ಶಂಕರಪುರ: ಕೆನ್ಯೂಟ್ ನೊರೊನ್ಹಾರಿಗೆ ಗುರುದೀಕ್ಷೆ
ಉಡುಪಿ, ಎ.21: ಉಡುಪಿ ಧರ್ಮಪ್ರಾಂತದ ನಾಲ್ಕನೆ ವರ್ಷದ ಗುರುದೀಕ್ಷೆ ಸಮಾರಂಭ ಬುಧವಾರ ನಡೆದಿದ್ದು, ಶಂಕಪುರ ಸಂತ ಜೋನ್ ಇವಾಂಜೆಲಿಸ್ತ್ ಧರ್ಮಕೇಂದ್ರದಲ್ಲಿ ಬ್ರದರ್ ಕೆನ್ಯೂಟ್ ನೊರೊನ್ಹಾರಿಗೆ ಗುರುದೀಕ್ಷೆ ನೀಡಲಾಯಿತು.
ಉಡುಪಿ ಬಿಷಪ್ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಧರ್ಮಪ್ರಾಂತದ ಈ ವರ್ಷದ ಏಕೈಕ ಅಭ್ಯರ್ಥಿ ಕೆನ್ಯೂಟ್ ನೊರೊನ್ಹಾರಿಗೆ ಗುರುದೀಕ್ಷೆ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ವಂ. ಡಾ.ಲೋಬೊ, ಕ್ರೈಸ್ತ ಧರ್ಮಗುರುವಿನ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ವಿವರಿಸಿದರು. ಧರ್ಮಪ್ರಾಂತಕ್ಕೆ ಹೊಸ ಧರ್ಮಗುರುವನ್ನು ನೀಡಿದ ಕುಟುಂಬ ವರ್ಗವನ್ನು ಶ್ಲಾಘಿಸಿದರು. ಕ್ರೈಸ್ತ ಕುಟುಂಬಗಳಿಂದ ಹೆಚ್ಚಿನ ಯುವಕರು ಧರ್ಮಗುರುಗಳಾಗಲು ಮುಂದೆ ಬರುವಂತೆ ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸಲು ಪೋಷಕರಿಗೆ ಕರೆ ನೀಡಿದರು.
ಸಂಭ್ರಮದ ಬಲಿಪೂಜೆಯಲ್ಲಿ ಪವಿತ್ರಾತ್ಮನ ಆಗಮನಕ್ಕಾಗಿ ಧರ್ಮಾಧ್ಯಕ್ಷರ ಜೊತೆ ಸೇರಿದ ಎಲ್ಲಾ ಧರ್ಮಗುರುಗಳೂ ತಮ್ಮ ಕರಗಳನ್ನು ನವ ಧರ್ಮಗುರು ಅಭ್ಯರ್ಥಿಯ ಶಿರದ ಮೇಲಿಟ್ಟು ಪ್ರಾರ್ಥಿಸಿದರು. ನಂತರ ಕ್ರೈಸ್ತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನವ ಧರ್ಮಗುರುವಿನ ಕರಗಳನ್ನು ಪವಿತ್ರ ತೈಲಗಳಿಂದ ಅಭಿಷಿಕ್ತಗೊಳಿಸಿದರು.
ಉಡುಪಿ ಕ್ರೈಸ್ತ ಧರ್ಮಪ್ರಾಂತವಾಗಿ ಅಸ್ತಿತ್ವಕ್ಕೆ ಬಂದ ನಂತರ ಇದು ನಾಲ್ಕನೇ ವರ್ಷದ ಗುರುದೀಕ್ಷೆ ಸಮಾರಂಭವಾಗಿದ್ದು, 2013ರಲ್ಲಿ ಮೂಡುಬೆಳ್ಳೆಯಲ್ಲಿ ಧರ್ಮಪ್ರಾಂತದ ಪ್ರಥಮ ಧರ್ಮಗುರುವಾಗಿ ವಂ.ಮಹೇಶ್ ಡಿಸೋಜ ದೀಕ್ಷೆ ಪಡೆದಿದ್ದರು. 2014ರಲ್ಲಿ ಶಿರ್ವ ಚರ್ಚಿನಲ್ಲಿ ವಂ.ರೋಲ್ವಿನ್ ಆರಾನ್ಹಾ ಹಾಗೂ ವಂ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಗುರುದೀಕ್ಷೆ ಪಡೆದಿದ್ದರೆ, 2015 ರಲ್ಲಿ ಹಿರ್ಗಾನದಲ್ಲಿ ವಂ. ರೋಯ್ಸ್ಟನ್ ಫೆರ್ನಾಂಡಿಸ್ ಹಾಗೂ ಕೆಲ್ಬೆಂಟ್ ಬೋಳಾದಲ್ಲಿ ವಂ.ವಿಜಯ್ ಡಿಸೋಜ ಗುರುದೀಕ್ಷೆ ಪಡೆದಿದ್ದರು.
ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂ.ಲಾರೆನ್ಸ್ ಡಿಸೋಜಾ, ಮಂಗಳೂರು ಜೆಪ್ಪು ಸೆಮಿನರಿಯ ವಂ. ಜೋಸೆಫ್ ಮಾರ್ಟಿಸ್, ಶಂಕರಪುರದ ವಂ. ವಿನ್ಸೆಂಟ್ ಕುವೆಲ್ಲೊ ಹಾಗೂ ಇತರ ಧರ್ಮಗುರುಗಳು ಗುರುದೀಕ್ಷಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಂ. ಕೆನ್ಯೂಟ್ ನೊರೊನ್ಹಾ ಶಂಕರಪುರದ ಕಾಶ್ಮೀರ್ ಹಾಗೂ ಆಗ್ನೆಸ್ ನೊರೊನ್ಹಾ ಅವರ ಪುತ್ರರಾಗಿದ್ದು, ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣವನ್ನು ಎಸ್ವಿಎಸ್ ಇನ್ನಂಜೆಯಲ್ಲಿ, ಪದವಿಯನ್ನು ಶಿರ್ವ ಸೈಂಟ್ ಮೇರಿಸ್ ಕಾಲೇಜಿ ನಲ್ಲಿ ಮುಗಿಸಿ, ಮಂಗಳೂರಿನ ಸಂತ ಜೋಸೇಫ್ ಗುರು ಮಠದಲ್ಲಿ ತತ್ವಶಾಸ್ತ್ರ ಮತ್ತು ದೈವಶಾಸ್ತ್ರ ಶಿಕ್ಷಣವನ್ನು ಪೊರೈಸಿದ್ದಾರೆ. ಶಿಕ್ಷಣದ ಮಧ್ಯೆ ತಮ್ಮ ಧಾರ್ಮಿಕ ತರಬೇತಿಗಾಗಿ ಕಾಸರಗೋಡು, ಒಮ್ಜುರ್, ಮನೇಲಾ ಹಾಗೂ ಬಸ್ರೂರು ಧರ್ಮಕೇಂದ್ರಗಳಲ್ಲಿ ಧಾರ್ಮಿಕ ಸೇವೆಯನ್ನು ನೀಡಿದ್ದಾರೆ.