ಎತ್ತಿನಹೊಳೆ ಯೋಜನೆಯ ವಿರುದ್ಧದ ಪ್ರತಿಭಟನೆಗೆ ಬೆಂಬಲ: ನಳಿನ್ ಕುಮಾರ್
ಪುತ್ತೂರು, ಮೇ 1: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮೇ 16 ರಂದು ನಡೆಯುವ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಮತ್ತು ಮೇ 19 ರಂದು ನಡೆಯುವ ಸ್ವಯಂ ಘೋಷಿತ ದ.ಕ. ಜಿಲ್ಲಾ ಬಂದ್ಗೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಿಂದ ದ.ಕ. ಜಿಲ್ಲೆಗೆ ಯಾವುದೇ ಹಾನಿಯಿಲ್ಲ ಎಂದು ವಾದಿಸುವವರು ಎತ್ತಿನಹೊಳೆ ಯೋಜನೆಯು ದ.ಕ. ಜಿಲ್ಲೆಯ ಜಲಸಂಪತ್ತಿಗೆ ಹಾನಿ ಮಾಡಲಿದೆ ಎಂಬ ಸತ್ಯವನ್ನು ಅರಿತುಕೊಂಡು ಆತ್ಮಸಾಕ್ಷಿಗೆ ಸರಿಯಾಗಿ ವರ್ತಿಸಬೇಕು ಎಂದು ಹೇಳಿದರು.
ಸುಳ್ಯದಿಂದ ಮಂಗಳೂರುತನಕ ನೀರಿನ ಕುರಿತಂತೆ ನೇತ್ರಾವತಿ ನದಿಯ ನೇರ ಸಂಬಂಧವಿದೆ. ರೈತರಿಗೆ, ಹೈನುಗಾರರಿಗೆ ಮತ್ತು ಜಿಲ್ಲೆಯ ಜನರಿಗೆ ನೇತ್ರಾವತಿ ಜೀವನದಿಯಾಗಿದೆ. ನೇತ್ರಾವತಿ ಬರಿದಾದರೆ ಜಿಲ್ಲೆಯ ಜನ ಗುಳೆ ಹೋಗುವ ಪರಿಸ್ಥಿತಿ ಬರಬಹುದು ಎಂಬ ವಾಸ್ತವವನ್ನು ಅರಿತುಕೊಂಡು ಈ ಯೋಜನೆಯ ಕುರಿತು ಮಾತನಾಡಬೇಕು ಎಂದರು.
ಎತ್ತಿನಹೊಳೆ ಯೋಜನೆಯ ಕುರಿತು ಸರಕಾರ ಹಠಮಾರಿ ನಿಲುವು ಪ್ರದರ್ಶಿಸುತ್ತಿದೆ. ಇಂಜಿನಿಯರ್ಗಳು ತಯಾರಿಸಿರುವ ಯೋಜನೆ ವಾಸ್ತವವಾಗಿ ಯಶಸ್ವಿಯಾಗುತ್ತದೆಯೇ ಮತ್ತು ಇದರಿಂದಾಗಿ ಜಿಲ್ಲೆಗೆ ಉಂಟಾಗುವ ಹಾನಿಯ ಕುರಿತು ಪಾರದರ್ಶಕ ಚರ್ಚೆ ನಡೆಸಲು ರಾಜ್ಯ ಸರಕಾರವಾಗಲೀ ಮುಖ್ಯಮಂತ್ರಿಗಳಾಗಲೀ ಸಿದ್ಧರಿಲ್ಲ. ತೋರಿಕೆಗೆ ಮಾತ್ರ ಮಾತುಕತೆಗೆ ಸಿದ್ಧ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ಕರೆಯಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ತಲೆದೋರಿರುವ ನೀರಿನ ಬರ ಪರಿಸ್ಥಿತಿಗೂ, ಎತ್ತಿನಹೊಳೆ ಯೋಜನೆಗೂ ಸಂಬಂಧವಿಲ್ಲ ಎಂದು ವಾದಿಸುವ ಜನಪ್ರತಿನಿಧಿಗಳು ಅಂಕಿ ಅಂಶ ಸಹಿತ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಲಿ. ಪತ್ರಿಕಾ ಹೇಳಿಕೆ ನೀಡಿ ಜವಾಬ್ದಾರಿಯಿಂದ ಜಾರಿಕೊಳ್ಳುವ ಹೇಡಿತನವನ್ನು ಪ್ರದರ್ಶಿಸುವುದು ಬೇಡ ಎಂದು ನಳಿನ್ ಕುಮಾರ್ ಟೀಕಿಸಿದರು.
ಈ ಸಂದರ್ಭ ಬಿಜೆಪಿ ಮುಂದಾಳುಗಳಾದ ಸಂಜೀವ ಮಠಂದೂರು, ಸಾಜ ರಾಧಾಕೃಷ್ಣ ಆಳ್ವ, ಡಿ.ಶಂಭು ಭಟ್, ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು.