ರಾಜಕೀಯ ಘರ್ಷಣೆ - ಪೊಲೀಸ್ ಬಂದೋಬಸ್ತ್ನಲ್ಲಿ ಮೊದಲ ಟ್ರಿಪ್ !
ಸುಳ್ಯ, ಮೇ 3: ಕೋಲ್ಚಾರು-ಬಂದಡ್ಕ ರಸ್ತೆ ಅಭಿವೃದ್ಧಿಗೊಂಡ ಹಿನ್ನೆಲೆಯಲ್ಲಿ ಇದುವರೆಗೆ ಕೋಲ್ಚಾರುವರೆಗೆ ಓಡಾಟ ನಡೆಸುತ್ತಿದ್ದ ಕರ್ನಾಟಕ ಸರಕಾರಿ ಬಸ್ ಇನ್ನು ಮುಂದೆ ಗಡಿ ಪ್ರದೇಶವಾದ ಕನ್ನಡಿತೋಡುವರೆಗೆ ಸಂಚರಿಸಲಿದ್ದು, ಮಂಗಳವಾರದಿಂದ ಆರಂಭಗೊಂಡಿದೆ.
ಆದರೆ ಓಡಾಟಕ್ಕೆ ಚಾಲನೆ ನೀಡುವ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಮೊದಲ ಟ್ರಿಪ್ ಪೊಲೀಸ್ ಬಂದೋಬಸ್ತ್ನಲ್ಲಿ ಸಂಚರಿಸುವಂತಾಯಿತು.
ಕೋಲ್ಚಾರು-ಬಂದಡ್ಕ ರಸ್ತೆ 3 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದಿದ್ದು, ಇತ್ತೀಚೆಗಷ್ಟೇ ಇದರ ಉದ್ಘಾಟನೆ ನಡೆದಿತ್ತು. ಈ ರಸ್ತೆಯಲ್ಲಿ ಬಸ್ ಸಂಚಾರ ಆಗಬೇಕೆಂಬುದು ಎರಡೂ ಪ್ರದೇಶಗಳ ಜನರ ಬೇಡಿಕೆಯಾಗಿತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಥಳಕ್ಕೆ ಬಂದಿದ್ದ ಸಚಿವ ರಮಾನಾಥ ರೈ ಅವರಿಗೂ ಜನರು ಮನವಿ ಸಲ್ಲಿಸಿದ್ದರು.
ಈ ಸಂದರ್ಭ ಕೆಎಸ್ಆರ್ಟಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಚಿವರು ಬಳಿಕ ಈ ಕುರಿತು ಪ್ರಯತ್ನಿಸಲು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡರಿಗೆ ಸೂಚಿಸಿದ್ದರು.
ಸುಳ್ಯದಿಂದ ಕೋಲ್ಚಾರುವರೆಗೆ ಓಡಾಟ ನಡೆಸುತ್ತಿದ್ದ ಕೆಲವು ಟ್ರಿಪ್ ಬಸ್ಗಳು ಇನ್ನು ಮುಂದೆ ಗಡಿ ಪ್ರದೇಶವಾದ ಕನ್ನಡಿತೋಡುವರೆಗೆ ಸಂಚಾರ ನಡೆಸಲು ಆದೇಶವು ಸೋಮವಾರ ಸಂಜೆ ಸುಳ್ಯಕ್ಕೆ ತಲುಪಿತ್ತು. ಇದಕ್ಕಾಗಿ ಪ್ರಯತ್ನಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡರ ನೇತೃತ್ವದಲ್ಲಿ ಮೊದಲ ಸಂಚಾರಕ್ಕೆ ಹಸಿರು ನಿಶಾನೆ ನೀಡುವ ಕಾರ್ಯಕ್ರಮದ ಸಿದ್ದತೆ ನಡೆದಿತ್ತು. ಕೋಲ್ಚಾರು ಮತ್ತು ಬಂದಡ್ಕದ ಕೆಲವು ಧುರೀಣರು ಇದಕ್ಕಾಗಿ ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. 