ಸುಳ್ಯದಲ್ಲಿ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ
- ಜಾಕ್ವೆಲ್ ಬಳಿ ಹೊಸ ಪಂಪ್ ನಿಂದ ನೀರು ಲಿಫ್ಟ್
- ಹೊಳೆಗೆ ಅಳವಡಿಸಲಾದ ಪಂಪು, ಒಡ್ಡುಗಳ ತೆರವಿಗೆ ಮನವಿ
- ಪಯನೀರ್ ಸಂಸ್ಥೆಯಿಂದ ಕಡಿಮೆ ಬೆಲೆಗೆ ಮಿನರಲ್ ವಾಟರ್
ಸುಳ್ಯ, ಎ.28 ಸುಳ್ಯದ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿರುವ ನಗರ ಪಂಚಾಯತ್ ಪರ್ಯಯ ವ್ಯವಸ್ಥೆಯ ಮೂಲಕವೂ ನೀರು ಪೂರೈಕೆಗೆ ಮುಂದಾಗಿದೆ.
ನೀರಿನ ಕೊರತೆಯಿಂದಾಗಿ ನಗರ ಪಂಚಾಯತ್ನಲ್ಲಿ ನಡೆದ ತುರ್ತು ಸಭೆಯಲ್ಲಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ನಿರ್ಧರಿಸಿದ್ದು, ಸಭೆಯ ಬಳಿಕ ಅಧ್ಯಕ್ಷ ಪ್ರಕಾಶ್ ಹೆಗ್ಡೆಯವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದರು.
ಜಾಕ್ ವೆಲ್ಗಳಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ತಗ್ಗಿ ಚಿಂತಾಜನಕ ಪರಿಸ್ಥಿತಿ ತಲೆದೋರಿದೆ. ಈ ನಿಟ್ಟಿನಲ್ಲಿ ಸುಳ್ಯ ನಗರದಲ್ಲಿ ಪಂಚಾಯತ್ನಿಂದ ಸರಬರಾಜು ಮಾಡುವ ನೀರನ್ನು ದಿನ ಬಿಟ್ಟು ದಿನ ಪೂರೈಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು.
ನೀರಿನ ಕೊರತೆ ನೀಗಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಂಡ ಪುರಪಿತೃಗಳು ಕಲ್ಲುಮುಟ್ಲುವಿನ ಪಂಪ್ ಹೌಸ್ನಲ್ಲಿರುವ ಜಾಕ್ವೆಲ್ ಬಳಿಯಲ್ಲಿ ಮತ್ತೊದು 25 ಹೆಚ್.ಪಿ.ಪಂಪ್ ಅಳವಡಿಸಿ ನೀರು ಲಿಫ್ಟ್ ಮಾಡಲು ಮುಂದಾಗಿದ್ದು, ಇದರಿಂದ ನೀರಿನ ಮಟ್ಟ ಒಂದಷ್ಟು ಏರಿದೆ. ಹೀಗಾಗಿ ಮುಂದಿನ ಒಂದು ವಾರದವರೆಗೆ ನೀರಿ ಮಟ್ಟಿಗೆ ಆತಂಕ ಕೊಂಚ ಕಡಿಮೆಯಾಗಿದೆ.
ಸಮಯ ನಿಗದಿ:
ನಗರದಲ್ಲಿ ನೀರು ಬಿಡಲು ಈಗ ವೇಳಾಪಟ್ಟಿಯನ್ನೂ ನಿಗದಿಗೊಳಿಸಲಾಗಿದೆ. ಒಂದು ದಿನ ಬೆಳಿಗ್ಗೆ 6ರಿಂದ 11ರವರೆಗೆ ಟ್ಯಾಂಕ್ಗೆ ನೀರು ತಂಬುವ ಸಮಯ, 11ರಿಂದ 3 ರವರೆಗೆ ಶ್ರೀರಾಂಪೇಟೆ, ಫಯರ್ ಸ್ಟೆಷನ್ವರೆಗೆ, ಓಡಬೈ, ಸರಕಾರಿ ಆಸ್ಪತ್ರೆ ಹಿಂಭಾಗ, ಮಿಲಿಟರಿ ಗ್ರೌಂಡ್ , ಅಪರಾಹ್ನ 3ರಿಂದ 8ರವರೆಗೆ ಟ್ಯಾಂಕ್ಗೆ ನೀರು ತಂಬುವ ಸಮಯ, ರಾತ್ರಿ 8ರಿಂದ 12ರವರೆಗೆ ಬಿಡಿಓ ಕಚೇರಿ, ಕುರುಂಜಿಭಾಗ್, ದೇವಸ್ಯ, ಅಂಬಟೆಡ್ಕ, ನಗರ ಪಂಚಾಯತ್ ಏರಿಯಾ, ರಬ್ಬರ್ ಕ್ವಾರ್ಟಸ್, ವಿವೇಕಾನಂದ ಸರ್ಕಲ್, ರಾತ್ರಿ 12ರಿಂದ ಬೆಳಿಗ್ಗೆ 6ರವರೆಗೆ ಟ್ಯಾಂಕ್ಗೆ ನೀರು ತಂಬುವ ಸಮಯ, ಮರುದಿನ ಬೆಳಿಗ್ಗೆ 6ರಿಂದ 11ರವರೆಗೆ ನಾವೂರು, ಜಟ್ಟಿಪ್ಪಳ್ಳ, ಬೋರುಗುಡ್ಡೆ, ಬೆಳಿಗ್ಗೆ 11ರಿಂದ ಅಪರಾಹ್ನ 3ರವರೆಗೆ ಟ್ಯಾಂಕ್ಗೆ ನೀರು ತಂಬುವ ಸಮಯ, ಅಪರಾಹ್ನ 3ರಿಂದ 8 ರವರೆಗೆ ಗಾಂಧಿನಗರ ಶಾಲೆ, ಕಾಯರ್ತೋಡಿ, ಅಮರಶ್ರೀ, ಪರಿವಾರಕಾನ, ರಾತ್ರಿ 8ರಿಂದ 12ರವರೆಗೆ ಟ್ಯಾಂಕ್ಗೆ ನೀರು ತಂಬುವ ಸಮಯ, ರಾತ್ರಿ 12ರಿಮದ ಬೆಳಿಗ್ಗೆ 6ರವರೆಗೆ ಎನ್.ಎಂ.ಸಿ.ಗುಡ್ಡೆ, ಕೇರ್ಪಳ, ಬೂಡು, ಭಸ್ಮಡ್ಕ.. ಹೀಗೆ ನಿಗದಿಪಡಿಸಲಾಗಿದೆ.
