಾಮಕಾರಿಯ ಶಿಕ್ಷಣವನ್ನು ಅನುಭವ, ನುರಿತ ಉಪನ್ಯಾಸಕರ ಮೂಲಕ ಶಿಸ್ತುಬದ್ಧವಾಗಿ ನೀಡುತ್ತಿದೆ. ಅಲ್ಲದೆ ಯಾವತ್ತೂ ಯಾವುದೇ ರೀತಿಯಲ್ಲಿಯೂ ನಾವು ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ. ಶ್ರಮ ಎವ ಜಯತೇ ಎಂಬ ವೇದ ವಾಕ್ಯದ ಮೇಲೆ ನಾವು ಕಠಿಣ ಪರಿಶ್ರಮದ ಮೂಲಕವೇ ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದೇವೆ. ಅನ್ಯಮಾರ್ಗಗಳನ್ನು ಅನುಸರಿಸುವ ಅನಿವಾರ್ಯತೆಯೂ, ಅವಶ್ಯಕತೆಯೂ ನಮಗಿಲ್ಲ. ನಮ್ಮ ಸಂಸ್ಥೆಯ ಪರಿಶ್ರಮದಿಂದಾಗಿಯೇ ನಮ್ಮ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿದೆ. ಅದು ವಿದ್ಯಾರ್ಥಿಗಳ ಅಪಾರ ಪರಿಶ್ರಮಕ್ಕೆ ಸಂದ ಪ್ರತಿಫಲ. ಈ ಬಗ್ಗೆ ಇಲ್ಲಿ ಕಲಿತ ವಿದ್ಯಾರ್ಥಿ ಹಾಗೂ ಪೋಷಕ ವರ್ಗವೇ ಸಾಕ್ಷಿ. ಯಾವುದೇ ಸಂದೇಹ ಅಥವಾ ತಪ್ಪು ಮಾಹಿತಿ ರವಾನೆಯಿಂದ ವಿದ್ಯಾರ್ಥಿಗಳ ಹಾಗೂ ಬೋಧಕ ವರ್ಗದ ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಗೆ ಅವಮಾನವಾಗಿದೆ.

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನಾವು ಯಾವುದೇ ನೆಲೆಯಲ್ಲಿ ಭಾಗಿಯಾಗಿಲ್ಲ ಆದರೆ ಸರಕಾರ ಇಡೀ ರಾಜ್ಯದಲ್ಲಿ ನಡೆಸುತ್ತಿರುವ ತನಿಖೆಗೆ ನಾವು ಸಹಕಾರವನ್ನು ಕೊಟ್ಟಿದ್ದೇವೆ ಹಾಗೆಯೇ ಮುಂದೆಯೂ ನೀಡುತ್ತೇವೆ. ಸರಕಾರವು ನಿಜವಾದ ತಪ್ಪಿಸ್ಥರನ್ನು ಕಂಡು ಹಿಡಿದು ಅವರಿಗೆ ಶಿಕ್ಷೆಯನ್ನು ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಆ ಮೂಲಕ ಶಿಕ್ಷಣದ ಮೌಲ್ಯವನ್ನು, ಖಾಸಗಿ ಶಿಕ್ಷಣ ಸಂಸ್ಥೆಗಳ ಘನತೆಯನ್ನು ಉಳಿಸಬಹುದಾಗಿದೆ ಎಂದು ಹೇಳಿದ್ದಾರೆ.

 ಸಮಾಜದಲ್ಲಿ ಕೆಲವರು ನಮ್ಮ ಏಳ್ಗೆಯನ್ನು ಸಹಿಸಲಾಗದೇ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಜವಾಬ್ದಾರಿಯುತ ಮಾಧ್ಯಮಗಳು ಪ್ರಕರಣದ ಬಗ್ಗೆ ಆವೇಶದಿಂದ ವಾಸ್ತವವನ್ನು ಮನದಟ್ಟು ಮಾಡಿಕೊಳ್ಳದೆ ಶಿಕ್ಷಣ ರಂಗದಲ್ಲಿ ಘನತೆಯನ್ನು ಹೊಂದಿರುವ ಸಂಸ್ಥೆ ಅಥವಾ ವ್ಯಕ್ತಿಗಳ ಬಗ್ಗೆ ತಪ್ಪು ಸಂದೇಶವನ್ನು ಸಮಾಜಕ್ಕೆ ನೀಡುತ್ತಿರುವುದು ಎಷ್ಟು ಸರಿ? ಈ ಪ್ರಕರಣದಲ್ಲಿ ಸಿಐಡಿ ಭಾಗವು ತನಿಖೆಯನ್ನು ನಡೆಸುತ್ತಿದ್ದು ತನಿಖೆ ಮುಗಿದ ಬಳಿಕ ಸತ್ಯ ಹೊರಬರಲಿದೆ.

ಈಗಾಗಲೇ ಅಂತಹ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಮಂಗಳೂರು ಪೋಲಿಸ್ ಕಮೀಷನರೇಟ್ ಇವರಲ್ಲಿ ದೂರನ್ನು ದಾಖಲಿಸಲಾಗಿದೆ. ಇದಲ್ಲದೆ ಕಳೆದ 29 ವರ್ಷಗಳಿಂದ ಇಲ್ಲಿ ಕಲಿತ ಅಪಾರ ವಿದ್ಯಾರ್ಥಿ ವರ್ಗ ಹಾಗೂ ಅವರ ಪೋಷಕ ವರ್ಗ ಸಂಸ್ಥೆಯ ಪರವಾಗಿ ಈ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಾನೂನು ಹೋರಾಟ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News