ವಿದ್ಯಾರ್ಥಿಯ ಹತ್ಯೆ:ಎಂಟು ಜನರಿಗೆ ಮರಣ ದಂಡನೆ
Update: 2016-04-19 20:00 IST
ಬರಸಾತ್,ಎ.19: ಪ.ಬಂಗಾಲದ ಉತ್ತರ 24-ಪರಗಣಗಳ ಜಿಲ್ಲೆಯಲ್ಲಿ 2014ರಲ್ಲಿ ಕಾಲೇಜು ವಿದ್ಯಾರ್ಥಿಯೋರ್ವನ ಹತ್ಯೆಗಾಗಿ ಎಂಟು ಅಪರಾಧಿಗಳಿಗೆ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮಂಗಳವಾರ ಮರಣ ದಂಡನೆಯನ್ನು ವಿಧಿಸಿದೆ. ಇನ್ನೋರ್ವನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
ತೀರ್ಪನ್ನು ಪ್ರಕಟಿಸಿದ ನ್ಯಾ.ದಾಮನ ಪ್ರಸಾದ ಬಿಸ್ವಾಸ್ ಅವರು ಓರ್ವ ಮಹಿಳೆ ಸೇರಿದಂತೆ ಇತರ ಮೂವರಿಗೆ ಐದು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದರು.
20ರ ಹರೆಯದ ಕಾಲೇಜು ವಿದ್ಯಾರ್ಥಿ,ಜಿಲ್ಲೆಯ ಬಾಮುನಗಾಚಿ ನಿವಾಸಿ ಸೌರವ ಚೌಧರಿ ಪ್ರದೇಶದಲ್ಲಿಯ ಸಮಾಜ ವಿರೋಧಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ. ಆತನನ್ನು ದುಷ್ಕರ್ಮಿಗಳ ಗುಂಪು ಹತ್ಯೆಗೈದಿದ್ದು,2014,ಜುಲೈ 5ರಂದು ಆತನ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಪ್ರಕರಣದಲ್ಲಿ ಸಾಕ್ಯಾಧಾರಗಳ ಕೊರತೆಯಿಂದ ಒಟ್ಟೂ 13 ಜನರು ಖುಲಾಸೆಗೊಂಡಿದ್ದಾರೆ.