ನೀರಿನ ಕೊರತೆ ನೀಗಿಸಲು ತಾಲೂಕು ಆಡಳಿತವೂ ಕ್ರಮಕ್ಕೆ ಮುಂದಾಗಿದ್ದು, ಪಯಸ್ವಿನಿ ಹೊಳೆಗೆ ಅಳವಡಿಸಲಾದ ಪಂಪು ಹಾಗೂ ಒಡ್ಡುಗಳನ್ನು ತೆರವುಗೊಳಿಸಲು ತಹಶೀಲ್ದಾರ್ ಅನಂತಶಂಕರ್ ಅವರು ವಿವಿಧ ಕಡೆಗಳಿಗೆ ತೆರಳಿ ಮನವಿ ಮಾಡಿದ್ದಾರೆ.
ಕಡಿಮೆ ಬೆಲೆಗೆ ಮಿನರಲ್ ವಾಟರ್:
ಸುಳ್ಯ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ , ಅಡ್ಕಾರಿನ ಪಯನೀರ್ ಸಂಸ್ಥೆಯವರು ಕಡಿಮೆ ಬೆಲೆಗೆ ಮಿನರಲ್ ವಾಟರ್ ಪೂರ್ಶೆಸುವ ಯೋಜನೆ ಆರಂಭಿಸಿದ್ದಾರೆ.
20 ಲೀಟರ್ನ ಶುದ್ದ ಕುಡಿಯುವ ನೀರಿನ ಕ್ಯಾನ್ಗೆ ರೂಪಾಯಿ 70 ದರವಿದ್ದು, ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆಯವರ ಮನವಿ ಮೇರೆಗೆ ಇದನ್ನು ಕೇವಲ 20 ರೂಪಾಯಿಗೆ ನಗರ ಪಂಚಾಯತ್ಗೆ ಪಯನೀರ್ ಸಂಸ್ಥೆಯವರು ಸರಬರಾಜು ಮಾಡುತ್ತಿದ್ದು, ನಗರ ಪಂಚಾಯತ್ ನವರು ಕುಡಿಯುವ ನೀರು ಅಗತ್ಯವಿರುವವರಿಗೆ ಕ್ಯಾನ್ ಒಂದಕ್ಕೆ ತಲಾ ರೂಪಾಯಿ ಹತ್ತರಂತೆ ಪಡೆದು ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದು, ಗುರುವಾರ ಇದಕ್ಕೆ ಚಾಲನೆ ನೀಡಲಾಯಿತು.
ಈ ಕುಡಿಯುವ ನೀರಿನ ಕ್ಯಾನ್ಗೆ ರೂಪಾಯಿ ಹತ್ತನ್ನು ನಗರ ಪಂಚಾಯತ ಭರಿಸಲಿದೆ. ಗುರುವಾರದಿಂದಲೇ ಕುಡಿಯುವ ನೀರಿನ ಕ್ಯಾನ್ಗಳ ವಿತರಣೆ ಆರಂಭಗೊಂಡಿದೆ. ಕ್ಯಾನ್ಗಳಿಗೆ ತಲಾ ನೂರರಂತೆ ಅಡ್ವಾನ್ಸ್ ನೀಡಬೇಕಿದ್ದು, ಕ್ಯಾನ್ ವಾಪಾಸ್ ಕೊಂಡೊಯ್ಯುವಾಗ ಈ ಹಣವನ್ನು ವಾಪಸ್ ನೀಡಲಾಗುತ್ತದೆ. ವಿತರಣೆಗಾಗಿ ನಗರ ಪಂಚಾಯತ್ ನಲ್ಲಿ ಕೌಂಟರ್ ಕೂಡ ತೆರೆಯಲಾಗಿದೆ.