×
Ad

ವಿರಾಟ್‌ ಕೊಹ್ಲಿಗೆ ’ಖೇಲ್‌ರತ್ನ , ರಹಾನೆಗೆ ಅರ್ಜುನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು

Update: 2016-05-03 14:24 IST

ಹೊಸದಿಲ್ಲಿ, ಮೇ 3: ಭಾರತದ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿಗೆ ದೇಶದ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪುರಸ್ಕಾರ ರಾಜೀವ್‌ ಗಾಂಧಿ ಖೇಲ್‌ ರತ್ನ   ಮತ್ತು ತಂಡದ ಸಹ ಆಟಗಾರ ಅಜಿಂಕ್ಯ ರಹಾನೆಗೆ ಅರ್ಜುನ ಪ್ರಶಸ್ತಿ ನೀಡಲು ಬಿಸಿಸಿಐ ಶಿಫಾರಸು ಮಾಡಿದೆ.
ಕೊಹ್ಲಿ ಪ್ರಸ್ತುತ  ನಡೆಯುತ್ತಿರುವ ಐಪಿಎಲ್‌ ಟ್ವೆಂಟಿ-20 ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌  ಬೆಂಗಳೂರು ತಂಡವನ್ನು ನಾಯಕರಾಗಿ ಮುನ್ನಡೆಸುತ್ತಿದ್ದಾರೆ. 2013ರಲ್ಲಿ ಮಾಸ್ಟರ್ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ಕೊಹ್ಲಿ ದೇಶದ ಓರ್ವ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದಾರೆ. 
ಎಂಎಸ್‌ ಧೋನಿ ಟೆಸ್ಟ್ ಕ್ರಿಕೆಟ್‌ ತಂಡದ ನಾಯಕತ್ವವನ್ನು ತ್ಯಜಿಸಿದ ಬಳಿಕ ಕೊಹ್ಲಿ ತಂಡದ ನಾಯಕರಾಗಿ  ಶ್ರೀಲಂಕಾದಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಮತ್ತು ಭಾರತದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್‌ ಸರಣಿಯನ್ನು ಭಾರತ  ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ದಿಲ್ಲಿಯ ಯುವ ದಾಂಡಿಗ ಕೊಹ್ಲಿ ಇತ್ತೀಚೆಗೆ ಗುಜರಾತ್ ಲಯನ್ಸ್‌  ವಿರುದ್ಧದ ಐಪಿಎಲ್‌ ಟ್ವೆಂಟಿ -20 ಪಂದ್ಯದಲ್ಲಿ  ಚೊಚ್ಚಲ ಶತಕ ಸಿಡಿಸಿದ್ದರು.
ರಹಾನೆ ಭಾರತ ಕ್ರಿಕೆಟ್‌ ತಂಡದ ಮಧ್ಯಮ ಸರದಿಯ ಬ್ಯಾಟಿಂಗ್‌ನ ಬೆನ್ನಲುಬು ಆಗಿದ್ದಾರೆ. ಎಲ್ಲ ವಿಧದ ಕ್ರಿಕೆಟ್‌ನಲ್ಲೂ  ವಿದೇಶಿ ನೆಲದಲ್ಲಿ  ಯಾವುದೇ ಪರಿಸ್ಥಿತಿಯಲ್ಲೂ ಚೆನ್ನಾಗಿ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ರಹಾನೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News