5 ಹೆಕ್ಟೇರ್ವರೆಗಿನ ಗಣಿಗಾರಿಕೆಗೆ ಇನ್ನು ಜಿಲ್ಲಾ ಮಟ್ಟದಲ್ಲೇ ಅನುಮತಿ
ಮಂಗಳೂರು, ಮೇ 2: ಐದು ಹೆಕ್ಟೇರ್ವರೆಗೆ ಜಮೀನಿನಲ್ಲಿ ಗಣಿಗಾರಿಕೆ, ಮರಳುಗಾರಿಕೆಗೆ ಅನುಮತಿಯನ್ನು ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಜಿಲ್ಲಾ ಪರಿಸರ ಪರಿಣಾಮಗಳ ವಿಶ್ಲೇಷಣಾ ಪ್ರಾಧಿಕಾರದಿಂದ ನೀಡಲಾಗುವುದು ಎಂದು ರಾಜ್ಯ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ತಿಳಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಪರಿಸರ ಪರಿಣಾಮಗಳ ವಿಶ್ಲೇಷಣಾ ಪ್ರಾಧಿಕಾರದ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಸಂಬಂಧಪಟ್ಟ ಸಹಾಯಕ ಆಯುಕ್ತರು, ಕಾರ್ಯದರ್ಶಿಗಳು ಇರುತ್ತಾರೆ. ಈ ಸಮಿತಿಯು ಬಂದ ಅರ್ಜಿಗಳನ್ನು ಅಧ್ಯಯನ ಮಾಡಿ, ಅನುಮತಿ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.
ಗಣಿಗಾರಿಕೆಗೆ ಬಂದ ಅರ್ಜಿಗಳ ಸಮರ್ಪಕ ವಿಶ್ಲೇಷಣೆ ಮಾಡುವುದು ಪ್ರಾಮುಖ್ಯವಾಗಿದೆ. ಅನುಮತಿ ನೀಡಿದ ಬಳಿಕ, ಪರವಾನಿಗೆದಾರರು ಯಾವುದೇ ಷರತ್ತಿನ ಉಲ್ಲಂಘನೆ ಮಾಡಿದರೆ ಅವರ ನಿರಾಕ್ಷೇಪಣಾ ಪತ್ರವನ್ನು ರದ್ದುಪಡಿಸಿ, ಅವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಅಧಿಕಾರವನ್ನು ಜಿಲ್ಲಾ ಸಮಿತಿ ಹೊಂದಿರುತ್ತದೆ ಎಂದು ರಾಮಚಂದ್ರ ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಅರಣ್ಯ ಇಲಾಖೆಯ ಅಧಿಕಾರಿ ಜಯಕುಮಾರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ ಪುರಾಣಿಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.