9-30ರ ಮೊದಲ ಟ್ರಿಪ್ ಬಸ್ಗೆ ಅವರೆಲ್ಲಾ ಹೂಹಾರ ಹಾಕಿ ಬಸ್ ಎದರುಗಡೆ ಕೇಸರಿ ಬಿಳಿ ಹಸಿರು ಬಣ್ಣದ ರಿಬ್ಬನ್ಗಳನ್ನು ಅಂಟಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೆಂಕಪ್ಪ ಗೌಡರು ಬಳಿಕ ಬಸ್ ಚಾಲಕನಿಗೆ ಹಸ್ತಲಾಘವ ಹಾಗೂ ಸಿಹಿ ತಿಂಡಿ ತಿನ್ನಿಸಿ ಚಾಲನೆ ನೀಡಿದರು. ಆ ವೇಳೆಗಾಗಲೇ ಬಸ್ ನಿಲ್ದಾಣಕ್ಕೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸುಳ್ಯ ನಗರ ಬಿಜೆಪಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸುದರ್ಶನ ಪಾತಿಕಲ್ಲು, ಸೀತಾರಾಮ ಕೊಲ್ಲರಮೂಲೆ ಮತ್ತಿತರ ಕೆಲವು ಬಿಜೆಪಿ ಮುಖಂಡರು ಆಗಮಿಸಿ ಟಿಸಿ ಪಾಯಿಂಟ್ ಬಳಿ ನಿಂತಿದ್ದರು. ಬಸ್ಗೆ ಚಾಲನೆ ನೀಡುವ ಸಂದರ್ಭ ಶಾಸಕರು ಬಂದು ಚಾಲನೆ ನೀಡುತ್ತಾರಂತೆ ಎಂಬ ಮಾಹಿತಿ ವೆಂಕಪ್ಪ ಗೌಡರಿಗೆ ಬಂದಾಗ ರಮಾನಾಥ ರೈ ಅವರ ಪ್ರಯತ್ನದಿಂದ ಆದ ಬಸ್, ನಾವು ಚಾಲನೆ ನೀಡಿದ್ದೇವೆ ಎಂದು ಹೇಳುತ್ತಾ ಸರಕಾರಕ್ಕೆ ಮತ್ತು ರಮಾನಾಥ ರೈಗಳಿಗೆ ಘೋಷಣೆ ಕೂಗಿದರು. ಬಳಿಕ ಕಾರ್ಯಕರ್ತರೊಬ್ಬರು ಕಾಂಗ್ರೆಸ್ ಧ್ವಜವನ್ನು ಅವರ ಕೈಯಲ್ಲಿ ನೀಡಿದಾಗ ಅದನ್ನು ಹಿಡಿದು ಜೈಕಾರ ಹಾಕಿದರು.
ಚಕಮಕಿ:
ಈ ವೇಳೆಗೆ ಅಲ್ಲಿಗೆ ಬಂದ ಸುದರ್ಶನ ಪಾತಿಕಲ್ಲು ಇದು ಕಾಂಗ್ರೆಸ್ ಬಸ್ಲ್ಲ, ಶಾಸಕರು ಬಂದು ಚಾಲನೆ ನೀಡಬೇಕು, ಅಲ್ಲಿಯವರೆಗೆ ಬಸ್ ಹೋಗುವುದು ಬೇಡ ಎಂದು ಚಾಲಕನನ್ನು ಉದ್ದೇಶಿಸಿ ಹೇಳಿದರು. ಅಲ್ಲದೆ ಸುದರ್ಶನ್, ವಿನಯ ಕಂದಡ್ಕ ಮತ್ತಿತರ ಕೆಲವರು ಬಸ್ಗೆ ಅಡ್ಡವಾಗಿ ನಿಂತರು. ಆಗ ಅಲ್ಲಿಗೆ ಬಂದ ಪ್ರಕಾಶ್ ಹೆಗ್ಡೆಯವರಿಗೂ ವೆಂಕಪ್ಪ ಗೌಡ, ಸತ್ಯಪ್ರಸಾದ್ ಆಡಿಂಜ ಮತ್ತಿತರಿಗೂ ಚಕಮಕಿ ನಡೆಯಿತು. ಇದನ್ನು ಗಮನಿಸಿದ ಬಂದಡ್ಕದಿಂದ ಬಂದ ಕೆಲವು ಮುಖಂಡರು ಊರಿನ ಉಪಕಾರಕ್ಕಾಗಿ ಬಸ್ ಸಂಚಾರ ಆಗಿದೆ. ನೀವು ಅಡ್ಡಿಪಡಿಸುವುದಿದ್ದರೆ ಬಸ್ಸೇ ಬೇಡ ಎಂದರು.
