ಕಂಗೆಟ್ಟಿರುವ ಉಳ್ಳಾಲದಲ್ಲಿ ಹತ್ಯೆಗೀಡಾದ ರಾಜು, ಸೈಫಾನ್ ಕುಟುಂಬಗಳು

Update: 2016-05-03 16:25 GMT

ಮಂಗಳೂರು, ಮೆ.3: ಉಳ್ಳಾಲದಲ್ಲಿ ದುಷ್ಕರ್ಮಿಗಳ ಕುಕೃತ್ಯಕ್ಕೆ ಬಲಿಯಾದ ರಾಜು ಕೋಟ್ಯಾನ್ ಹಾಗೂ ಸೈಫಾನ್‌ರ ಕುಟುಂಬಗಳು ಕುಟುಂಬದ ಆಧಾರಸ್ತಂಭಗಳನ್ನು ಕಳೆದುಕೊಂಡು ಕಂಗೆಟ್ಟಿವೆ. ಈಗಾಗಲೆ ಸಾಕಷ್ಟು ಕಷ್ಟನಷ್ಟವನ್ನು ಅನುಭವಿಸಿರುವ ಕುಟುಂಬದ ಸದಸ್ಯರು, ಸರಕಾರದ ಪ್ರತಿನಿಧಿಗಳು ನೀಡಿರುವ ಭರವಸೆಯಂತೆ ಪರಿಹಾರವು ಸಕಾಲದಲ್ಲಿ ದೊರೆತರೆ ಸಹಾಯವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಎ.12ರಂದು ಮೊಗವೀರ ಪಟ್ಣದ ನಿವಾಸಿ ರಾಜು ಕೋಟ್ಯಾನ್ ಮೀನುಗಾರಿಕೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಮೃತಪಟ್ಟಿದ್ದರು. ಎ.25ರಂದು ಉಳ್ಳಾಲ ಓವರ್ ಬ್ರಿಡ್ಜ್ ಬಳಿ ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೀಡಾಗಿ ಪಿಲಾರು ಪೆರ್ಮನ್ನೂರು ಗ್ರಾಮದ ಅಲಿಮಮ್ಮ ಕಂಪೌಂಡ್‌ನ ನಿವಾಸಿ ಮುಹಮ್ಮದ್ ಸೈಫ್ವಾನ್ ಮೃತಪಟ್ಟಿದ್ದರು. ಮೃತಪಟ್ಟ ಇಬ್ಬರ ಕುಟುಂಬಗಳು ಕೂಡಾ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಾಗಿವೆ.

‘‘ನನ್ನ ಅಣ್ಣ ರಾಜು ಕೋಟ್ಯಾನ್ ಮೃತಪಟ್ಟು 22ದಿನಗಳಾದರೂ ಈವರೆಗೆ ನಮ್ಮ ಕುಟುಂಬಕ್ಕೆ ಸರಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ. ಅಣ್ಣನನ್ನು ಕಳೆದುಕೊಂಡ ದು:ಖ ಒಂದೆಡೆಯಾದರೆ, ಆರ್ಥಿಕ ಸಂಕಷ್ಟವೂ ನಮ್ಮನ್ನು ಕಂಗೆಡಿಸಿದೆ. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ನಮ್ಮಿಂದ ದೂರವಾಗಿದ್ದಾರೆ. ಸಂಕಷ್ಟದಲ್ಲಿರುವ ನಮ್ಮ ಕುಟುಂಬಕ್ಕೆ ಸರಕಾರದಿಂದ ಸಕಾಲದಲ್ಲಿ ಆರ್ಥಿಕ ಸಹಾಯ ದೊರೆತರೆ ಉಪಕಾರವಾಗಬಹುದು’’ಎಂದು ರಾಜು ಕೋಟ್ಯಾನ್‌ರ ಸಹೋದರ ಶಿಶುಪಾಲ ವಾರ್ತಾಭಾರತಿಗೆ ತಿಳಿಸಿದ್ದಾರೆ.