"ಬಸ್ಗೆ ಕಾಂಗ್ರೆಸ್ ಧ್ವಜ ಹಾಕಿದ್ದು ಸರಿಯಲ್ಲ. ಅದನ್ನು ತೆಗೆದು ಬಸ್ ಕೋಲ್ಚಾರುವರೆಗೆ ಹೋಗಲಿ, 12 ಗಂಟೆಗೆ ಶಾಸಕರು ಬಂದು ಬಸ್ಸು ಉದ್ಘಾಟನೆ ಮಾಡಲಿ "ಎಂದು ಪ್ರಕಾಶ್ ಹೆಗ್ಡೆ ಹೇಳಿದರೆ, ಇದು ಶಾಸಕರ ಪ್ರಯತ್ನದಿಂದಾಗಲಿ, ಅವರ ಅನುದಾನದಿಂದಾಗಲಿ ಆದದ್ದಲ್ಲ. ರಮಾನಾಥ ರೈ ಅವರ ಪ್ರಯತ್ನದಿಂದಲೇ ಆದದ್ದು, ಬೇಕಿದ್ದರೆ ನೆಲ ಮುಟ್ಟಿ ಪ್ರಮಾಣ ಮಾಡುತ್ತೇನೆ ಎನ್ನುತ್ತಾ ನೆಲ ಮುಟ್ಟಿ ಹೇಳಿದರಲ್ಲದೆ ಬಸ್ಗೆ ಹಾಕಲಾಗಿರುವುದು ಕಾಂಗ್ರೆಸ್ ಧ್ವಜ ಅಲ್ಲ, ತ್ರಿವರ್ಣ ಇರುವ ರಿಬ್ಬನ್ ಅಷ್ಟೆ, ನಾವು ಉದ್ಘಾಟನಾ ಕಾರ್ಯಕ್ರಮವನ್ನೇನೂ ಮಾಡಿಲ್ಲ, ಕಾಂಗ್ರೆಸ್ ಧ್ವಜ ಬೀಸಿ ಚಾಲನೆ ನೀಡಿಯೂ ಇಲ್ಲ. ನಿಮ್ಮ ಆಕ್ಷೇಪದ ನಂತರ ಧ್ವಜ ಎತ್ತಿ ಬೀಸಿದ್ದೇವೆ ಎಂದರು.
ಆ ವೇಳೆಗಾಗಲೇ ಸುಳ್ಯ ಎಸ್ಐ ಚಂದ್ರಶೇಖರ ಸಹಿತ ಪೊಲೀಸರು ಸ್ಥಳಕ್ಕೆ ಬಂದರು. ಇತ್ತಂಡದವರೂ ಅವರಲ್ಲಿ ತಮ್ಮ ವಿಚಾರ ಹೇಳಿಕೊಂಡರು. ಬಸ್ ನಿಲ್ದಾಣದಲ್ಲಿ ಚರ್ಚೆ ಮಾಡುತ್ತಾ ಅಡ್ಡಿ ಆಡುವುದು ಸರಿಯಲ್ಲ. ಇದರಿಂದ ತೊಂದರೆ ಅನುಭವಿಸುವುದು ಕೋಲ್ಚಾರಿನ ಜನತೆ ಎಂದು ಎಸ್ಐ ಹೇಳಿದರು. ಬಳಿಕವೂ ಬಹಳ ಹೊತ್ತು ಮಾತುಕತೆ ಮುಂದುವರಿಯಿತು. ವೆಂಕಪ್ಪ ಗೌಡ ಮತ್ತು ಪ್ರಕಾಶ್ ಹೆಗ್ಡೆ ಕೂಡಾ ಪರಸ್ಪರ ಮಾತನಾಡಿಕೊಂಡರು. ಕೊನೆಗೆ ಎರಡೂ ಕಡೆಯವರಿದ್ದು ಬಸ್ ಕೋಲ್ಚಾರಿನತ್ತ ಹೊರಟಿತು. ಮುಂಜಾಗರೂಕತಾ ಕ್ರಮವಾಗಿ ಇಬ್ಬರು ಪೊಲೀಸರು ಬಸ್ನಲ್ಲಿ ಹೋದರು.