 ‘‘ಮುಹಮ್ಮದ್ ಸೈಫ್ವಾನ್ ನನ್ನ ತಂಗಿಯ ಮಗ. ಅವರು ಆರ್ಥಿಕವಾಗಿ ಸಾಕಷ್ಟು ತೊಂದರೆಯಲ್ಲಿದ್ದಾರೆ. ಮನೆಯ ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಹಗಲು ವೆಲ್ಡಿಂಗ್ ಕೆಲಸ ಮುಗಿಸಿ ಬಳಿಕ ಕ್ಯಾಟರಿಂಗ್ ಕೆಲಸಕ್ಕೆ ಹೋದರೆ 200, 300 ರೂ. ಸಿಗುತ್ತದೆ ಎಂದು ರಾತ್ರಿ ಕೆಲಸಕ್ಕೆ ಹೋದ ಹುಡುಗನನ್ನು ಈ ರೀತಿ ಕೊಲೆ ಮಾಡುತ್ತಾರೆ ಎಂದು ನಾವು ಊಹಿಸಲು ಸಾಧ್ಯವಿಲ್ಲ. ಆ ದು:ಖದಿಂದ ಇನ್ನೂ ನಾವು ಚೇತರಿಸಿಕೊಂಡಿಲ್ಲ. ಸೈಫ್ವಾನ್‌ನ ಕುಟುಂಬ ಪೆರ್ಮನ್ನೂರಿನ ಒಂದು ಸಣ್ಣ ಹಂಚಿನ ಮನೆಯಲ್ಲಿ ವಾಸವಾಗಿದೆ. ಅದು ಅವರ ಸ್ವಂತ ಮನೆಯಲ್ಲ. ಕುಟುಂಬದ 15 ಸೆಂಟ್ಸ್‌ನ ಸಣ್ಣ ಸ್ಥಳ ವಿಭಾಗವಾದ ಬಳಿಕ ಕುಟುಂಬದವರ ಒಪ್ಪಿಗೆಯಿಂದ ಅಲ್ಲಿ ವಾಸವಾಗಿದ್ದಾರೆ. ಈ ಮನೆಯಲ್ಲಿ ಉತ್ತಮ ಶಿಕ್ಷಣ ಪಡೆದವರು ಇದ್ದಾರೆ. ಅವರಲ್ಲಿ ಯಾರಿಗಾದರೂ ಸರಕಾರ ಉದ್ಯೋಗವನ್ನು ನೀಡಿದರೆ ಅನುಕೂಲವಾಗುತ್ತದೆ. ಸಚಿವರು ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಸರಕಾರದ ಸಹಾಯ ಸಿಕ್ಕರೆ ಸಂಕಷ್ಟಕ್ಕೀಡಾಗಿರುವ ಕುಟುಂಬಕ್ಕೆ ಆಧಾರವಾದೀತು’’ ಎಂದು ಸೈಫ್ವಾನ್‌ರ ತಾಯಿಯ ಅಣ್ಣ ಕೆ.ಬಾವ ವಾರ್ತಾಭಾರತಿಗೆ ತಿಳಿಸಿದ್ದಾರೆ.

ದುಷ್ಕಮಿಗಳ ಕೃತ್ಯಕ್ಕೆ ಬಲಿಯಾಗುತ್ತಿರುವ ಅಮಾಯಕರು: 

ಉಳ್ಳಾಲದ ಕಡಲ್ಕೊರೆತದಿಂದ ತೊಂದರೆಗೊಳಗಾಗುತ್ತಿರುವ ಮೊಗವೀರ ಪಟ್ಣದಲ್ಲಿ ತನ್ನ ಪತ್ನಿ ಸವಿತಾ ಹಾಗೂ ಅಣ್ಣ ಶಿಶುಪಾಲರ ಜೊತೆ ರಾಜು ಕೋಟ್ಯಾನ್ ವಾಸಿಸುತ್ತಿದ್ದರು. ‘‘ನನ್ನ ಅಣ್ಣ ರಾಜು ಕೊಟ್ಯಾನ್‌ಗೆ ಹೆಚ್ಚಿನ ಶಿಕ್ಷಣ ಇಲ್ಲ. ಆತ ಚಿಕ್ಕಂದಿನಲ್ಲಿ ಮುಂಬೈನಲ್ಲಿ ಮೂರನೆ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ. ಬಳಿಕ ಅಲ್ಲಿ ಆತನನ್ನು ಸರಿಯಾಗಿ ನೋಡಿಕೊಳ್ಳುವವರೂ ಇಲ್ಲದ ಕಾರಣ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿ ಇಲ್ಲದ್ದರಿಂದ ಊರಿಗೆ ಬರಬೇಕಾಯಿತು. ಕಳೆದ 20 ವರ್ಷಗಳಿಂದ ಇಲ್ಲಿ ಮೀನುಗಾರಿಕೆಗೆ ಹೋಗುತ್ತಿದ್ದ. ಎ.12ರಂದು ರಾತ್ರಿ ಸುಮಾರು 2 ಗಂಟೆಯ ಹೊತ್ತಿಗೆ ಮನೆಯಿಂದ 1 ಕಿ.ಮೀ. ದೂರದ ಧಕ್ಕೆಗೆ ಹೋಗಲು ಹೊರಟ ಸಂದರ್ಭ ಉಳ್ಳಾಲ ಕೋಡಿ ಎಂಬಲ್ಲಿ ದಾರಿಯ ನಡುವೆ ಆತನ ಮೇಲೆ ಹಲ್ಲೆ ನಡೆಸಿ ಕೊಲೆಮಾಡಿದ್ದಾರೆ. ಆತನನ್ನು ಅವರು ಏಕೆ ಕೊಂದಿದ್ದಾರೆ ಎಂದು ಇಂದಿಗೂ ನಮಗೆ ಅರ್ಥವಾಗಿಲ್ಲ. ಆತ ಯಾರಿಗೂ ತೊಂದರೆ ಕೊಡುವವರ ಕೂಟದಲ್ಲಿ ಇರಲಿಲ್ಲ. ಮನೆಯ ಆರ್ಥಿಕ ಸಂಕಷ್ಟದ ನಿವಾರಣೆಗಾಗಿ ದಿನಾ ದುಡಿಯುವುದನ್ನು ಬಿಟ್ಟು ಬೇರೆ ಯಾವ ಚಟುವಟಿಕೆಗಳಲ್ಲೂ ಇರಲಿಲ್ಲ. ಅಂತವರಿಗೆ ಹೀಗಾದರೆ ಹೇಗೆ ಸಹಿಸಿಕೊಳ್ಳುವುದು’’ಎಂದು ಅಣ್ಣ ನನ್ನು ಕಳೆದುಕೊಂಡ ತಮ್ಮ ಶಿಶುಪಾಲ ವಾರ್ತಾಭಾರತಿಯೊಂದಿಗೆ ತಮ್ಮ ಸಂಕಟವನ್ನು ತೋಡಿಕೊಂಡರು.

‘‘ಮುಹಮ್ಮದ್ ಸೈಫ್ವಾನ್ ಒಳ್ಳೆಯ ಹುಡುಗ ಎಂದು ಗುರುತಿಸಿಕೊಂಡಿದ್ದ. ಆತ ಯಾರ ತಂಟೆಗೂ ಹೋದವನಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು ತನ್ನ ಪಾಡಿಗೆ ತಾನಿದ್ದ.ಉಳ್ಳಾಲದಲ್ಲಿ ಐಟಿಐ ಶಿಕ್ಷಣ ಪಡೆದು ವೆಲ್ಡಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ. ಈ ನಡುವೆ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲೂ ಬಿಡುವಿದ್ದಾಗ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ ಸ್ವಲ್ಪ ಹಣ ಸಂಪಾದಿಸಿ ಕುಟುಂಬಕ್ಕೆ ನೆರವಾಗುತ್ತಿದ್ದ. ಅದೇ ರೀತಿ ಈಗಲೂ ಕ್ಯಾಟರಿಂಗ್ ಕೆಲಸಕ್ಕೆ ಕರೆದರೆ ಸ್ವಲ್ಪ ಹಣ ಸಂಪಾದನೆಯಾಗುತ್ತದೆ ಎಂದು ದುಡಿಯಲು ಹೋಗುತ್ತಿದ್ದ. ಎ.25ರಂದು ಆತ ಬಬ್ಬುಕಟ್ಟೆಗೆ ವೆಲ್ಡಿಂಗ್ ಕೆಲಸಕ್ಕೆ ಹೋಗಿ ಸಂಜೆ 6 ಗಂಟೆಗೆ ಮನೆಗೆ ಬಂದಿದ್ದಾನೆ. ಬಳಿಕ ರಾತ್ರಿ ಸುಮಾರು 7:30ರ ಹೊತ್ತಿಗೆ ಉಳ್ಳಾಲದ ಮದಕ ಎಂಬಲ್ಲಿ ಮದುವೆ ಮನೆಯ ಡಿನ್ನರ್ ಪಾರ್ಟಿಯ ಕ್ಯಾಟರಿಂಗ್ ಕೆಲಸಕ್ಕೆ ಕರೆ ಬಂತು. ಅದಕ್ಕಾಗಿ ಮನೆಯಿಂದ ಹೋಗಿದ್ದಾನೆ. ಅಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಸಾಮಗ್ರಿಗಳನ್ನು ಸಾಗಿಸಿ ಮನೆಗೆ ಬರುವಾಗ ರಾತ್ರಿ 12 ಗಂಟೆಯಾಗಿತ್ತು. ಅಲ್ಲಿಂದ ಬೈಕ್‌ನಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಏರು ರಸ್ತೆಯಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. ಆತ ಯಾವ ಗಲಾಟೆಯಲ್ಲೂ ಇದ್ದವನಲ್ಲ, ಮನೆಯಲ್ಲಿ ಮೂರು ಹೆಣ್ಣು ಮಕ್ಕಳು, ಒಬ್ಬ ಹುಡುಗ. ಶಾಲೆ, ಕಾಲೇಜಿಗೆ ಹೋಗುತ್ತಿದ್ದಾರೆ. ಸೈಪ್ವಾನ್ ನನ್ನ ತಂಗಿ ಶಾಹಿದಾಳ ಮೂರು ಗಂಡು ಮಕ್ಕಳ ಪೈಕಿ ಮೂರನೆಯವ. ಕುಟುಂಬಕ್ಕೆ ಆಧಾರವಾಗಿದ್ದ ಅವನನ್ನು ಕಳೆದುಕೊಂಡ ನೋವು ನಮ್ಮನ್ನು ಬಾಧಿಸುತ್ತಿದೆ. ಕೆಲಸಕ್ಕೆ ಹೋಗುವವರಿಗೆ ಈ ರೀತಿಯಾದರೆ ನಮಗೆ ರಕ್ಷಣೆ ನೀಡುವವರು ಯಾರು ಎಂದು ಸೈಫ್ವಾನ್‌ರ ಕುಟುಂಬದ ಹಿರಿಯ ಸದಸ್ಯ ಕೆ.ಬಾವ ವಾರ್ತಾಭಾರತಿಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News